ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ವಿರುದ್ಧ ಪ್ರಚೋದನಕಾರಿ ಘೋಷಣೆ; ಮತ್ತೆ ವಿವಾದದ ಕೇಂದ್ರಬಿಂದುವಾದ ಜೆಎನ್‌ಯು

ದೆಹಲಿ

    ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧ ವಿವಾದಾತ್ಮಕ ಘೋಷಣೆ ಕೂಗುವ ಮೂಲಕ ಜವಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯ   ಮತ್ತೊಮ್ಮೆ ಸದ್ದು ಮಾಡಿದೆ. 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಉಮರ್‌ ಖಾಲಿದ್‌ ಮತ್ತು ಶಾರ್ಜೀಲ್‌ ಇಮಾಮ್‌ಗೆ ಜಾಮೀನು ನೀಡುವುದಕ್ಕೆ ಸುಪ್ರೀಂ ಕೋರ್ಟ್‌ ನೀಡುವುದಕ್ಕೆ ನಿರಾಕರಿಸಿದ ಬೆನ್ನಲ್ಲೇ ಕಾಲೇಜ್‌ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಘೋಷಣೆ ಕೇಳಿ ಬಂದಿದೆ. ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳು ʼʼಜೆಎನ್‌ಯು ನೆಲದಲ್ಲಿ ಮೋದಿ ಮತ್ತು ಶಾ ಅವರ ಸಮಾಧಿ ತೋಡುತ್ತೇವೆʼʼ ಎಂದು ಕೂಗಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

   ವಿಶ್ವವಿದ್ಯಾಲಯದ ಮುಖ್ಯ ಭದ್ರತಾ ಅಧಿಕಾರಿ (CSO) ನವೀನ್‌ ಯಾದವ್‌ ಈ ಬಗ್ಗೆ ಮಾತನಾಡಿ, ʼʼಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಆಕ್ಷೇಪಾರ್ಹ, ಪ್ರಚೋದನಾಕಾರಿ ಘೋಷಣೆಗಳನನು ಕೂಗಿದ್ದಾರೆʼʼ ಎಂದು ತಿಳಿಸಿದ್ದಾರೆ. 

   2020ರ ಜನವರಿ 5ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರದ 6ನೇ ವಾರ್ಷಿಕೋತ್ಸವವನ್ನು ಆಚರಿಸಲು ಸೇರಿದ್ದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (DSF) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ​​(AISA) ಸೇರಿದಂತೆ ಎಡಪಂಥೀಯ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವಿದ್ಯಾರ್ಥಿಗಳು ಈ ವಿವಾದಾತ್ಮಕ ಘೋಷಣೆ ಕೂಗಿದರು.

  “ಕಾರ್ಯಕ್ರಮದಲ್ಲಿ ಉಮರ್‌ ಖಾಲಿದ್‌ ಮತ್ತು ಶಾರ್ಜೀಲ್‌ ಇಮಾಮ್‌ಗೆ ಜಾಮೀನು ನಿರಾಕರಿಸಿ ಸೂಪ್ರೀಂ ಕೋರ್ಟ್‌ ನೀಡದ ತೀರ್ಪಿನ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಕೆಲವು ವಿದ್ಯಾರ್ಥಿಗಳು ಆಕ್ಷೇಪಾರ್ಹ, ಪ್ರಚೋದನಕಾರಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ಉಲ್ಲಂಘನೆʼʼ ಎಂದು ನವೀನ್‌ ಯಾದವ್‌ ತಿಳಿಸಿದರು.

  “ಇಂತಹ ಘೋಷಣೆಗಳನ್ನು ಕೂಗುವುದು ಪ್ರಜಾಪ್ರಭುತ್ವಕ್ಕೆ ಸಂಪೂರ್ಣ ವಿರುದ್ಧವಾದುದು. ಜೆಎನ್‌ಯು ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಮತ್ತು ಸಾರ್ವಜನಿಕ ಸುವ್ಯವಸ್ಥೆ, ಕ್ಯಾಂಪಸ್ ಸಾಮರಸ್ಯ ಮತ್ತು ವಿಶ್ವವಿದ್ಯಾಲಯದ ಸುರಕ್ಷತೆ ಮತ್ತು ಭದ್ರತಾ ವಾತಾವರಣವನ್ನು ಹದಗೆಡಿಸುತ್ತದೆʼʼ ಎಂದು ಹೇಳಿದರು. 

  ಬಿಜೆಪಿ ಈ ಘಟನೆಗೆ ಆಘಾತ ವ್ಯಕ್ತಪಡಿಸಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ್ಲಾ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು. “ಉಮರ್‌ ಖಾಲಿದ್‌ ಮತ್ತು ಶಾರ್ಜೀಲ್‌ ಇಮಾಮ್‌ಗೆ ಜಾಮೀನು ನಿರಾಕರಿಸಿದ ನಂತರ ಜೆಎನ್‌ಯು ಕ್ಯಾಂಪಸ್‌ನಲ್ಲಿ ಸಂವಿಧಾನ ವಿರೋಧಿ ಸ್ಲೋಗನ್‌ ಮೊಳಗೊದೆ. ಇದು ನಗರ ನಕ್ಸಲರ, ಭಾರತ ವಿರೋಧಿ ಗುಂಪು. ಕಾಂಗ್ರೆಸ್‌ನ ಪೃಥ್ವಿರಾಜ್ ಚೌಹಾಣ್‌ ಮತ್ತು ಸಿಪಿಐ(ಎಂ)ನ ಬೃಂದಾ ಕಾರಟ್ ಸೇರಿದಂತೆ ವಿಪಕ್ಷದ ನಾಯಕರು ಖಾಲಿದ್ ಮತ್ತು ಇಮಾಮ್‌ನನ್ನು ಬೆಂಬಲಿಸುತ್ತಿದ್ದಾರೆʼʼ ಎಂದು ಆರೋಪಿಸಿದರು.

  ಬಿಜೆಪಿ ನಾಯಕ ಪ್ರದೀಪ್‌ ಭಂಡಾರಿ ಕೂಡ ಇವರನ್ನು ನಗರ ನಕ್ಸಲರು ಎಂದು ಕರೆದಿದ್ದಾರೆ. ”ನಗರ ನಕ್ಸಲರು ಭಾರತ ವಿರೋಧಿಗಳಾದ ಉಮರ್‌ ಮತ್ತು ಇಮಾಮ್‌ನನ್ನು ಬೆಂಬಲಿಸುತ್ತಿದ್ದಾರೆ. ಇದು ಪ್ರತಿಭಟನೆಯಲ್ಲ. ಬದಲಾಗಿ ಭಾರತ ವಿರೋಧಿ ಮನಸ್ಥಿತಿʼʼ ಎಂದು ಕಿಡಿ ಕಾರಿದರು. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.

Recent Articles

spot_img

Related Stories

Share via
Copy link