ಗುಡಿಬಂಡೆ:
ರಾಜ್ಯದಲ್ಲಿ ದಲಿತ ಸಿಎಂ, ಅಧಿಕಾರ ಹಂಚಿಕೆ ಕಾರ್ಯಕ್ರಮಕ್ಕೆ ಸದ್ಯಕ್ಕೆ ಮುಗಿದಿದೆ. ಈ ಸಂಬಂಧ ಕಾಂಗ್ರೇಸ್ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಈ ವಿಚಾರ ಬೇಡ ಎಂದು ಆಹಾರ ಸಚಿವ ಡಾ.ಕೆ.ಹೆಚ್.ಮುನಿಯಪ್ಪ ತಿಳಿಸಿದರು.ಪಟ್ಟಣದ ಹೊರವಲಯದ ಅಂಬೇಡ್ಕರ್ ವೃತ್ತದ ಬಳಿಯ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಗೌರಿಬಿದನೂರಿನಲ್ಲಿ ಕರ್ನಾಟಕ ಮಾದಾರ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಗುಡಿಬಂಡೆಗೆ ಬಂದಿದ್ದೇನೆ ಎಂದರು. ಈ ವೇಳೆ ದಲಿತ ಸಿಎಂ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಆ ವಿಚಾರ ಮುಗಿದಿದೆ. ಈ ಕುರಿತು ಕಾಂಗ್ರೇಸ್ ಹೈ ಕಮಾಂಡ್ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಬಳಿಕ ರೇಷನ್ ಕಾರ್ಡ್ ವಿಚಾರಕ್ಕೆ ಮಾತನಾಡಿ, ಈಗಾಗಲೇ ನಿಯಾಮವಳಿಗಳ ಪ್ರಕಾರ ಸ್ವಂತ ವಾಹನ ಇರುವವರು ಹಾಗೂ ಕೆಲಸ ಮಾಡುತ್ತಿರುವವರ ಸೇರಿದಂತೆ ಹಲವರ ಕಾರ್ಡ್ಗಳು ಎಪಿಎಲ್ ಆಗಿ ಬದಲಾಗಿದೆ. ಒಂದು ವೇಳೆ ಅರ್ಹರಾಗಿದ್ದು ತಮ್ಮ ಕಾರ್ಡ್ ಎಪಿಎಲ್ ಆಗಿದ್ದರೇ ಅಂತಹವರು ತಹಸೀಲ್ದಾರ್ ರವರಿಗೆ ಕೂಡಲೇ ಅರ್ಜಿ ಸಲ್ಲಿಸಿ ಬದಲಾಯಿಸಿಕೊಳ್ಳಬಹುದು ಎಂದರು.ಈ ವೇಳೆ ಗುಡಿಬಂಡೆಯ ದಲಿತ ಮುಖಂಡರಾದ ರಮಣಪ್ಪ, ಜೀವಿಕ ನಾರಾಯಣಸ್ವಾಮಿ, ಮುರಳಿ ಸೇರಿದಂತೆ ಹಲವರು ಇದ್ದರು.








