ರಾಹುಲ್‌ ಗಾಂಧಿ ಭೇಟಿಯಾಗಿ ಬಂದ ಪ್ರಿಯಾಂಕ್‌ ಖರ್ಗೆ, ʼ50:50′ ಒಪ್ಪಂದ ಆಗಿಲ್ಲ ಎಂದ ಕೆಜೆ ಜಾರ್ಜ್

ಬೆಂಗಳೂರು

     ಕರ್ನಾಟಕದ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ​ ಜಟಾಪಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ  ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ​ ಬಣಗಳು ಅಧಿಕಾರ ಹಂಚಿಕೆ ಬಗ್ಗೆ ಮುಸುಕಿನ ಗುದ್ದಾಟ ನಡೆಸುತ್ತಿವೆ. ಸಂಪುಟ ವಿಸ್ತರಣೆ ಹಾಗೂ ತಮಗೆ ಸಚಿವ ಸ್ಥಾನಕ್ಕಾಗಿಯೂ ಬೆಂಬಲಿಗರು ಬೇಡಿಕೆಗಳನ್ನು ಇಡುತ್ತಿದ್ದಾರೆ. ಈ ನಡುವೆ ಸಚಿವ ಪ್ರಿಯಾಂಕ್​ ಖರ್ಗೆ‌ , ರಹಸ್ಯವಾಗಿ ರಾಹುಲ್​ ಗಾಂಧಿ  ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್​​ನಲ್ಲಾಗುತ್ತಿರುವ ವಿದ್ಯಮಾನಗಳ ಬಗ್ಗೆ ವಿವರಿಸಿದ್ದಾರೆ.

     ರಾಹುಲ್ ಗಾಂಧಿ ನೀಡಿರುವ ಸಂದೇಶವನ್ನು ಪ್ರಿಯಾಂಕ್ ಖರ್ಗೆ ಹೊತ್ತು ಬೆಂಗಳೂರಿಗೆ ತಂದಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಭೇಟಿ ಮಾಡಿ ಬೆಂಗಳೂರಿಗೆ ಬಂದಿಳಿದ ಪ್ರಿಯಾಂಕ್ ಖರ್ಗೆ, ನೇರವಾಗಿ ಹೋಗಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ರಾಹುಲ್ ಕೊಟ್ಟ ಸಂದೇಶವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸುಮಾರು ಅರ್ಧ ಗಂಟೆ ಚರ್ಚಿಸಿದ ಬಳಿಕ ಪ್ರಿಯಾಂಕ್ ಖರ್ಗೆ ನೇರವಾಗಿ ಡಿಸಿಎಂ ನಿವಾಸಕ್ಕೆ ತೆರಳಿ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದು, ರಾಹುಲ್ ಗಾಂಧಿ ಹೇಳಿರುವುದನ್ನು ಡಿಕೆಶಿ ಗಮನಕ್ಕೆ ತಂದಿದ್ದಾರೆ. 

    ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ CLP ಸಭೆಯಲ್ಲಿ ಸಿಎಂ ಆಯ್ಕೆ ಮಾಡುವಾಗ ಯಾವ ಒಪ್ಪಂದವೂ ಆಗಿಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಎಲ್ಲಾ ಶಾಸಕರು ಯಾವ ಒಪ್ಪಂದವಿಲ್ಲದೇ, ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿದಾಗ, 50-50 ಅಂತ ಏನೂ ಚರ್ಚೆಯಾಗಿಲ್ಲ. ಎಐಸಿಸಿ ನಾಯಕರೂ ಕೂಡ ಬಂದಿದ್ರು, ಎಲ್ಲರೂ ಸಿಎಂ ಸಿದ್ದರಾಮಯ್ಯ ಅಂತ ಹೇಳಿದ್ದಾರೆ. ಒಪ್ಪಂದದ ವಿಚಾರ ನನಗೆ ಗೊತ್ತಿಲ್ಲ ಅಂತ ಸಚಿವ ಕೆಜೆ ಜಾರ್ಜ್ ಹೊಸಪೇಟೆಯಲ್ಲಿ ಹೇಳಿದ್ದಾರೆ. 

     ಇನ್ನು ರಣದೀಪ್ ಸಿಂಗ್ ಸುರ್ಜೇವಾಲಾ, ಕೆಸಿ ವೇಣುಗೋಪಾಲ ರಾಜ್ಯಕ್ಕೆ ಭೇಟಿ ನೀಡುತ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ನಮ್ಮ ಪಕ್ಷದವರು, ಹೀಗಾಗಿ ಬಂದು ಹೋಗುತ್ತಾರೆ. ಅವರ ಎದುರು ಪಕ್ಷದ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇದೇ ವಿಚಾರ, ಅದೇ ವಿಚಾರ ಅಂತ ಏನಿಲ್ಲ. ಅಧಿಕಾರ ಹಂಚಿಕೆ, ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

     ಡಿಕೆಶಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಜಾರ್ಜ್, ಡಿಕೆಶಿ ಅವರನ್ನು ನಾನು ಭೇಟಿಯಾಗಿದ್ದು, ಅವರು ನಮ್ಮ ಡಿಸಿಎಂ, ನನ್ನ ಸಹೋದ್ಯೋಗಿ ಎಂಬ ಹಿನ್ನೆಲೆಯಲ್ಲಿ. ಹೀಗಾಗಿ ನಾನು ನಮ್ಮ ಪಕ್ಷದ ನಾಯಕನನ್ನು ಭೇಟಿಯಾಗಿದ್ದೇನೆ ಎಂದರು.ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಲ್ಲ ಎಂಬ ನಿಖಿಲ್ ಕುಮಾರ್ ಸ್ವಾಮಿ ಹೇಳಿಕೆಗೆ ಗರಂ ಆದ ಜಾರ್ಜ್, ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಯಾವಾಗ ಬಂದವರು? ಅವರ ತಾತ ಪ್ರಧಾನಿಯಾದವರು ಪಾಪ. ಅವರ ಪ್ರಶ್ನೆಗೆ ನಾನು ಉತ್ತರ ಕೊಡಬೇಕಾ? ನೀವು ಅವರನ್ನೇ ಕೇಳಿ ಎಂದರು. ಶಾಸಕರ ಖರೀದಿ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇಲ್ಲ, ಬಿಜೆಪಿಯವರೇ ಬೆಂಕಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.

Recent Articles

spot_img

Related Stories

Share via
Copy link