ಬೆಂಗಳೂರು:
ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಕಾಫಿಫೋಸಾ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಜಾಮೀನು ಪಡೆಯುವ ಅವಕಾಶವೇ ಇಲ್ಲದಂತಾಗಿದೆ.
ರನ್ಯಾ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯನ್ನು (ಕಾಫಿಫೋಸಾ) ಜಾರಿ ಮಾಡಲಾಗಿದ್ದು, ಈ ವಿಷಯವನ್ನು ನಿರ್ವಹಿಸುವ ಸಲಹಾ ಮಂಡಳಿಯು ಇತ್ತೀಚೆಗೆ ರನ್ಯಾ ರಾವ್ ಅವರಿಗೆ ಅವರ ಬಂಧನದ ಸಂಪೂರ್ಣ ಅವಧಿಯಲ್ಲಿ ಜಾಮೀನು ನೀಡಲಾಗುವುದಿಲ್ಲ ಎಂದು ತೀರ್ಪು ನೀಡಿದೆ.
ಕಾಫಿಫೋಸಾ ಕಾಯ್ದೆಯ ಅಡಿಯಲ್ಲಿ ರನ್ಯಾ ರಾವ್ ಹಾಗೂ ಇತರ ಆರೋಪಿಗಳು ಒಂದು ವರ್ಷ ಜೈಲಿನಿಂದ ಹೊರಬರುವ ಹಾಗಿಲ್ಲ. ಈ ಕುರಿತು ಕಾಫಿಫೋಸಾ ಸಲಹಾ ಮಂಡಳಿಯು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದೆ. ಅದರಂತೆ ಜೈಲು ಅಧೀಕ್ಷಕರಿಗೂ ಮಾಹಿತಿ ರವಾನೆ ಮಾಡಲಾಗಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ನಿಗಧಿತ ಸಮಯದೊಳಗೆ ಆರೋಪಪಟ್ಟಿ ಸಲ್ಲಿಸದ ಕಾರಣಕ್ಕೆ, ಮೇ 20 ರಂದು ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ರನ್ಯಾ ಮತ್ತು ಸಹ-ಆರೋಪಿ ತರುಣ್ ರಾಜು ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
2 ಲಕ್ಷ ರೂ. ಮೊತ್ತದ ಬಾಂಡ್ ಮತ್ತು ಎರಡು ಶ್ಯೂರಿಟಿಗಳನ್ನು ಒಳಗೊಂಡ ಷರತ್ತುಗಳ ಮೇಲೆ ಜಾಮೀನು ನೀಡಲಾಗಿದ್ದರೂ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಅವರ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ (ಸಿಇಐಬಿ) ‘ಕಾಫಿಫೋಸಾ’ ಕಾಯ್ದೆ ಅಢಿ ಬಂಧನದ ಆದೇಶ ಹೊರಡಿಸಿರುವ ಕಾರಣಕ್ಕೆ ಒಂದು ವರ್ಷದವರೆಗೆ ಬಿಡುಗಡೆಗೆ ಅವಕಾಶ ಇಲ್ಲದಂತಾಗಿದೆ.
ದುಬೈನಿಂದ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಮಾರ್ಚ್ 3ರಂದು ಡಿಆರ್ಐ ಅಧಿಕಾರಿಗಳು ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ಚಿನ್ನ ಕಳ್ಳಸಾಗಣೆಗೆ ನೆರವು ನೀಡಿದ್ದ ಆರೋಪದ ಮೇರೆಗೆ ರಾಜು ಹಾಗೂ ಸಾಹಿಲ್ ಜೈನ್ ಅವರನ್ನೂ ಬಂಧಿಸಲಾಗಿತ್ತು.
ರನ್ಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಈ ಹಿಂದೆ ಸ್ಥಳೀಯ ನ್ಯಾಯಾಲಯಗಳು ಮತ್ತು ನಂತರ ಕರ್ನಾಟಕ ಹೈಕೋರ್ಟ್ ಎರಡು ಬಾರಿ ತಿರಸ್ಕರಿಸಿದವು.
ಚಿನ್ನ ಕಳ್ಳಸಾಗಣೆ ಮತ್ತು ಇತರ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪ ಹೊತ್ತ ವ್ಯಕ್ತಿಗಳನ್ನು ಕಾಫಿಫೋಸಾ ಅಢಿಯಲ್ಲಿ ಬಂಧಿಸಲಾಗುತ್ತದೆ. ಕಾಫಿಫೋಸಾ ಅಡಿಯಲ್ಲಿ ಬಂಧನಕ್ಕೊಳಗಾದ ವ್ಯಕ್ತಿಗಳನ್ನು ಕನಿಷ್ಠ 3 ತಿಂಗಳಿಂದ 1 ವರ್ಷದವರೆಗೆ ಜೈಲಿನಲ್ಲಿ ಇರಿಸಬಹುಗು. ತೀರಾ ಗಂಭೀರ ಪ್ರಕರಣಗಳಲ್ಲಿ ಇದನ್ನು ಎರಡು ವರ್ಷದವರೆಗೂ ವಿಸ್ತರಿಸಬಹುದು. ಈ ಕಾಯ್ದೆಯಡಿಯಲ್ಲಿ ಆರೋಪಿಗಳಿಗೆ ಜಾಮೀನು ಪಡೆಯಲು ಅವಕಾಶ ಇರುವುದಿಲ್ಲ. ಜಾಮೀನು ಪಡೆದರೂ ಈ ಅವಧಿಯಲ್ಲಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದಿಲ್ಲ.
