ಲಂಡನ್:
ಲಾರ್ಡ್ಸ್ ಟೆಸ್ಟ್ ಸೋಲಿನ ಬಳಿಕ 2 ದಿನಗಳ ವಿಶ್ರಾಂತಿ ಪಡೆದಿದ್ಧ ಭಾರತ ತಂಡ ಗುರುವಾರದಿಂದ ಅಭ್ಯಾಸ ಆರಂಭಿಸಿದೆ. ಬೆಕೆನ್ಹ್ಯಾಂ ಕೆಂಟ್ ಕೌಂಟಿ ಕ್ರಿಕೆಟ್ ಗ್ರೌಂಡ್ನಲ್ಲಿ ಆಟಗಾರರು ಅಭ್ಯಾಸಕ್ಕೂ ಮುನ್ನ ಡ್ರೆಸ್ಸಿಂಗ್ ಕೋಣೆಯಲ್ಲಿ ಭಗವಾನ್ ಹನುಮಂತನನ್ನು ಸ್ಮರಿಸುವ ಹನುಮಾನ್ ಚಾಲೀಸಾ ಪಠಣ ಮಾಡಿದ್ದು ವಿಶೇಷ ಎನಿಸಿತು. ಹನುಮಾನ್ ಚಾಲೀಸಾ ಮಾತ್ರವಲ್ಲೆ ಇಂಗ್ಲಿಷ್, ಪಂಜಾಬಿ ಸೇರಿ ವಿವಿಧ ಹಾಡುಗಳು ಕೇಳಿಬಂದವು.
ಮೊದಲ ದಿನ ಕನ್ನಡಿಗ ರಾಹುಲ್ ಹೊರತಾಗಿ ಉಳಿದ ಎಲ್ಲ ಆಟಗಾರರು ಅಭ್ಯಾಸದಲ್ಲಿ ಭಾಗಿಯಾಗಿದ್ದರು. ಶುಕ್ರವಾರ ಭಾರತೀಯ ಆಟಗಾರರು ಮತ್ತೆ ವಿಶ್ರಾಂತಿ ಪಡೆದಿದ್ದು ಶನಿವಾರ ಮ್ಯಾಜೆಂಸ್ಟರ್ಗೆ ಪ್ರಯಾಣಿಸಲಿದ್ದಾರೆ. ಭಾನುವಾರದಿಂದ ಓಲ್ಡ್ ಟ್ರಾಫರ್ಡ್ನಲ್ಲಿ ಅಭ್ಯಾಸ ನಡೆಸಲಿದ್ದಾರೆ.
ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ಮ್ಯಾಂಚೆಸ್ಟರ್ನಲ್ಲಿ ಕೇವಲ ಬ್ಯಾಟಿಂಗ್ ಮಾತ್ರ ನಡೆಸುವ ಸಾಧ್ಯತೆ ಇದೆ. ಲಾರ್ಡ್ಸ್ ಟೆಸ್ಟ್ನ ಮೊದಲ ದಿನದಾಟದ ವೇಳೆ ಪಂತ್ ಬೆರಳಿಗೆ ಗಾಯವಾಗಿತ್ತು. ಇದರ ಪರಿಣಾಮವಾಗಿ, ಮೊದಲ ಇನ್ನಿಂಗ್ಸ್ನಲ್ಲಿ 34 ಓವರ್ಗಳ ನಂತರ ಅವರು ಕೀಪಿಂಗ್ ಮಾಡಲಿಲ್ಲ. ಧ್ರುವ್ ಜುರೆಲ್ ಕೀಪಿಂಗ್ ನಡೆದಿದ್ದರು. ನಾಲ್ಕನೇ ಟೆಸ್ಟ್ನಲ್ಲಿಯೂ ಧ್ರುವ್ ಜುರೆಲ್ ಕೀಪಿಂಗ್ ಮಾಡುವ ಸಾಧ್ಯತೆ ಇದೆ.
