ಕೋಲ್ಕತ್ತಾ:
ಹೊಸ ರಾಜಕೀಯ ಪಕ್ಷ ಘೋಷಣೆಗೂ ಮುನ್ನ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಅವರು ಬಂಗಾಳದಲ್ಲಿರುವ ತೃಣಮೂಲ , ಕಾಂಗ್ರೆಸ್ , ಬಿಜೆಪಿ ವಿರೋಧಿ ಶಕ್ತಿಗಳು ಒಂದಾಗುವಂತೆ ಕರೆ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿರೋಧಿಗಳೆಲ್ಲ ಸೇರಿ ಮಹಾಮೈತ್ರಿಕೂಟದೊಂದಿಗೆ ಸ್ಪರ್ಧಿಸೋಣ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಮೈತ್ರಿಕೂಟದಲ್ಲಿ ಸ್ಪರ್ಧಿಸುವಂತೆ ಅವರು ತಿಳಿಸಿದ್ದಾರೆ.
ಸುದ್ದಿಗಾರ ರೊಂದಿಗೆ ಭಾನುವಾರ ಮಾತನಾಡಿದ ಕಬೀರ್, ಪಶ್ಚಿಮ ಬಂಗಾಳದಲ್ಲಿರುವ ಎಲ್ಲಾ ತೃಣಮೂಲ ಕಾಂಗ್ರೆಸ್ ವಿರೋಧಿ ಮತ್ತು ಬಿಜೆಪಿ ವಿರೋಧಿ ಶಕ್ತಿಗಳು ಒಂದಾಗುವಂತೆ ಅಹ್ವಾನ ನೀಡಿದರು. ಮುಂದಿನ ವರ್ಷ ಮಹಾಮೈತ್ರಿಕೂಟದೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸೋಣ ಎಂದು ಹೇಳಿದರು.
ಯಾರು ತಾನೇ ಶ್ರೇಷ್ಠಎಂದು ಭಾವಿಸುತ್ತಾರೋ ಮತ್ತು ತಮ್ಮ ಅಹಂಕಾರವನ್ನು ಬಿಡಲು ಯಾರಿಗೆ ಸಾಧ್ಯವಿರುವುದಿಲ್ಲವೋ ಆ ಸಂದರ್ಭದಲ್ಲಿ, ನನ್ನ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುತ್ತದೆ. ಅಗತ್ಯವಿದ್ದರೆ ನಾನೇ ಪಶ್ಚಿಮ ಬಂಗಾಳದ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ. ನನಗೆ ಆ ಶಕ್ತಿ ಇದೆ ಎಂದು ತಿಳಿಸಿದರು.
ತಮ್ಮ ನಡೆ ಸಂಪೂರ್ಣವಾಗಿ ರಾಜಕೀಯವಾಗಿರುವುದರಿಂದ, ಯಾವುದೇ ಹೆಜ್ಜೆ ಇಡುವ ಮೊದಲು ಹಲವಾರು ಬಾರಿ ಯೋಚಿಸಬೇಕು. ನನ್ನ ಕೆಲಸ ಅಲ್ಪಸಂಖ್ಯಾತ ಮತದಾರರನ್ನು ಒಗ್ಗೂಡಿಸುವುದಾಗಿದೆ. ಹೊಸ ಸರ್ಕಾರ ರಚಿಸುವಲ್ಲಿ ನನ್ನ ಪಕ್ಷವು ಪಾತ್ರ ವಹಿಸುವಂತೆ ಮಾಡಲು ಕನಿಷ್ಠ 90 ಕ್ಷೇತ್ರಗಳಿಂದ ಗೆಲ್ಲುವುದು ನಮ್ಮ ಗುರಿಯಾಗಿದೆ. ಇದು ಸಾಧ್ಯವಾಗದೇ ಇದ್ದರೆ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಿಂಗ್ನಲ್ಲಿ ಬಾಬರಿ ಮಸೀದಿ ಸ್ಥಾಪಿಸುವ ನನ್ನ ಕನಸು ಈಡೇರದೆ ಉಳಿಯಬಹುದು ಎಂದು ಹೇಳಿದರು.
ಮುರ್ಷಿದಾಬಾದ್ ಜಿಲ್ಲೆಯ ಭರತ್ಪುರದಿಂದ ಅಮಾನತುಗೊಂಡ ಆಡಳಿತ ಪಕ್ಷದ ಶಾಸಕ ಕಬೀರ್ ಅವರು ತಮ್ಮ ಪಕ್ಷದ ಮೊದಲ ಆಯ್ಕೆ ಲೋಗೋ ಆಗಿ ‘ಟೇಬಲ್’ ಮತ್ತು ಎರಡನೇ ಆಯ್ಕೆ ‘ಅವಳಿ ಗುಲಾಬಿಗಳು’. ಈ ಎರಡರಲ್ಲಿ ಯಾವುದನ್ನಾದರೂ ನಾನು ಪಡೆಯದಿದ್ದರೆ ಆಗ ಮೂರನೇ ಆಯ್ಕೆಯ ಬಗ್ಗೆ ಯೋಚಿಸುತ್ತೇನೆ ಎಂದು ತಿಳಿಸಿದರು.
ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸದ ಕಬೀರ್, ತಮ್ಮ ಪಕ್ಷದ ಹೆಸರು ಕಾಂಗ್ರೆಸ್ ಮತ್ತು ತೃಣಮೂಲ ರಾಜಕೀಯ ಸಂಘಟನೆಯ ಹೆಸರಿನೊಂದಿಗೆ ಸಂಬಂಧ ಹೊಂದಿರುವುದಿಲ್ಲ. ಆದರೆ ಪಶ್ಚಿಮ ಬಂಗಾಳದ ಜನರು ಇದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ನನ್ನ ಪಕ್ಷವು ಜನಸಾಮಾನ್ಯರನ್ನು ಪ್ರತಿನಿಧಿಸುತ್ತದೆ ಮತ್ತು ಸಾಮೂಹಿಕ ಅಭಿವೃದ್ಧಿಯ ಬಗ್ಗೆ ಮಾತ್ರ ಮಾತನಾಡುತ್ತದೆ ಎಂದು ಹೇಳಿದರು.








