ಬೆಂಗಳೂರು
ಚಂಡಮಾರುತದ ಪರಿಣಾಮವಾಗಿ ಕರ್ನಾಟಕದಲ್ಲೂ ಕಳೆದ ಮೂರ್ನಾಲ್ಕು ದಿನಗಳಿಂದ ಮತ್ತೆ ಮಳೆ ಶುರುವಾಗಿದೆ. ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಮೊಂತಾ ಚಂಡಮಾರುತ ಅಪ್ಪಳಿಸಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ನಾಳೆ ಕರ್ನಾಟಕದಲ್ಲೂ ಮಳೆ ಹೆಚ್ಚಾಗಲಿದ್ದು, ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ಆಂಧ್ರದಲ್ಲಿ ನಾಳೆ (ಅಕ್ಟೋಬರ್ 28) ಚಂಡಮಾರುತದಿಂದಾಗಿ 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಜಯವಾಡದಲ್ಲಿ ಏರ್ ಇಂಡಿಯಾ ವಿಮಾನ ಕೂಡ ರದ್ದಾಗಿದೆ. ಇಂಡಿಗೋ ವಿಮಾನ ಕೂಡ ನಾಳೆಯ ಹವಾಮಾನವನ್ನು ನೋಡಿಕೊಂಡು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ. ಇದರ ನಡುವೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳು 12 ಗಂಟೆ ತಡವಾಗಿ ಪ್ರಯಾಣ ಆರಂಭಿಸಲಿವೆ.
1. ರೈಲು ಸಂಖ್ಯೆ 22501 SMVT ಬೆಂಗಳೂರು – ನ್ಯೂ ತಿನ್ಸುಕಿಯಾ ಜಂಕ್ಷನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್.
2. ರೈಲು ಸಂಖ್ಯೆ 12836 SMVT ಬೆಂಗಳೂರು – ಹಟಿಯಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್.
3. ರೈಲು ಸಂಖ್ಯೆ 12503 SMVT ಬೆಂಗಳೂರು – ಅಗರ್ತಲಾ ಹಮ್ ಸಫರ್ ಎಕ್ಸ್ಪ್ರೆಸ್.
4. ರೈಲು ಸಂಖ್ಯೆ 12246 SMVT ಬೆಂಗಳೂರು – ಹೌರಾ ಜಂಕ್ಷನ್ ದುರಂತೋ ಎಕ್ಸ್ಪ್ರೆಸ್.
5. ರೈಲು ಸಂಖ್ಯೆ 12864 SMVT ಬೆಂಗಳೂರು – ಹೌರಾ ಜಂಕ್ಷನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್.
6. ರೈಲು ಸಂಖ್ಯೆ 13433 SMVT ಬೆಂಗಳೂರು – ಮಾಲ್ಡಾ ಟೌನ್ ಅಮೃತ್ ಭಾರತ್ ಎಕ್ಸ್ಪ್ರೆಸ್.
7. ರೈಲು ಸಂಖ್ಯೆ 18048 ವಾಸ್ಕೊ ಡ ಗಾಮ – ಶಾಲಿಮಾರ್ ಅಮರಾವತಿ ಎಕ್ಸ್ಪ್ರೆಸ್.
ಆಂಧ್ರಪ್ರದೇಶದಲ್ಲಿ 65ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಶಾಖಪಟ್ಟಣ ಪ್ರದೇಶದಲ್ಲಿ 43 ರೈಲುಗಳು ರದ್ದಾಗಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಕ್ಟೋಬರ್ 28ರಂದು ವಿಶಾಖಪಟ್ಟಣಂ ಮೂಲಕ ಹಾದುಹೋಗುವ 43 ರೈಲುಗಳನ್ನು ರದ್ದುಗೊಳಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ಘೋಷಿಸಿದೆ. ಹವಾಮಾನ ಪರಿಸ್ಥಿತಿಗಳು ಸುಧಾರಿಸಿ ಹಳಿಗಳು ತೆರವುಗೊಂಡ ನಂತರ ರೈಲು ಸೇವೆಗಳನ್ನು ಪುನಃಸ್ಥಾಪಿಸಲಾಗುವುದು.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಜಯವಾಡದಿಂದ ಬರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಅಕ್ಟೋಬರ್ 28ರಂದು ವಿಜಯವಾಡ ವಿಮಾನ ನಿಲ್ದಾಣದಿಂದ ನಿಗದಿಯಾಗಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಅವುಗಳಲ್ಲಿ ಬೆಂಗಳೂರಿನ 2 ವಿಮಾನಗಳೂ ಸೇರಿವೆ. IX 2819 (ವಿಜಾಗ್-ವಿಜಯವಾಡ), IX 2862 (ವಿಜಯವಾಡ-ಹೈದರಾಬಾದ್), IX 2875 (ಬೆಂಗಳೂರು-ವಿಜಯವಾಡ), IX 2876 (ವಿಜಯವಾಡ-ಬೆಂಗಳೂರು), IX 976 (ಶಾರ್ಜಾ-ವಿಜಯವಾಡ), IX 975 (ವಿಜಯವಾಡ-ಶಾರ್ಜಾ), IX 2743 (ಹೈದರಾಬಾದ್-ವಿಜಯವಾಡ), ಮತ್ತು IX 2743 (ವಿಜಯವಾಡ-ವಿಜಯವಾಡ) ವಿಮಾನಗಳ ಹಾರಾಟ ನಾಳೆ ಸ್ಥಗಿತಗೊಳ್ಳಲಿದೆ.








