ಬ್ಯಾಡಗಿ:
ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಅಂದಾಜು 600 ಕೋಟಿ ರೂ.ಗಳಲ್ಲಿ ವಿವಿಧ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಿದ್ದು ಅನುದಾನ ಬಿಡುಗಡೆಯಾದ ಕೂಡಲೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಅವರು ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಎಂಜಿಎನ್ಆರ್ಇಜಿ ಯೋಜನೆಯಡಿ ನೂತನವಾಗಿ ನಿರ್ಮಿಸಲಾಗಿರುವ ರಾಜೀವಗಾಂಧಿ ಸೇವಾ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಆಣೂರ ಏತ ನೀರಾವರಿ ಯೋಜನೆಯಲ್ಲಿ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ತಾವು ಹೆಚ್ಚು ಒತ್ತು ನೀಡಿದ್ದು ವಿವಿಧ ಯೋಜನೆಯಡಿ ಕ್ಷೇತ್ರದ ಎಲ್ಲ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ ವಹಿಸಲಾಗುವುದೆಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ರೈತರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ರೈತ ಸಂಪರ್ಕ ರಸ್ತೆಗಳಿಗೆ ನಬಾರ್ಡ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಅಗತ್ಯ ಅನುದಾನದೊಂದಿಗೆ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷ ಸಹದೇವಪ್ಪ ಬನ್ನಿಹಳ್ಳಿ ಮಾತನಾಡಿ ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 50 ಲಕ್ಷ ರೂ.ಗಳ ಕ್ರಿಯಾಯೋಜನೆಯನ್ನು ತಯಾರಿಸಲಾಗಿದ್ದು, ಎನ್ಆರ್ಎಲ್ಎಂ ಯೋಜನೆಯ ಸಹಯೋಗದೊಂದಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ತಿಳಿಸಿದರು.
ತಾ.ಪಂ.ಸದಸ್ಯ ಜಗದೀಶ ಪೂಜಾರ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರ ಸಹಕಾರದೊಂದಿಗೆ ಪಕ್ಷ ಭೇದ ಮರೆತು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಆಯ್ಕೆಯಾದ ಆಯ್ದ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಸಿಲೆಂಡರ್ಗಳನ್ನು ಶಾಸಕರು ವಿತರಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಅಬ್ದುಲ್ಮುನಾಫ ಯಲಿಗಾರ, ಎಪಿಎಂಸಿ ಸದಸ್ಯ ದಾನಗೌಡ ತೋಟದ, ಕೆಸಿಸಿ ಬ್ಯಾಂಕ್ ನಿರ್ದೇಶಕ ಶಿವಪ್ಪ ಮರಡಿ, ಪಿಎಲ್ಡಿ ಬ್ಯಾಂಕ್ ಸದಸ್ಯ ಹನುಮಂತಪ್ಪ ಮಾನೆ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ.ಜಯಕುಮಾರ, ಗ್ರಾ.ಪಂ.ಉಪಾಧ್ಯಕ್ಷೆ ಸುನಂದಾ ಸಾಕರೆ, ಸದಸ್ಯರಾದ ಬಸಪ್ಪ ಕಾಶಿ, ಹನುಮಂತಪ್ಪ ಚೂರಿ, ಮೂಖಪ್ಪ ಅಂಗರಗಟ್ಟಿ, ಶಂಭುಲಿಂಗಪ್ಪ ದ್ಯಾವಣ್ಣನವರ, ರೇಖಾ ಹಿರೇಮಠ, ಶಿವಕ್ಕ ದೊಡ್ಡಮನಿ, ಅಕ್ಕಮ್ಮ ದೇಸೂರ, ಅನೀಲವ್ವ ದೊಡ್ಡಕುರಬರ, ರೇಣುಕಾ ಕರಿಯಣ್ಣನವರ, ಇಂಜನೀಯರ ಮಂಜು ದೊಡ್ಡಗೌಡ್ರ ಧುರೀಣರಾದ ಮಂಜು ಬಿಳಿಯಣ್ಣನವರ, ಎಸ್.ಎನ್.ಬಣಕಾರ, ಶೇಖಪ್ಪ ಕಾಶಿ, ಮಂಜು ತೋಟದ, ಬಿ.ಎಂ.ದೇಸಾಯಿ ಸೇರಿದಂತೆ ಇನ್ನಿತರರಿದ್ದರು. ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಜಗದೀಶ ಮಣ್ಣಮ್ಮನವರ ಸ್ವಾಗತಿಸಿದರು. ಎಸ್.ಬಿ ಶೆಟ್ಟರ ವಂದಿಸಿದರು.
