ಲೇಹ್:
ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ಕಾರಣವಾಗಿ ನಾಲ್ಕು ಮಂದಿ ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡ ಬಳಿಕ ಪ್ರತಿಭಟನಾ ಚಳವಳಿಯ ಪ್ರಮುಖ ನಾಯಕ ಸೋನಮ್ ವಾಂಗ್ಚುಕ್ ಅವರ ಎನ್ಜಿಒದ ಎಫ್ಸಿಆರ್ಎ ಪರವಾನಗಿ ರದ್ದುಗೊಂಡಿದೆ. ವಾಂಗ್ಚುಕ್ ಅವರು ಸಾರ್ವಜನಿಕ ಭಾವನೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ನಿರ್ವಹಿಸುತ್ತಿರುವ ಸಂಸ್ಥೆಗಳು ಮತ್ತು ಹಣಕಾಸು ವಹಿವಾಟಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಲಡಾಖ್ನಲ್ಲಿ ಹೆಚ್ಚಿದ ಉದ್ವಿಗ್ನತೆ ಮತ್ತು ಹಿಂಸಾಚಾರದ ಮಧ್ಯೆ ಇದೀಗ ಪ್ರತಿಭಟನಾ ಚಳವಳಿಯ ಪ್ರಮುಖ ನಾಯಕ ಸೋನಮ್ ವಾಂಗ್ಚುಕ್ ವಿರುದ್ಧ ಬಿಜೆಪಿಯು ಹಣಕಾಸಿನ ಅವ್ಯವಹಾರದ ಆರೋಪ ಮಾಡಿವೆ. ವಾಂಗ್ಚುಕ್ ಅವರು ಸಾರ್ವಜನಿಕ ಭಾವನೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಲಾಗಿರುವುದರಿಂದ ಅವರ ಸಂಸ್ಥೆಗಳು ಮತ್ತು ಹಣಕಾಸು ವಹಿವಾಟುಗಳ ಪರಿಶೀಲನೆ ನಡೆಸಲಾಗುತ್ತಿದೆ.
ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) 2010 ರ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಗುರುವಾರ ಲಡಾಖ್ನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳುವಳಿ (SECMOL) ಯ ಪರವಾನಿಗೆಯನ್ನು ರದ್ದುಗೊಳಿಸಿದೆ. ಕೇಂದ್ರ ತನಿಖಾ ದಳ (ಸಿಬಿಐ) ವಾಂಗ್ಚುಕ್ ನೇತೃತ್ವದ ಸಂಸ್ಥೆಯ ವಿರುದ್ಧದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಉಲ್ಲಂಘನೆ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ.
ವಾಂಗ್ಚುಕ್ ಅವರು ಸ್ಥಾಪಿಸಿರುವ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ ಲಡಾಖ್ (HIAL)ಗೆ ಬರುವ ದೇಣಿಗೆ ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದೆ. 2023- 24ರ ಹಣಕಾಸು ವರ್ಷದಲ್ಲಿ ಈ ಹಿಂದೆ ಇದ್ದ 6 ಕೋಟಿ ರೂ. ನಿಂದ 15 ಕೋಟಿ ರೂ. ಗಳಿಗೆ ಏರಿಕೆಯಾಗಿದೆ. ಅಲ್ಲದೇ ಇದರ ಏಳು ಖಾತೆಗಳಲ್ಲಿ ನಾಲ್ಕು ಖಾತೆಗಳು ಅಘೋಷಿತವಾಗಿದೆ. ಸಂಸ್ಥೆಯು ಕಡ್ಡಾಯವಾಗಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ ನೋಂದಣಿ ಮಾಡದೆ 1.5 ಕೋಟಿ ರೂ. ಗಳಿಗೂ ಹೆಚ್ಚು ವಿದೇಶಿ ಹಣ ಬಳಕೆ ಮಾಡಿದೆ. ಇದು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ 2010 ರ ಸೆಕ್ಷನ್ 11 ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ಒಟ್ಟು ಒಂಬತ್ತು ಖಾತೆಗಳಲ್ಲಿ ಆರು ಅಘೋಷಿತ ಖಾತೆಗಳು ಇವೆ ಎಂದು ಸ್ಟೂಡೆಂಟ್ಸ್ ಎಜುಕೇಶನಲ್ ಅಂಡ್ ಕಲ್ಚರ್ ಮೂವ್ಮೆಂಟ್ ಆಫ್ ಲಡಾಖ್ (SECMOL) ವಿರುದ್ಧವು ಆರೋಪಿಸಲಾಗಿದೆ. ವಾಂಗ್ಚುಕ್ ನಿರ್ದೇಶಕರಾಗಿರುವ ಹೊಸ ಖಾಸಗಿ ಸಂಸ್ಥೆ ಶೆಶ್ಯಾನ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಕೂಡ ತನಿಖೆಗೆ ಒಳಪಡಿಸಲಾಗುತ್ತಿದೆ. ಈ ಖಾಸಗಿ ಕಂಪನಿಗೆ 6.5 ಕೋಟಿ ರೂ. ಗಳ ವರ್ಗಾವಣೆಯಾಗಿದೆ ಎನ್ನಲಾಗಿದೆ.
ಇನ್ನು ವಾಂಗ್ಚುಕ್ ಅವರ ವೈಯಕ್ತಿಕ ಹಣಕಾಸಿನ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಅವರು ಒಂಬತ್ತು ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅವುಗಳಲ್ಲಿ ಎಂಟು ಖಾತೆಗಳನ್ನು ಘೋಷಿಸಿಲ್ಲ. ಈ ಖಾತೆಗಳು ಗಣನೀಯ ಪ್ರಮಾಣದ ವಿದೇಶಿ ಹಣವನ್ನು ಪಡೆದಿವೆ ಎಂದು ಆರೋಪಿಸಲಾಗಿವೆ.
2021 ರಿಂದ ವಿದೇಶಕ್ಕೆ 2.3 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಅವರು ವರ್ಗಾಯಿಸಿದ್ದಾರೆ. ವಾಂಗ್ಚುಕ್ ಅವರು ಕಾರ್ಪೊರೇಟ್ ವಲಯವನ್ನು ಟೀಕಿಸುತ್ತಿದ್ದರೂ ಅವರ ಸಂಸ್ಥೆಗಳು ಕೇಂದ್ರ ಸರ್ಕಾರಿ ಪಿಎಸ್ಯುಗಳಿಂದ ಸೇರಿದಂತೆ ಗಮನಾರ್ಹ ಸಿಎಸ್ಆರ್ ನಿಧಿಗಳನ್ನು ಪಡೆದಿವೆ ಎಂದು ಬಿಜೆಪಿ ಮೂಲಗಳು ಹೇಳಿವೆ.








