ಬೆಕೆನ್ಹ್ಯಾಮ್:
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ನಲ್ಲಿ ಜುಲೈ 23ರಿಂದ ಆರಂಭವಾಗಲಿರುವ ಇಂಗ್ಲೆಂಡ್ ತಂಡದ ವಿರುದ್ಧದ 4ನೇ ಟೆಸ್ಟ್ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸರಣಿ ಜೀವಂತವಿರಿಸಿಕೊಳ್ಳಬೇಕಿದ್ದರೆ ಗಿಲ್ ಪಡೆ ಈ ಪಂದ್ಯವನ್ನು ಗೆಲ್ಲಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕು. ಹೀಗಾಗಿ ಭಾರತದ ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ ಈ ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆಯಿದೆ ಎಂದು ಟೀಮ್ ಇಂಡಿಯಾದ ಸಹಾಯಕ ಕೋಚ್ ರಿಯಾನ್ ಟೆನ್ ಡೊಶಾಟ್ ಶುಕ್ರವಾರ ಸುಳಿವು ನೀಡಿದ್ದಾರೆ.
ಕಾರ್ಯದೊತ್ತಡದ ಕಾರಣಕ್ಕೆ ಬುಮ್ರಾ ಈ ಸರಣಿಯ 5 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಮಾತ್ರ ಆಡಲಿದ್ದಾರೆ. ಆದರೆ ನಾಲ್ಕನೇ ಪಂದ್ಯ ಸರಣಿ ನಿರ್ಣಾಯಕವೆನಿಸಿದ ಕಾರಣ ಬುಮ್ರಾ ಅವರನ್ನು ಈ ಪಂದ್ಯದಲ್ಲಿ ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ಬಯಸಿದೆ ಎನ್ನಲಾಗಿದೆ.‘‘ನಾವು ಕೊನೆಯ ಎರಡು ಟೆಸ್ಟ್ ಪಂದ್ಯಗಳ ಪೈಕಿ ಒಂದರಲ್ಲಿ ಬುಮ್ರಾರನ್ನು ಆಡಿಸಲಿದ್ದೇವೆ. ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆಯಿದೆ. ಆದರೆ ನಾವು ಮತ್ತೊಮ್ಮೆ ಎಲ್ಲ ಅಂಶಗಳನ್ನು ನೋಡಲಿದ್ದೇವೆ’’ ಎಂದು ಡೊಶಾಟ್ ಹೇಳಿದರು.
ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಅಭ್ಯಾಸದ ವೇಳೆ ಕೈ ಬೆರಳಿನ ಗಾಯಕ್ಕೆ ತುತ್ತಾದರು. ಸಾಯಿ ಸುದರ್ಶನ್ ಬಾರಿಸಿದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಅರ್ಶ್ದೀಪ್ ಕೈಗೆ ಗಾಯವಾಯಿತು. ಹೀಗಾಗಿ ಅವರಿಗೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಗುವುದು ಅನುಮಾನ ಗಾಯದ ಸ್ವರೂಪದ ಬಗ್ಗೆ ಬಸಿಸಿಐ ಯಾವುದೇ ಮಾಹಿತಿ ನೀಡಿಲ್ಲ.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಕಸರತ್ತು ಆರಂಭಿಸಿರುವ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಆರಂಭಕ್ಕೂ ಮುನ್ನ ಡ್ರೆಸ್ಸಿಂಗ್ ಕೋಣೆಯಲ್ಲಿ ಭಗವಾನ್ ಹನುಮಂತನನ್ನು ಸ್ಮರಿಸುವ ಹನುಮಾನ್ ಚಾಲೀಸಾ ಪಠಣ ಮಾಡಿದ್ದು ವಿಶೇಷ ಎನಿಸಿತು.
