ನವದೆಹಲಿ:
ಇಲ್ಲಿನ ವಿವಿಧ ಪ್ರದೇಶಗಳ ಹಲವಾರು ಶಾಲೆಗಳಿಗೆ ಶನಿವಾರ ಮುಂಜಾನೆ ಫೋನ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇವುಗಳಲ್ಲಿ ಡಿಪಿಎಸ್ ದ್ವಾರಕಾ , ಕೃಷ್ಣ ಮಾಡೆಲ್ ಪಬ್ಲಿಕ್ ಶಾಲೆ ಮತ್ತು ಸರ್ವೋದಯ ವಿದ್ಯಾಲಯಗಳು ಸೇರಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಕರೆ ಬಂದ ತಕ್ಷಣವೇ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಯನ್ನು ಆವರಣದಿಂದ ಹೊರಗೆ ತಪಾಸಣೆಗಳನ್ನು ನಡೆಸಲಾಗಿದೆ. ಆದರೆ ಈ ವರೆಗೆ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ.
ಬಾಂಬ್ ಬೆದರಿಕೆ ಕರೆಗಳು ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸ್ ತಂಡಗಳು ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಶಾಲೆಗಳ ಆವರಣಗಳಲ್ಲಿ ತಪಾಸಣೆಯನ್ನು ನಡೆಸಿವೆ. ಘಟನೆಗೆ ಸಂಬಂಧಿಸಿ ಶಾಲಾ ವಿದ್ಯಾರ್ಥಿಗಳು, ಪೋಷಕರಿಗೆ ಸೂಚನೆ ನೀಡಿರುವ ಡಿಪಿಎಸ್ ದ್ವಾರಕಾ, ಅನಿವಾರ್ಯ ಕಾರಣದಿಂದಾಗಿ ಇಂದು ಶಾಲೆಯನ್ನು ಮುಚ್ಚಿರುವುದಾಗಿ ತಿಳಿಸಿದೆ. ಅಲ್ಲದೇ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಹೇಳಿದೆ.
ಅದು ತನ್ನ ಸೂಚನೆಯಲ್ಲಿ ಈ ರೀತಿ ಉಲ್ಲೇಖಿಸಿದೆ. ಆತ್ಮೀಯ ಪೋಷಕರೇ ಅನಿವಾರ್ಯ ಕಾರಣದಿಂದಾಗಿ ಶಾಲೆಯು ಸೆಪ್ಟೆಂಬರ್ 20ರಂದು ಶನಿವಾರ ಮುಚ್ಚಲ್ಪಡುತ್ತದೆ. ದಯವಿಟ್ಟು ಗಮನಿಸಿ. ಎಲ್ಲಾ ಶಾಲಾ ಬಸ್, ಖಾಸಗಿ ವ್ಯಾನ್, ಕ್ಯಾಬ್ಗಳನ್ನು ತಕ್ಷಣ ಹಿಂತಿರುಗಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ಯಲು ನಿಲ್ದಾಣಗಳಲ್ಲಿ ಉಪಸ್ಥಿತರಿರುವಂತೆ ವಿನಂತಿಸಲಾಗಿದೆ.
ಇತರ ಪೋಷಕರು ಮಕ್ಕಳನ್ನು ತಕ್ಷಣ ಬಂದು ಶಾಲೆಯಿಂದ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿದೆ. ಈ ದಿನ ನಿಗದಿಪಡಿಸಲಾದ ಮಧ್ಯಂತರ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಡಿಪಿಎಸ್ ದ್ವಾರಕಾ ಸುತ್ತೋಲೆ ತಿಳಿಸಿದೆ.
ಬಾಂಬ್ ಬೆದರಿಕೆ ಬಂದಿರುವ ಶಾಲಾ ಆವರಣಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ನಗರದ ವಿವಿಧ ಭಾಗಗಳಲ್ಲಿರುವ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಸೆಪ್ಟೆಂಬರ್ 9ರಂದು ನವದೆಹಲಿಯ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತು. ಮಾಹಿತಿ ಬಂದ ತಕ್ಷಣವೇ ಕಾಲೇಜು ಆವರಣವನ್ನು ಖಾಲಿ ಮಾಡಲಾಯಿತು.
ಅದೇ ದಿನ ಮತ್ತೊಂದು ಶಿಕ್ಷಣ ಸಂಸ್ಥೆಯಾದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಮತ್ತು ದೆಹಲಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೂ ಬಾಂಬ್ ಬೆದರಿಕೆಗಳು ಬಂದವು. ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿಯ ಡಿಸಿಪಿ ನಿಧಿನ್ ವಲ್ಸನ್, ಇಮೇಲ್ ಮೂಲಕ ಬಂದ ಬೆದರಿಕೆ ಕರೆಯು ಭವಿಷ್ಯದಲ್ಲಿ ಸಂಭವನೀಯ ಸ್ಫೋಟದ ಸಾಧ್ಯತೆಯನ್ನು ಸೂಚಿಸುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
