ಗುವಾಹಟಿ ಟೆಸ್ಟ್‌ಗೆ ಸೂಕ್ತ ಆಟಗಾರನನ್ನು ಆರಿಸಿದ ಅನಿಲ್‌ ಕುಂಬ್ಳೆ………!

ನವದೆಹಲಿ:

     ಗಾಯಾಳು ಶುಭಮನ್‌ ಗಿಲ್‌ ಅವರು ಗುವಾಹಟಿಯಲ್ಲಿ ನಡೆಯುವ ಎರಡನೇ ಟೆಸ್ಟ್‌ ಪಂದ್ಯಕ್ಕೆ  ಅಲಭ್ಯರಾದರೆ, ಅವರ ಸ್ಥಾನಕ್ಕೆ ಯುವ ಬ್ಯಾಟ್ಸ್‌ಮನ್‌ ಸಾಯಿ ಸುದರ್ಶನ್‌  ಅವರನ್ನು ಆಡಿಸಬೇಕೆಂದು ಸ್ಪಿನ್‌ ದಂತಕತೆ ಹಾಗೂ ಟೀಮ್‌ ಇಂಡಿಯಾ ಮಾಜಿ ನಾಯಕ ಅನಿಲ್‌ ಕುಂಬ್ಳೆ  ಸಲಹೆ ನೀಡಿದ್ದಾರೆ. ಕೋಲ್ಕತಾ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡುವಾಗ ಶುಭಮನ್‌ ಗಿಲ್‌ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿತ್ತು ಹಾಗೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಅವರು ಮೊದಲನೇ ಟೆಸ್ಟ್‌ ಪಂದ್ಯದ ಇನ್ನುಳಿದ ಭಾಗದಿಂದ ಹೊರ ನಡೆದಿದ್ದರು.

     ಕುತ್ತಿಗೆ ಗಾಯಕ್ಕೆ ಒಳಗಾಗಿರುವ ನಾಯಕ ಶುಭಮನ್‌ ಗಿಲ್‌, ನವೆಂಬರ್‌ 22 ರಂದು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ಲಭ್ಯವಾಗುವುದು ಅನುಮಾನ. ಒಂದು ವೇಳೆ ಎರಡನೇ ಟೆಸ್ಟ್‌ ಪಂದ್ಯಕೆ ಗಿಲ್‌ ಅಲಭ್ಯರಾದರೆ, ಸಾಯಿ ಸುದರ್ಶನ್‌ ಅವರು ಆಡುವ ಬಳಗದಲ್ಲಿ ಆಡಬೇಕೆಂದು ಅನಿಲ್‌ ಕುಂಬ್ಳೆ ಸಲಹೆ ನೀಡಿದ್ದಾರೆ. ಇದರ ಜೊತೆಗೆ ದೇವದತ್‌ ಪಡಿಕ್ಕಲ್‌ ಅವರನ್ನು ಕೂಡ ಆಡುವ ಬಳಗಕ್ಕೆ ಸೇರಿಸಬೇಕು. ಆ ಮೂಲಕ ಎಡಗೈ ಸ್ಪಿನ್ನರ್‌ ಸೈಮನ್‌ ಹಾರ್ಮರ್‌ ಅವರನ್ನು ಸಮರ್ಥವಾಗಿ ಎದುರಿಸಬಹುದು ಎಂದು ಹೇಳಿದ್ದಾರೆ. ಸೈಮನ್‌ ಹಾರ್ಮರ್‌ ಈ ಮೊದಲನೇ ಟೆಸ್ಟ್‌ನಲ್ಲಿ 8 ವಿಕೆಟ್‌ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

   “ಶುಬ್‌ಮನ್ ಗಿಲ್ ಮುಂದಿನ ಟೆಸ್ಟ್‌ಗೆ ಫಿಟ್ ಆಗುತ್ತಾರೆ ಎಂದು ಭಾರತ ತಂಡ ಖಂಡಿತವಾಗಿಯೂ ಆಶಿಸುತ್ತಿದೆ. ಅವರು ಆಡಲು ಸಾಧ್ಯವಾಗದಿದ್ದರೆ, ಸಾಯಿ ಸುದರ್ಶನ್ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಭಾರತ ಆರು ಬೌಲರ್‌ಗಳೊಂದಿಗೆ ಅಂದರೆ, ಇಬ್ಬರು ವೇಗಿಗಳು ಮತ್ತು ನಾಲ್ವರು ಸ್ಪಿನ್ನರ್‌ಗಳೊಂದಿಗೆ ಮುಂದುವರಿದರೆ, ತಂಡದಲ್ಲಿ ಇನ್ನುಳಿದವರು ಹಾಗೆಯೇ ಉಳಿಯಬಹುದು. ಹಾಗಾಗಿ ಶುಭಮನ್‌ ಗಿಲ್‌ ಸ್ಥಾನಕ್ಕೆ ಮಾತ್ರ ಒಂದು ಬದಲಾವಣೆಯನ್ನು ನೋಡಬಹುದು,” ಎಂದು ಅನಿಲ್‌ ಕುಂಬ್ಳೆ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

   “ಭಾರತ ಆ ಸಂಯೋಜನೆಯೊಂದಿಗೆ ಹೋಗದಿರಲು ನಿರ್ಧರಿಸಿದರೆ, ಇನ್ನೊಂದು ಬ್ಯಾಟಿಂಗ್ ಆಯ್ಕೆ ದೇವದತ್ ಪಡಿಕ್ಕಲ್. ಆದಾಗ್ಯೂ, ಅವರನ್ನು ಕರೆತರುವುದರಿಂದ ಇಡೀ ಅಗ್ರ ಕ್ರಮಾಂಕ ಎಡಗೈ ಆಟಗಾರರಾಗುತ್ತಾರೆ, ಇದು ಸೈಮನ್ ಹಾರ್ಮರ್‌ನಂತಹ ಸ್ಪಿನ್ನರ್‌ ಅನ್ನು ಇಡೀ ದಿನ ಬೌಲಿಂಗ್ ಮಾಡಲು ಆಹ್ವಾನಿಸಬಹುದು,” ಎಂದು ಸ್ಪಿನ್‌ ದಿಗ್ಗಜ ಹೇಳಿದ್ದಾರೆ. 

    ಬರ್ಸಪರ ಪಿಚ್‌ ಹಸಿರಿನಿಂದ ಕೂಡಿದ್ದರೂ ಭಾರತ ತಂಡ ತನ್ನ ಪ್ಲೇಯಿಂಗ್‌ XIನಲ್ಲಿ ಇಬ್ಬರು ವೇಗಿಗಳನ್ನು ಮಾತ್ರ ಮುಂದುವರಿಸಬೇಕೆಂದು ಅನಿಲ್‌ ಕುಂಬ್ಳೆ ಸಲಹೆ ನೀಡಿದ್ದಾರೆ.

   “ಬರ್ಸಪರ ಪಿಚ್‌ ಹಸಿರಿನಿಂದ ಕೂಡಿದ್ದರೂ ಭಾರತದ ಟೀಮ್‌ ಮ್ಯಾನೇಜ್‌ಮೆಂಟ್‌ ಮೂವರು ಸೀಮರ್‌ಗಳನ್ನು ಆಡಿಸಬಹುದೆಂದು ನಾನು ನಂಬುವುದಿಲ್ಲ. ಇದರ ಬಗ್ಗೆ ನಮಗೆ ಇನ್ನೂ ಏನೂ ತಿಳಿದಿಲ್ಲ. ಆದರೆ, ಒಟ್ಟಾರೆಯಾಗಿ ಭಾರತ ತಂಡ ಇದೇ ಪ್ಲೇಯಿಂಗ್‌ XIಅನ್ನು ಉಳಿಸಿಕೊಳ್ಳಬೇಕು. ಇದರಲ್ಲಿ ಶುಭಮನ್‌ ಗಿಲ್‌ ಸ್ಥಾನಕ್ಕೆ ಒಂದು ಬದಲಾವಣೆ ಮಾಡಬಹುದು. ಅವರು ಸಂಪೂರ್ಣ ಫಿಟ್‌ ಇಲ್ಲವಾದರೆ ಅವರ ಸ್ಥಾನಕ್ಕೆ ಸಾಯಿ ಸುದರ್ಶನ್‌ ಅವರಿಗೆ ಸ್ಥಾನ ನೀಡಬೇಕು,” ಎಂದು ಕನ್ನಡಿಗ ತಿಳಿಸಿದ್ದಾರೆ. 

    ಮೊದಲನೇ ಟೆಸ್ಟ್‌ ಸೋಲಿನ ಬಳಿಕ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಎರಡನೇ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿಯನ್ನು ಡ್ರಾ ಮಾಡಿಕೊಳ್ಳಲು ಟೀಮ್‌ ಇಂಡಿಯಾ ಎದುರು ನೋಡುತ್ತಿದೆ. ಆದರೆ, ದಕ್ಷಿಣ ಆಫ್ರಿಕಾ ಐತಿಹಾಸಿಕ ಟೆಸ್ಟ್‌ ಸರಣಿಯನ್ನು ಗೆಲ್ಲುವ ಪ್ರಯತ್ನದಲ್ಲಿದೆ.

Recent Articles

spot_img

Related Stories

Share via
Copy link