ಕೊಲೊಂಬೋ:
ಸದಾ ಒಂದಿಲ್ಲೊಂದು ಎಡವಟ್ಟವನ್ನು ಮಾಡುವ ಪಾಕಿಸ್ತಾನ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ದಿತ್ವಾ ಚಂಡಮಾರುತದಿಂದ ತತ್ತರಿಸುತ್ತಿರುವ ಶ್ರೀಲಂಕಾಗೆ ಪಾಕಿಸ್ತಾನದಿಂದ ಅವಧಿ ಮೀರಿದ ಮೆಡಿಕಲ್ ಕಿಟ್ ಮತ್ತು ಆಹಾರ ಪದಾರ್ಥಗಳನ್ನು ನೀಡಿದೆ ಎಂಬ ಬಹು ದೊಡ್ಡ ಆರೋಪವೊಂದು ಕೇಳಿ ಬಂದಿದ್ದು, ಇದಕ್ಕೆ ಸಬಂಧಿಸಿದಂತೆ ಕೆಲ ಫೋಟೋಗಳು ವೈರಲ್ ಆಗುತ್ತಿವೆ. ಇದು ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡಿದ್ದು, ಶ್ರೀಲಂಕಾ ಮತ್ತು ವಿದೇಶಾಂಗ ಇಲಾಖೆಗಳಲ್ಲಿ ಕಳವಳ ಹುಟ್ಟುಹಾಕಿದೆ.
ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ನಲುಗಿ ಹೋಗಿದ್ದು, ಜನರ ಬದುಕು ಬೀದಿಪಾಲಾಗಿದೆ. ಈ ಹಿನ್ನೆಲೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ದ್ವೀಪ ರಾಷ್ಟ್ರಕ್ಕೆ ಸಹಾಯ ಹಸ್ತ ಚಾಚಿವೆ. ಸಹಾಯ ಮಾಡುವ ನೆಪ ತೋರಿರುವ ಪಾಕಿಸ್ತಾನ ಶ್ರೀಲಂಕಾಗೆ ಕಳುಹಿಸಲಾಗಿದ್ದ ವೈದ್ಯಕೀಯ ಕಿಟ್, ಆಹಾರ ಸರಬರಾಜು ಮತ್ತು ಅಗತ್ಯ ವಸ್ತುಗಳನ್ನು ಕಳುಹಿಸಿತ್ತು. ಆದರೆ ಅದೆಲ್ಲ ಅವಧಿ ಮೀರಿದ ವಸ್ತುಗಳು ಎಂದು ತಿಳಿದು ಬಂದಿದೆ. ಇದು ಪಾಕಿಸ್ತಾನಕ್ಕೆ ಮತ್ತೊಂದು ರಾಜತಾಂತ್ರಿಕ ನಿಲುವನ್ನು ಎದುರಿಸುವ ಸಂಕಷ್ಟಕ್ಕೆ ಸಿಲುಕಿಸಿದೆ. ದಿತ್ವಾ ಚಂಡಮಾರುತದ ಪರಿಣಾಮವಾಗಿ ಉಂಟಾದ ಭೂಕುಸಿತ ಮತ್ತು ಪ್ರವಾಹದಿಂದ ಹಾನಿಗೊಳಗಾಗಿರುವ ಶ್ರೀಲಂಕಾಗೆ ಕಳುಹಿಸಲಾಗಿರುವ ಈ ಸರಕಿನ ಅವಧಿ ಮೀರಿದ್ದು, ಅದು ಉಪಯೋಗಿಸಲು ಯೋಗ್ಯವಾಗಿಲ್ಲ ಎನ್ನಲಾಗಿದೆ.
ಇದು ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡಿದ್ದು, ಶ್ರೀಲಂಕಾ ಮತ್ತು ವಿದೇಶಾಂಗ ಇಲಾಖೆಗಳಲ್ಲಿ ಕಳವಳ ಹುಟ್ಟುಹಾಕಿದೆ. ಕೊಲಂಬೊ ರಾಜತಾಂತ್ರಿಕ ಮಾರ್ಗಗಳ ಮೂಲಕ ಇಸ್ಲಾಮಾಬಾದ್ಗೆ ತನ್ನ ಅಸಮಧಾನ ತಿಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಪಾಕ್ ಯತ್ನಿಸುತ್ತಿದೆ. ಆದರೆ ಇದೇ ವೇಳೆ ಈ ಘಟನೆ ನಡೆದಿರುವುದು ಪಾಕಿಸ್ತಾನದ ಮೇಲಿನ ನಂಬಿಕೆ ಮತ್ತು ವಿಶ್ವಾಸದ ಮೇಲೆ ಸಂಶಯ ಹುಟ್ಟುಹಾಕಿವೆ. ಈ ಕುರಿತು ಶ್ರೀಲಂಕಾ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, “ವಿಶೇಷವಾಗಿ ನಮ್ಮ ರಾಷ್ಟ್ರವು ಸಂಕಷ್ಟದಲ್ಲಿ ಸಿಲುಕಿಕೊಂಡಿರುವಾಗ ಪಾಕಿಸ್ತಾನದಿಂದ ಬಂದಿರುವ ಈ ನೆರವಿನ ಸರಕು ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಘಟನೆಯು ನಮಗೆ ಬರುತ್ತಿರುವ ಎಲ್ಲಾ ನೆರವಿನ ಸರಕುಗಳಿಗೆ ಮತ್ತು ವಿಶೇಷವಾಗಿ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಕಳುಹಿಸಿದ ಹಿನ್ನೆಲೆ ಹೊಂದಿರುವ ರಾಷ್ಟ್ರಗಳಿಂದ ಬರುವ ಎಲ್ಲಾ ಸರಕರನ್ನು ತಪಾಸಣೆ ನಡೆಸಲು ಪ್ರೇರೇಪಿಸಿದೆ. ಇಂತಹ ಸಮಯದಲ್ಲಿ ನೆರೆ ರಾಷ್ಟ್ರಗಳಿಂದ ಬಂದ ನೆರವು ಸಾರ್ವಜನಿಕ ಸುರಕ್ಷತೆ ಹೊಂದಿದೆಯಾ? ಎಂದು ಖಚಿತಪಡಿಸಿಕೊಳ್ಳಲು ಎಚ್ಚರಿಕೆಯ ತಪಾಸಣೆ ನಡೆಸಲು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಈ ರೀತಿಯ ಟೀಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. 2015ರ ನೇಪಾಳ ಭೂಕಂಪದ ಸಮಯದಲ್ಲೂ, ಹಿಂದೂ ಬಹುಸಂಖ್ಯಾತ ರಾಷ್ಟ್ರಕ್ಕೆ ಗೋಮಾಂಸದಿಂದ ತಯಾರಿಸಲಾಗಿದ್ದ ಉಪಹಾರವನ್ನು ಕಳುಹಿಸಿತ್ತು. ಆ ಸಂದರ್ಭದಲ್ಲಿ ಪಾಕ್ ವಿಶ್ವದ ಕೆಂಗಣ್ಣಿಗೆ ಗುರಿಯಾಗಿತ್ತು.
ಮಂಗಳವಾರ ನಾಲ್ಕು ದೇಶಗಳಲ್ಲಿ ಸುಮಾರು 1200 ಜನರನ್ನು ಬಲಿ ತೆಗೆದುಕೊಂಡ ಭೀಕರ ಪ್ರವಾಹದಲ್ಲಿ ಸಿಲುಕಿರುವ ಲಕ್ಷಾಂತರ ಜನರ ಸಹಾಯಕ್ಕೆ ಇಂಡೋನೇಷ್ಯಾ, ಶ್ರೀಲಂಕಾದ ಸರ್ಕಾರ ಮತ್ತು ಹಲವು ನೆರವು ನೀಡುತ್ತಿರುವ ರಾಷ್ಟ್ರಗಳು ಧಾವಿಸುವ ಕೆಲಸ ಮಾಡುತ್ತಿವೆ. ಕಳೆದ ವಾರ ಎರಡು ಪ್ರತ್ಯೇಕ ಉಷ್ಣವಲಯದ ಚಂಡಮಾರುತದೊಂದಿಗೆ ಸುರಿದ ಧಾರಾಕಾರ ಮಳೆಯು ಅಲ್ಲಿನ ಜನಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಲ್ಲಿಯವರೆಗೆ ಶ್ರೀಲಂಕಾದಲ್ಲಿ ಕನಿಷ್ಠ 390 ಜನರು ಮೃತಪಟ್ಟಿದ್ದಾರೆ. ಮತ್ತು ಇನ್ನೂ 352 ಜನರು ನಾಪತ್ತೆಯಾಗಿದ್ದಾರೆ. ಈ ಚಂಡಮಾರುತವನ್ನು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಸಯಕೆ, “ನಮ್ಮ ದೇಶದ ಇತಿಹಾಸದಲ್ಲಿ ಈವರೆಗೆ ಸಂಭವಿಸಿರುವ ನೈಸರ್ಗಿಕ ವಿಕೋಪಗಳಲ್ಲಿ ಇದು ಅತ್ಯಂತ ಸವಾಲಿನದ್ದಾಗಿದೆ” ಎಂದು ಕರೆದಿದ್ದಾರೆ.








