ದೆಹಲಿ:
ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ಅವರಿಗೆ ಬೆದರಿಕೆ ಕರೆ ಬಂದಿದೆ. ಅವರ ಇತ್ತೀಚಿನ ಕೌನ್ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರೊಂದಿಗಿನ ಸಂವಾದವು ಖಲಿಸ್ತಾನಿ ಸಂಘಟನೆಗಳಿಂದ ಬೆದರಿಕೆಗಳ ಅಲೆಯನ್ನು ಹುಟ್ಟುಹಾಕಿದೆ ಎಂದು ತಿಳಿದುಬಂದಿದೆ.
ನಟ ಅಮಿತಾಬ್ ಬಚ್ಚನ್ಗೆ ಇರುವ ಕೆಲವು ಬೆದರಿಕೆಗಳನ್ನು ಕೇಂದ್ರ ಸಂಸ್ಥೆಗಳು ಪರಿಶೀಲಿಸುತ್ತಿವೆ. ದಿಲ್ಜಿತ್ ದೋಸಾಂಜ್ ಅವರೊಂದಿಗಿನ ಮಾತುಕತೆಯ ನಂತರ ಈ ಬೆದರಿಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ದೋಸಾಂಜ್ ಅವರು ಬಚ್ಚನ್ ಅವರ ಪಾದಗಳನ್ನು ಮುಟ್ಟಿ ಮಾತನಾಡಿದ್ದಕ್ಕೆ ಖಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (SFJ) ನಿಂದ ದೋಸಾಂಜ್ ಅವರಿಗೆ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ. ನವೆಂಬರ್ 1 ರಂದು ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ದೋಸಾಂಜ್ ಅವರ ಸಂಗೀತ ಕಚೇರಿಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತದೆ ಎಂದು SFJ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಸಿದ್ದಾನೆ.
ದೋಸಾಂಜ್ ಅವರ ಗೌರವಾನ್ವಿತ ವರ್ತನೆಯು ಪ್ರತ್ಯೇಕತಾವಾದಿ ಸಂಘಟನೆಯಿಂದ ತೀವ್ರ ಟೀಕೆಗೆ ಗುರಿಯಾಯಿತು. ನಟ-ಗಾಯಕ 1984 ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರದ 1984 ರ ದಂಗೆಯ ಸಮಯದಲ್ಲಿ ಬಚ್ಚನ್ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಪಾತ್ರ ವಹಿಸಿದ್ದಾರೆ ಎಂದು SFJ ಆರೋಪಿಸಿದೆ.
ಗಲಭೆಯ ಸಮಯದಲ್ಲಿ ಬಚ್ಚನ್ ಅವರು ರಕ್ತಕ್ಕಾಗಿ ರಕ್ತ ಎಂಬ ಘೋಷಣೆಯನ್ನು ಬಳಸಿದ್ದಾರೆ ಎಂದು ಸಂಘಟನೆ ಹೇಳಿದೆ. ಗಲಭೆಯಲ್ಲಿ ಭಾರತದಾದ್ಯಂತ 30,000 ಕ್ಕೂ ಹೆಚ್ಚು ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಿ ಹಿಂಸಾಚಾರ ಮಾಡಲಾಗಿತ್ತು ಎಂದು ಸಂಘಟನೆ ಕಿಡಿಕಾರಿದೆ.
ನವೆಂಬರ್ 1ರಂದು ನಿಗದಿಯಾಗಿದ್ದ ದಿಲ್ಜಿತ್ ದೋಸಾಂಜ್ ಅವರ ಔರಾ 2025 ಸಂಗೀತ ಕಚೇರಿಗೆ ಬೆದರಿಕೆ ಇರುವ ಬಗ್ಗೆ ಮೆಲ್ಬೋರ್ನ್ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಬುಧವಾರ ಕಳವಳ ವ್ಯಕ್ತಪಡಿಸಿವೆ. ಗುಪ್ತಚರ ವರದಿಗಳ ಪ್ರಕಾರ, ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಗುಂಪು ಈ ಉನ್ನತ ಮಟ್ಟದ ಕಾರ್ಯಕ್ರಮವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದೆ ಎಂದು ಎಚ್ಚರಿಸಿದೆ.
ಇತ್ತೀಚೆಗೆ ಬಂದ್ ರ್ಯಾಲಿಗಳಿಗೆ ಕರೆ ನೀಡಿರುವುದು ಮತ್ತು SFJ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ವಿಡಿಯೊ ಸಂದೇಶವು ಮೆಲ್ಬೋರ್ನ್ ಬೆದರಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಆಸ್ಟ್ರೇಲಿಯಾದ ಪೊಲೀಸ್ ಮೂಲಗಳು ತಿಳಿಸಿವೆ.1984ರ ಗಲಭೆಗಳಿಗೆ ಸಂಬಂಧಿಸಿದಂತೆ SFJಯು ಭಾವನಾತ್ಮಕವಾಗಿ ಪ್ರೇರಿತವಾದ ದೃಶ್ಯಗಳನ್ನು ಎಕ್ಸ್ ಮತ್ತು ಇನ್ಸ್ಟಾಗ್ರಾಂನಲ್ಲಿ #BoycottDiljit ಮತ್ತು #PanthicJustice ನಂತಹ ಹ್ಯಾಶ್ಟ್ಯಾಗ್ಗಳನ್ನು ಪ್ರಚಾರ ಮಾಡುತ್ತಿದೆ. ಈ ಮೂಲಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮಕ್ಕೆ ಬಹಿಷ್ಕಾರ ಮಾಡಿದೆ.

 


