ಬೆಂಗಳೂರು,ಆ,26:
ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಚಿಂತಕ ಎಂ.ಎಂ ಕಲಬುರಗಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಲು ವಿಶೇಷ ತನಿಖಾ ದಳ (ಎಸ್ಐಟಿ)ದ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.
ಹತ್ಯೆ ಮಾಡುವ, ಹತ್ಯೆಯಾದ ಬಳಿಕ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡರೆ ವಿಚಾರಣೆಯನ್ನು ಹೇಗೆ ಎದುರಿಸಬೇಕೆಂಬ ಸೂಕ್ಷ್ಮ ಸಂಗತಿಗಳ ಬಗ್ಗೆಯೂ ಆರೋಪಿಗಳು ತರಬೇತಿ ಪಡೆದುಕೊಂಡಿದ್ದು, ಇದರಿಂದ ವಿಚಾರಣೆ ತ್ರಾಸದಾಯಕವಾಗಿ ಪರಿಣಮಿಸಿದೆ.ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಆರೋಪಿಗಳೂ ಜಪ, ತಪ ಹಾಗೂ ಮಂತ್ರಗಳ ಪಠಣದಲ್ಲಿ ತೊಡಗಿದ್ದಾರೆ.
ಪ್ರಕರಣ ಸಂಬಂಧ ಭರತ್ ಕುಣ್ರೆ ಎಂಬ ಆರೋಪಿಯನ್ನು ಪೊಲೀಸರು 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಆರೋಪಿಯನ್ನು ವಿಚಾರಣೆಗೊಳಪಡಿಸಿದ ಅಧಿಕಾರಿಗಳು ಆತನಿಂದ ಮಾಹಿತಿಗಳನ್ನು ಸಂಗ್ರಹಿಸಲು ಹರಸಾಹಸ ಪಡುತ್ತಿದ್ದಾರೆ. ವಿಚಾರಣೆ ವೇಳೆ ಆತ ಮೌನಕ್ಕೆ ಜಾರಿದ್ದು, ಆತನ ಮೌನ ಮುರಿಯಲು ಪೊಲೀಸರು ಸಾಕಷ್ಟ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಎಟಿಎಸ್ ಅಧಿಕಾರಿಗಳು ಮಾತನಾಡಿ, ಪ್ರತೀ ಬಾರಿ ಪ್ರಶ್ನೆ ಮಾಡಿದಾಗಲೂ, ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಕುರಿತು ಪ್ರಶ್ನೆಗಳನ್ನು ಕೇಳಿದಾಕ್ಷಣ ಮೌನಕ್ಕೆ ಹೋಗುತ್ತಾನೆ ಹಾಗೂ ಜಪ, ಮಂತ್ರಗಳನ್ನು ಪಠಿಸಲು ಆರಂಭಿಸುತ್ತಾನೆಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಮೊದಲ ಬಾರಿಗೆ ವಿಚಾರಣೆ ಪೊಲೀಸರು ಹಾಗೂ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಗಳು ಆರೋಪಿಸಿದ್ದರು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಇದೀಗ ಜಪ, ಮಂತ್ರಗಳಂತಹ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಹಿಂದೂ ಉಗ್ರಗಾಮಿಗಳ ಗುಂಪಿನಲ್ಲಿ ಇದೂ ಕೂಡ ತರಬೇತಿಯ ಒಂದು ಭಾಗವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೊದಲ ಆರೋಪಿ ಟಿ.ನವೀನ್ ಕುಮಾರ್ ಸುಳ್ಳು ಪತ್ತೆ ಪರೀಕ್ಷೆಗೊಳಪಡಲು ನಿರಾಕರಿಸಿದ್ದ ಎಂದು ಬೆಂಗಳೂರು ತನಿಖಾ ತಂಡ ಮಹಾರಾಷ್ಟ್ರದ ಎಟಿಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಇದಲ್ಲದೆ, ಆರೋಪಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದರು. ಇದೇ ರೀತಿಯಲ್ಲಿಯೇ ಇದೀಗ ಆರೋಪಿಗಳಾದ ವೈಭವ್ ರಾವತ್, ಶರದ್ ಕಲ್ಸ್ಕರ್ ಮತ್ತು ಸುಧಾನ್ವಾ ಗೊಂಡಾಲ್ಕರ್ ಕೂಡ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
