ಹುಳಿಯಾರು
ದಾನ, ಧರ್ಮದ ಮಹತ್ವ ಸಾರುವ ಬಕ್ರೀದ್ ಹಬ್ಬವನ್ನು ಹುಳಿಯಾರು ಪಟ್ಟಣ ಸೇರಿದಂತೆ ಯಾಕೂಬ್ ಸಾಬ್ ಪಾಳ್ಯ , ಬಳ್ಳೆಕಟ್ಟೆ, ಕಂಪನಹಳ್ಳಿ, ಯಗಚಿಹಳ್ಳಿ, ಗಾಣಧಾಳು ಮುಂತಾದೆಡೆ ಮುಸ್ಲಿಂ ಬಾಂಧವರು ಬುಧವಾರದಂದು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಎಲ್ಲರೂ ಮುಂಜಾನೆಯೇ ಹೊಸಬಟ್ಟೆ ತೊಟ್ಟು ಜಾಮಿಯಾ, ನೂರಾನಿ, ಮದೀನಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ನಂತರ ಈದ್ಗಾ ಮೈದಾನಕ್ಕೆ ಆಗಮಿಸಿದರು.
ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳು ಈ ಸಂದರ್ಭದಲ್ಲಿ ಹಬ್ಬದ ಸಂದೇಶ ನೀಡಿ ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು.
ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ, ಒಳ್ಳೆತನದಿಂದ ಬಾಳಿರಿ ಎಂದು ಕರೆ ನೀಡಿದರು. ನಂತರ ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಂಧುಗಳು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು