ದುಬೈ:
ಏಷ್ಯಾಕಪ್ ಟಿ20 ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನವನ್ನು(IND vs PAK) 7 ವಿಕೆಟ್ ಅಂತರದಿಂದ ಮಣಿಸಿದ ಭಾರತ ತಂಡ ಮತ್ತೊಮ್ಮೆ ಪಾಕ್ ವಿರುದ್ಧ ಕಣಕ್ಕಿಳಿಯಲಿದೆ. ಮುಂದಿನ ಭಾನುವಾರ ನಡೆಯುವ ಸೂಪರ್-4 ಹಂತದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಕೂಡ ದುಬೈನಲ್ಲಿಯೇ ನಡೆಯಲಿದೆ. ಆದರೆ ಪಾಕ್ ತನ್ನ ಕೊನೆಯ ಪಂದ್ಯದಲ್ಲಿ ಯುಎಇ ವಿರುದ್ಧ ಸೋತರೆ ಈ ಮುಖಾಮುಖಿ ತಪ್ಪಲಿದೆ.
ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್-4 ಹಂತಕ್ಕೇರಲಿವೆ. ಇಲ್ಲೂ ಎಲ್ಲ ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿದ್ದು, ಅಂತಿಮವಾಗಿ ಅಗ್ರ 2 ತಂಡಗಳ ನಡುವೆ ಸೆ. 28ರಂದು ಫೈನಲ್ ಪಂದ್ಯ ನಡೆಯಲಿದೆ. ಉಭಯ ತಂಡಗಳು ಫೈನಲ್ಗೇರಿದರೆ ಸತತ ಮೂರನೇ ಭಾನುವಾರ ಕೂಡ ಭಾರತ-ಪಾಕ್ ಪಂದ್ಯ ನಡೆಯಲಿದೆ. ಸ್ವಾರಸ್ಯವೆಂದರೆ, ಏಷ್ಯಾ ಕಪ್ ಚರಿತ್ರೆಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಇಮ್ಮೆಯೂ ಫೈನಲ್ನಲ್ಲಿ ಮುಖಾಮುಖಿ ಆಗಿಲ್ಲ!.
ಇಲ್ಲಿನ ದುಬೈ ಇಂಟರ್ನ್ಯಾಷನಲ್ ಕ್ರಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಬೃಹತ್ ಮೊತ್ತ ಪೇರಿಸುವ ಮೂಲಕ ಭಾರತಕ್ಕೆ ಒತ್ತಡ ಹೇರುವ ಯೋಜನೆಯಲ್ಲಿತ್ತು. ಆದರೆ ಚೈನಾಮನ್ ಕುಲ್ದೀಪ್ ಯಾದವ್ ಸ್ಪಿನ್ ದಾಳಿಗೆ ಪತರಗುಟ್ಟಿದ ಪಾಕ್ 9 ವಿಕೆಟ್ಗೆ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 15.5 ಓವರ್ಗಳಲ್ಲಿ 3 ವಿಕೆಟ್ಗೆ 131 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಪಂದ್ಯದುದ್ದಕ್ಕೂ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಯಾವ ಹಂತದಲ್ಲೂ ಮಾತನಾಡಲಿಲ್ಲ. ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಅಲ್ಲದೆ ಪಂದ್ಯ ಬಳಿಕ ಭಾರತೀಯ ಆಟಗಾರರನ್ನು ಅಭಿನಂದಿಸಲು ಪಾಕ್ ಆಟಗಾರರು ಕಾದು ನಿಂತರು. ಆದರೆ ಡ್ರೆಸ್ಸಿಂಗ್ ರೂಂಗೆ ತೆರಳಿದ ಭಾರತೀಯರು ಬಾಗಿಲು ಬಂದ್ ಮಾಡಿ ಒಳಗೆ ಸೇರಿಕೊಂಡರು. ಬಹುಮಾನ ವಿತರಣೆ ವೇಳೆ ಪಾಕಿಸ್ತಾನ ಪರ ಪ್ರಾಯೋಜಕರಿಗೆ ಹ್ಯಾಂಡ್ಶೇಕ್ ಮಾಡಲು ಭಾರತ ಆಟಗಾರರು ಹತ್ತಿರವೂ ಸುಳಿಯಲಿಲ್ಲ.








