ಉಡುಪಿ
ನದಿ ಸಂರಕ್ಷಣೆ, ಅಮ್ಮನ ಹೆಸರಿನಲ್ಲಿ ಮರಗಳ ರಕ್ಷಣೆ, ಒಬ್ಬ ಬಡವನ ಉದ್ಧಾರ, ವೋಕಲ್ ಫಾರ್ ಲೋಕಲ್, ಸಾವಯವ ಕೃಷಿ, ಧಾನ್ಯಗಳ ಹೆಚ್ಚಿನ ಬಳಕೆ, ಊಟದಲ್ಲಿ ಎಣ್ಣೆಯ ಅಂಶ ಕಡಿಮೆ ಮಾಡುವುದು ಸೇರಿದಂತೆ ಒಟ್ಟು 9 (ನವ) ಸಂಕಲ್ಪಗಳನ್ನು ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಇಂದು ಉಡುಪಿಯಲ್ಲಿ ಲಕ್ಷ ಕಂಠ ಗೀತಾ ಪಠನ ಯಜ್ಞದಲ್ಲಿ ಭಾಗವಹಿಸಿದ ಬಳಿಕ ಅವರು ಜನರನ್ನುದ್ದೇಶಿಸಿ ಮಾತನಾಡಿದರು.
ಇದೇ ವೇಳೆ ಅವರು ಜನಸಂಘ ಹಾಗೂ ಉಡುಪಿಯ ಹಿಂದಿನ ಶಾಸಕ ವಿಎಸ್ ಆಚಾರ್ಯರನ್ನು ನೆನೆದರು. ಉಡುಪಿಯಲ್ಲಿ 5 ದಶಕದ ಹಿಂದೆಯೇ ಜನ ಸಂಘಕ್ಕೆ ಅಧಿಕಾರ ಸಿಕ್ಕಿತ್ತು. ಉಡುಪಿ ಬಿಜೆಪಿ ಮತ್ತು ಜನಸಂಘದ ಕರ್ಮಭೂಮಿ ಎಂದು ಪ್ರಧಾನಿ ಮೋದಿ ತಿಳಿಸಿದರು. ಬಿಜೆಪಿಗೆ ಇಲ್ಲಿನ ಮುಖಂಡ ವಿ.ಎಸ್. ಆಚಾರ್ಯ ಅವರ ಕೊಡುಗೆ ಬಹಳಷ್ಟಿದೆ ಎಂದು ನೆನೆದರು. ಇಂದು ನನಗೆ ಉಡುಪಿ ಶ್ರೀಕೃಷ್ಣ ಮತ್ತು ಮಧ್ವಾಚಾರ್ಯರ ಆಶೀರ್ವಾದ ಸಿಕ್ಕಿದೆ. ಉಡುಪಿ ಮಠದಲ್ಲಿ ಲಕ್ಷ ಕಂಠ ಗೀತಾ ಪಠಣ ನಡೆದಿದೆ. ಇದರಲ್ಲಿ ಭಾಗಿಯಾಗಿದ್ದು ನನ್ನ ಪರಮ ಸೌಭಾಗ್ಯ. ಉಡುಪಿಗೆ ಬರುವುದೆಂದರೆ ನನಗೆ ಬಹಳ ಸಂತಸದ ವಿಚಾರ ಎಂದರು.
ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ʼಜೈ ಶ್ರೀಕೃಷ್ಣʼ ಎಂದು ಮೂರು ಬಾರಿ ಘೋಷಣೆ ಮೊಳಗಿಸಿ ʼಎಲ್ಲರಿಗೂ ನಮಸ್ಕಾರʼ ಎಂದು ಕನ್ನಡದಲ್ಲಿ ಹೇಳಿ ಬಳಿಕ ಹಿಂದಿಯಲ್ಲಿ ಮಾತು ಮುಂದುವರಿಸಿದರು. ಭಾಷಣಕ್ಕೂ ಮುನ್ನ, ಸಭೆಯಲ್ಲಿ ಮೋದಿಯವರ ಭಾವಚಿತ್ರ ರಚಿಸಿ ಅದನ್ನು ಹಿಡಿದು ಕೂತಿದ್ದ ಮಕ್ಕಳಿಂದ ಅದನ್ನು ಸಂಗ್ರಹಿಸಿ ತನಗೆ ಕಳಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ತಾನು ಆ ಮಕ್ಕಳ ಪರಿಶ್ರಮವನ್ನು ಗುರುತಿಸಿದ್ದು, ಅವರಿಗೆ ಪ್ರತ್ಯುತ್ತರ ನೀಡುವುದಾಗಿ ತಿಳಿಸಿದರು.
ನನ್ನ ಜನ್ಮ ಗುಜರಾತ್ನಲ್ಲಿ ಆಗಿದೆ. ಗುಜರಾತ್ ಹಾಗೂ ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆತ್ಮೀಯ, ಆಧ್ಯಾತ್ಮಿಕ ಖುಷಿ ನೀಡಿದೆ. ಉಡುಪಿ ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಲಕ್ಷ ಕಂಠದ ಮೂಲಕ ಗೀತಾದ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರೋದು ಹೊಸ ಶಕ್ತಿ ನೀಡಿದೆ. ಉಡುಪಿಯಲ್ಲಿ ಧರ್ಮ ಮತ್ತು ಸೇವೆ ಸಂಗಮವಿದೆ. ಲಕ್ಷಾಂತರ ಭಕ್ತರಿಗೆ ಇಲ್ಲಿ ಅನ್ನ ದಾಸೋಹ ನಡೆಯುತ್ತಿದೆ. ದಾಸರ ಪದಗಳು ಕನ್ನಡಿಗರ ಮನೆ ಮನದಲ್ಲಿದೆ ಎಂದು ಹೇಳುವ ಮೂಲಕ ಪುರಂದರ ದಾಸ ಮತ್ತು ಕನಕ ದಾಸರನ್ನು ಸ್ಮರಿಸಿದರು.
ಮೂರು ದಿನದ ಹಿಂದೆ ನಾನು ಅಯೋಧ್ಯೆಯಲ್ಲಿ ಇದ್ದೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಧರ್ಮಧ್ವಜ ಸ್ಥಾಪನೆ ಆಗಿದೆ. ಅಯೋಧ್ಯೆಯಿಂದ ಉಡುಪಿಯವರೆಗೂ ಇದಕ್ಕೆ ರಾಮ ಭಕ್ತರು ಸಾಕ್ಷಿಯಾಗಿದ್ದಾರೆ ಎಂದು ಮೋದಿ ಬಣ್ಣಿಸಿದರು. ಉಡುಪಿಯಲ್ಲಿ ಮಧ್ವಾಚಾರ್ಯರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಧರ್ಮಕಾರ್ಯದಲ್ಲಿ ತೊಡಗಿವೆ. ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ. ನನ್ನಂತಹ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಯೋಜನೆಗಳನ್ನ ಮಾಡಲಾಗಿದೆ ಎಂದು ಮೋದಿ ಹೇಳಿದರು.
ಪಹಲ್ಗಾಮ್ನಲ್ಲಿ ಕನ್ನಡಿಗರು ಪ್ರಾಣ ತೆತ್ತರು. ಆದರೆ ನವಭಾರತ ಯಾರ ಮುಂದೆಯೂ ತಲೆಬಾಗಲ್ಲ. ನಮಗೆ ಶಾಂತಿ ಸ್ಥಾಪನೆಯೂ ಗೊತ್ತು, ರಕ್ಷಣೆಯೂ ಗೊತ್ತು. ಮಹಿಳೆಯರು, ನಾಗರಿಕರ ರಕ್ಷಣೆ ನಮ್ಮ ಹೊಣೆ ಎಂದು ಮೋದಿ ನುಡಿದರು.
ಇದಕ್ಕೂ ಮುನ್ನ ಮೋದಿ ಅವರಿಗೆ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹಪೂರ್ವಕವಾಗಿ ʼಭಾರತ ಭಾಗ್ಯ ವಿಧಾತʼ ಎಂದು ಬಿರುದನ್ನು ನೀಡಲಾಯಿತು. ಮೋದಿಯವರ ಕೈಗೆ ಕಂಕಣವನ್ನು ಕಟ್ಟಿ, ಶ್ರೀಕೃಷ್ಣ ದೇವರ ಚಿತ್ರವನ್ನು ನೀಡಿ ರಾಷ್ಟ್ರ ರಕ್ಷಣೆಯ ದೀಕ್ಷೆಯನ್ನು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನೀಡಿದರು. ವಿಶಿಷ್ಟವಾಗಿ ಅಲಂಕೃತವಾದ ನವಿಲುಗರಿ ಇರುವ ಕಿರೀಟವನ್ನು ಮೋದಿಯವರಿಗೆ ಶ್ರೀಪಾದರು ಧರಿಸಿ, ಬಿರುದನ್ನು ನೀಡಿದರು.
ನರೇಂದ್ರ ಎಂದರೆ ಅರ್ಜುನ ಎಂದರ್ಥ. ಶ್ರೀ ಕೃಷ್ಣನ ಬಳಿ ಪ್ರಧಾನಿ ಮೋದಿ ಅರ್ಜುನನಾಗಿ ಬಂದಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮನನ್ನು ಸ್ಥಾಪಿಸಿ ಶ್ರೀ ಕೃಷ್ಣನ ಕ್ಷೇತ್ರಕ್ಕೆ ಮೋದಿ ಆಗಮಿಸಿದ್ದಾರೆ. 14 ವರ್ಷದ ಮೇಲೆ ಶ್ರೀರಾಮ ಅಯೋಧ್ಯೆಗೆ ಮರಳಿದ್ದ. ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 14 ವರ್ಷದ ಹಿಂದೆ ನರೇಂದ್ರ ಮೋದಿಯವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಂದಿದ್ದರು. ಆಗಲೂ ನಮ್ಮ ಪರ್ಯಾಯ ನಡೆಯುತ್ತಿತ್ತು. ನಮ್ಮದು ಇಂದ್ರ ಪರ್ಯಾಯ, ನಾನು ಸುಗುಣೇಂದ್ರ ಅವರು ನರೇಂದ್ರ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿಯ ಕೃಷ್ಣ ಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಷ್ಟಮಠದ ಪ್ರಮುಖರು ಸ್ವಾಗತಿಸಿದರು. ಬಳಿಕ ಸ್ವರ್ಣಲೇಪಿತ ಕನಕನ ಕಿಂಡಿ ಉದ್ಘಾಟಿಸಿದರು. ಬಳಿಕ ನವಗ್ರಹ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನವನ್ನು ಮೋದಿ ಪಡೆದರು. ಮಠದಲ್ಲಿ ಈ ಸಂದರ್ಭದಲ್ಲಿ ಇದ್ದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಮೋದಿಯವರು ಮಾತನಾಡಿಸಿದರು.
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಆಯೋಜಿಸಲಾದ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ, ನೆರೆದ ಸಾವಿರಾರು ಮಂದಿಯ ಜೊತೆಗೆ ಗೀತೆಯ ಹತ್ತು ಶ್ಲೋಕಗಳನ್ನು ಸಾಮೂಹಿಕವಾಗಿ ಓದಿದರು. ಇದಕ್ಕೂ ಮುನ್ನ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ಮೋದಿ ರೋಡ್ ಶೋ ನಡೆಸುತ್ತಿದ್ದರೆ ಜನರು ಮೋದಿಯವರಿಗೆ ಹೂ ಮಳೆ ಸುರಿಸಿದ್ದಾರೆ. ಮೋದಿಯವರನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ನೆರೆದು ಅವರಿಗೆ ಸ್ವಾಗತ ಕೋರಿದರು.








