ಮುಂಬಯಿ:
ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ನಿಗದಿತ ಪಂದ್ಯಕ್ಕೆ ಶಿವ ಸೇನಾ ನಾಯಕ ಆದಿತ್ಯ ಠಾಕ್ರೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೇಂದ್ರ ಕೀಡಾ ಸಚಿವ ಮನಸುಖ್ ಮಾಂಡವೀಯ ಅವರಿಗೆ ಪತ್ರ ಬರೆದಿದ್ದು, ಬಿಸಿಸಿಐ ರಾಷ್ಟ್ರೀಯ ಹಿತಾಸಕ್ತಿಗಿಂತಲೂ ಮಿಗಿಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಭದ್ರತಾ ಕಾರಣಗಳನ್ನು ನೀಡಿ ಭಾರತದಲ್ಲಿ ಹಾಕಿ ಆಡುವುದರಿಂದ ಪಾಕಿಸ್ತಾನ ಹಿಂದೆ ಸರಿದಾಗ ಬಿಸಿಸಿಐ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಪಾಕಿಸ್ತಾನ ವಿರುದ್ಧ ಆಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪಾಕ್ ವಿರುದ್ಧದ ಪಂದ್ಯ ನಮ್ಮ ಯೋಧರ ತ್ಯಾಗಕ್ಕಿಂತಲೂ ಮಿಗಿಲಾಗಿದೆಯೇ ? ಸಿಂಧೂರಕ್ಕಿಂತಲೂ ಮಿಗಿಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಪ್ರಚೋದನೆಯಿದೆ ಎಂದು ಜಗತ್ತಿನ ಎದುರು ಸಾಬೀತುಪಡಿಸಲು ಕೇಂದ್ರ ಸರ್ಕಾರ ಮತ್ತು ದೇಶವು ಹಲವು ಪ್ರಯತ್ನಗಳನ್ನು ಮಾಡಿದೆ. ಆದರೆ ಬಿಸಿಸಿಐ ಧೋರಣೆ ದೇಶವಿರೋಧಿಯಾಗಿದೆ ಎಂದು ಆದಿತ್ಯ ಕಿಡಿಕಾರಿದ್ದಾರೆ.
ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೊತ್ಸವ ದಿನಾಚರಣೆಯ ಭಾಷಣದ ವೇಳೆ ಪ್ರಧಾನಿ ಮೋದಿ ನೀರು ಹಾಗೂ ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಜಾಹೀರಾತು ಮೂಲಕ ಹಣ ಗಳಿಸುವ ಉದ್ದೇಶದಿಂದ ಬಿಸಿಸಿಐ ಆಪರೇಷನ್ ಸಿಂಧೂರ ಹಾಗೂ ಯೋಧರ ತ್ಯಾಗವನ್ನು ಮರೆತು ಪಾಕಿಸ್ತಾನ ವಿರುದ್ಧ ಆಡಲು ಮುಂದಾಗಿದೆ ಎಂದು ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ.








