ನವದೆಹಲಿ:
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಬೇಹುಗಾರಿಕೆ ಮತ್ತು ಮಾಹಿತಿ ರವಾನಿಸಿದ ಆರೋಪದ ಮೇಲೆ ಗುರುಗ್ರಾಮದ ವಕೀಲನೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ವಕೀಲನ ಬಳಿ ಎರಡು ಬ್ಯಾಂಕ್ ಖಾತೆಗಳಿದ್ದು, ಹಣ ಸಂಗ್ರಹಿಸಲು ಏಳು ಬಾರಿ ಅಮೃತಸರಕ್ಕೆ ಭೇಟಿ ನೀಡಿದ್ದ ಎಂದು ಆತನ ಸ್ನೇಹಿತ ಮುಷರಫ್ ಅಲಿಯಾಸ್ ಪರ್ವೇಜ್ ಪೊಲೀಸರಿಗೆ ತಿಳಿಸಿದ್ದಾನೆ. ಮುಷರಫ್ ಪ್ರಕಾರ, 2022 ರಲ್ಲಿ ಸೋಹ್ನಾ ನ್ಯಾಯಾಲಯದಲ್ಲಿ ಇಂಟರ್ನ್ಶಿಪ್ ಮಾಡುವಾಗ ಬಂಧಿತ ವಕೀಲ ರಿಜ್ವಾನ್ ಅವರೊಂದಿಗೆ ಸ್ನೇಹ ಬೆಳೆಸಿದ್ದ. ರಿಜ್ವಾನ್ ಗುರುಗ್ರಾಮ್ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಿದ್ದ ಎಂದು ಆತ ಹೇಳಿದ್ದಾನೆ.
ಜುಲೈನಲ್ಲಿ ತಾನು ಮತ್ತು ರಿಜ್ವಾನ್ ಅಮೃತಸರ ವಾಘಾ ಗಡಿಗೆ ತಮ್ಮ ಕಾರಿನಲ್ಲಿ ಹೋಗಿದ್ದೆವು ಎಂದು ಮುಷರಫ್ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಅವರು ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದರು, ಅಲ್ಲಿ ರಿಜ್ವಾನ್ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಜನರಿಂದ ಹಣವನ್ನು ತೆಗೆದುಕೊಂಡಿದ್ದರು ಎಂದು ವಿಚಾರಣೆ ಸಮಯದಲ್ಲಿ ತಿಳಿದು ಬಂದಿದೆ. ವಿಚಾರಣೆಯ ಸಮಯದಲ್ಲಿ, ರಿಜ್ವಾನ್ ಸ್ಕಾರ್ಪಿಯೋ ಮತ್ತು ಸ್ಕೋಡಾ ಕಾರು ಚಾಲನೆ ಮಾಡುವವರಿಂದ ಹಣ ಸಂಗ್ರಹಿಸಲು ಅಮೃತಸರಕ್ಕೆ ಏಳು ಬಾರಿ ಪ್ರಯಾಣ ಬೆಳೆಸಿದ್ದ ಎಂದು ತಿಳಿದುಬಂದಿದೆ. ರಿಜ್ವಾನ್ 41 ಲಕ್ಷ ರೂ. ನಗದು ಸಂಗ್ರಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಪಾಕಿಸ್ತಾನದ ಬೇಹುಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ನುಹ್ ವಿಶೇಷ ತನಿಖಾ ತಂಡ (SIT), ಅಮೃತಸರದಿಂದ ಇದುವರೆಗೆ ಮೂವರು ಜನರನ್ನು ಬಂಧಿಸಿದೆ – ಸಂದೀಪ್ ಸಿಂಗ್ ಅಲಿಯಾಸ್ ಗಗನ್, ಅಮನ್ದೀಪ್ ಸಿಂಗ್ ಮತ್ತು ಜಸ್ಕರನ್ ಸಿಂಗ್ – ಪಾಕಿಸ್ತಾನಿ ನಿರ್ವಾಹಕರಿಂದ ರಿಜ್ವಾನ್ಗೆ ಹವಾಲಾ ಮಾರ್ಗಗಳ ಮೂಲಕ ಕೋಟ್ಯಂತರ ರೂಪಾಯಿಗಳನ್ನು ವರ್ಗಾಯಿಸಿದ ಮತ್ತು ಪಂಜಾಬ್ನಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಹಣಕಾಸು ಒದಗಿಸಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿರುವವರನ್ನು ಹುಡುಕಿ ಬಂಧಿಸಲಾಗುತ್ತಿದೆ. ಡಿಆರ್ಡಿಒ ಅತಿಥಿ ಗೃಹದ ವ್ಯವಸ್ಥಾಪಕನನ್ನು ಪೊಲೀಸ್ ಸಿಐಡಿ (ಭದ್ರತಾ) ಗುಪ್ತಚರ ದಳ ಕಳೆದ ತಿಂಗಳು ಬಂಧಿಸಲಾಗಿತ್ತು. ಈತ ಚಂದನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿರುವ ಡಿಆರ್ಡಿಒ ಅತಿಥಿ ಗೃಹದ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಪಾಕಿಸ್ತಾನದ ಗುಪ್ತಚರ ವಿಭಾಗದ ಅಧಿಕಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದನೆಂದು ಮತ್ತು ಭಾರತದ ರಕ್ಷಣಾ ಚಟುವಟಿಕೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ.








