ಚಳ್ಳಕೆರೆ
ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ನೈರ್ಮಲ್ಯ ಸ್ವಚ್ಚವಾಗಿದ್ದಲ್ಲಿ ಎಲ್ಲಾ ಕಾರ್ಯಗಳಿಗೂ ಸ್ಪೂರ್ತಿಯಾಗುತ್ತದೆ. ಸ್ವಚ್ಚತೆಯ ಬಗ್ಗೆ ಕೇವಲ ಮಾತುಗಳನ್ನು ಆಡುವ ಬದಲು ಸ್ವಚ್ಚತಾ ಕಾರ್ಯವನ್ನು ಮಾಡುವ ಮೂಲಕ ಸ್ವಚ್ಚತಾ ಅಂದೋಲವನ್ನು ಯಶಸ್ಸಿಗೊಳಿಸಲು ಮುಂದಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು.
ಅವರು, ಶನಿವಾರ ನಗರದ ಬಾಪೂಜಿ ವಿದ್ಯಾ ಸಂಸ್ಥೆಯ ಪ್ರಧಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ವಚ್ಚತಾ ಅಂದೋಲನ ಕಾರ್ಯಕ್ರಮಕ್ಕೆ ತಮ್ಮ ಕಚೇರಿ ಆವರಣದಲ್ಲೇ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಇಡೀ ವರ್ಷ ತಮ್ಮ ಶಿಕ್ಷಣದ ಕಲಿಕೆಯ ಜೊತೆಯಲ್ಲಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸ್ವಚ್ಚತಾ ಅಂದೋಲನದ ರೂವಾರಿಗಳಾಗಿ ಕಾರ್ಯನಿರ್ವಹಿಸಬೇಕು.
ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಬೇಕು. ಸ್ವಚ್ಚತೆ ಎಂಬುವುದು ಎಲ್ಲರ ಮೂಲಮಂತ್ರವಾಗಬೇಕು ಎಂದರು.
ಎನ್ಎಸ್ಎಸ್ ಅಧಿಕಾರಿ ಜೆ.ತಿಪ್ಪೇಸ್ವಾಮಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಚ್ಚತಾ ಅಂದೋಲವನ್ನು ನಡೆಸಲು ಯೋಜನೆ ಮಾಡಿದ್ದು, ಪ್ರಾರಂಭದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣವನ್ನೇ ಸ್ವಚ್ಚಗೊಳಿಸಲು ತೀರ್ಮಾನಿಸಲಾಯಿತು. ಕಾರಣ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಬದುಕಿಗೆ ಯಾವುದೇ ವಿಘ್ನ ಎದುರಾಗದಂತೆ ಶ್ರೀಗಣೇಶ ಆಶೀರ್ವಾದ ಅವಶ್ಯಕತೆ ಇದ್ದು, ಇಲ್ಲೇ ಶ್ರೀಗಣೇಶ ಉತ್ಸವ ಆಚರಣೆ ನಡೆಯಬೇಕಿದ್ದು, ಈ ಆವರಣವನ್ನು ಸ್ವಚ್ಚಗೊಳಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿಆರ್ಪಿ ರುದ್ರಮುನಿ, ಎನ್.ಮಾರಣ್ಣ, ಪ್ರಾಂಶುಪಾಲ ಓ.ಬಾಬುಕುಮಾರ್, ಪ್ರಾಧ್ಯಾಪಕರಾದ ಉಮೇಶ್, ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
