ಹಾವೇರಿ:
ರಾಜ್ಯ ರಾಜಕೀಯದ ಬಗ್ಗೆ ಇತ್ತೀಚೆಗೆ ಅಚ್ಚರಿ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು , ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ಮತ್ತೊಮ್ಮೆ ಶಾಕಿಂಗ್ ಭವಿಷ್ಯ ಹೇಳಿದ್ದಾರೆ. ಹಾವೇರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಡಿಸೆಂಬರ್ ತಿಂಗಳ ನಂತರ ಸಾವು-ನೋವು ಜಾಸ್ತಿ ಆಗುತ್ತೆ ಎಂದು ತಿಳಿಸಿದ್ದಾರೆ.
ಅಂಬಲಿಯು ಹಳಸೀತು, ಕಂಬಳಿಯು ಹಾಸೀತು ಅಂತ ಹೇಳಿದ್ದೆ. ಕೈಲಾಸದಲ್ಲಿ ಕೈ ಪೂಜೆ ಮಾಡುತ್ತೆ ಅಂತಲೂ ಹೇಳಿದ್ದೆ. ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯ ಉಳಿಸಿದರು, ಸಂಗೊಳ್ಳಿ ರಾಯಣ್ಣ ಕಿತ್ತೂರು ಸಾಮ್ರಾಜ್ಯ ಉಳಿಸಿದರು, ಈ ಕುರುಬ ಸಮಾಜದವರು ಪ್ರಕೃತಿಯಲ್ಲಿ ಭವಿಷ್ಯ ಕಂಡವರು. ಹಾಲುಮತ ಸಮಾಜ ದೈವಿ ಬಲ ಉಳ್ಳ ಪುರಾತನ ಮತ. ಹಾಲುಮತದಿಂದ ಅಧಿಕಾರ ಬಿಡಿಸಿಕೊಳ್ಳೋದು ಕಷ್ಟ ಎಂದು ತಿಳಿಸಿದ್ದಾರೆ. ಭಾರತೀಯ ಪರಂಪರೆಯಲ್ಲಿ ಜ್ಯೋತಿಷ್ಯಕ್ಕೆ ಮಹತ್ವದ ಸ್ಥಾನವಿದೆ. ಈ ಹಿಂದೆ ವ್ಯಾಪಾಸ್ಥರು, ಸಂಕ್ರಾಂತಿ ಫಲ ಕೇಳುತ್ತಿದ್ದರು. ಉದ್ಯಮಿಗಳು, ರಾಜಮಹಾರಾಜರು ಸಂಕ್ರಾಂತಿ ಭವಿಷ್ಯ ನಂಬುತ್ತಿದ್ದರು ಎಂದ ಅವರು, ಬಜೆಟ್ ಆಗೋವರೆಗೆ ಸಿಎಂ ಖುರ್ಚಿಗೆ ಏನೂ ತೊಂದರೆ ಇಲ್ಲ. ಬಜೆಟ್ ಬಳಿಕ ಅವರಾಗೇ ಬಿಟ್ಟರೆ ಬೇರೆಯವರಿಗೆ ಸಿಎಂ ಆಗುವ ಯೋಗ ಇದೆ.
ಶಿವನ ಮಲ್ಲಿಗೆಯ ಮುಡಿಯ ಹೂವು ಬಲಪಾದದಿಂದ ಬಿದ್ದಿದೆ, ಎರಡು ಹೂವು ಶಿವನ ಪಾದ ಸೇರುತ್ತವೆ. ಯುಗಾದಿ ಕಳೆಯಲಿ, ಸಾವು-ನೋವು ಇನ್ನೂ ಹೆಚ್ಚಾಗುತ್ತೆ. ಹಿಂದೆ ಅರಸರ ಅರಮನೆಗೆ ಕಾರ್ಮೋಡ ಕವಿದೀತು ಅಂತಲೂ ಹೇಳಿದ್ದೆ. ಚೀನಾದಲ್ಲಿ ಏನಾಯ್ತು? ಪ್ರಧಾನಮಂತ್ರಿಗಳು ಉಳಿದಿದ್ದೇ ಹೆಚ್ಚು, 2026ಕ್ಕೆ ಇನ್ನೂ ಜಾಸ್ತಿ ಆಗುತ್ತೆ ಯುಗಾದಿ ಕಳೆಯಲಿ ಎಂದು ತಿಳಿಸಿದರು.








