ಚಿತ್ರದುರ್ಗ
ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡುವಲ್ಲಿ ವಿಳಂಭ ಧೋರಣೆಯನ್ನು ಅನುಸರಿಸುತ್ತಿರುವ ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ,ನಾಗಪ್ಪ ತಿಳಿಸಿದ್ದಾರೆ.
ನಗರದ ಕಛೇರಿಯಲ್ಲಿ ಸಂಘದ ಅಧ್ಯಕ್ಷ ವಿ.ನಾಗಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜನಾಂಗದ ಹಿತದೃಷ್ಠಿಯಿಂದ ಕಾಡುಗೊಲ್ಲ ಜನಾಂಗಕ್ಕೆ ರಾಜ್ಯ ಸರ್ಕಾರವು ಈ ಕೂಡಲೇ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಸರ್ಕಾರ ಆದೇಶ ಮಾಡಿ ಸುಮಾರು ವರ್ಷವೇ ಕಳೆದರು ಸರ್ಕಾರದ ಆದೇಶ ಸರಿಯಾಗಿ ಜಾರಿಯಾಗದೆ ಇರುವುದು. ದುರದೃಷ್ಠಕರ ಬೆಳವಣಿಗೆಯಾಗಿದೆ ಎಂದು ತಿಳಿಸಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಲುವಾಗಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಪ್ರಧಾನ ಕಾರ್ಯದರ್ಶಿ ಶಿವುಯಾದವ್ ಮಾತನಾಡಿ ಇಡೀ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಕಾಡುಗೊಲ್ಲರವನ್ನು ನಿರ್ಲಕ್ಷಿಸುತ್ತಾ ಬಂದಿದೆ. ಎಲ್ಲಾ ಜನಾಂಗಕ್ಕೆ ಅಭಿವೃದ್ಧಿ ಪ್ರಾಧಿಕಾರಿಗಳನ್ನು ಮಾಡಿಕೊಟ್ಟ ಸರ್ಕಾರಗಳು ಕಾಡುಗೊಲ್ಲ ಜನಾಂಗಕ್ಕೆ ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರ ಮಾಡಿಕೊಡದಿರುವುದು ಖಂಡನೀಯ. ವಾಸಿಸುವವೇ ಮನೆಯ ಒಡೆಯ ಎಂಬ ಕಾನೂನು ಜಾರಿಗೆ ಬಂದಿದ್ದರೂ ಇಡೀ ರಾಜ್ಯದಲ್ಲಿ ಎಲ್ಲಿಯೂ ಕೂಡಾ ಕಾರ್ಯ ರೂಪಕ್ಕೆ ಬರದೇ ಇರುವುದು ದುರದೃಷ್ಠಕರ ಬೆಳವಣಿಗೆಯಾಗಿದೆ. ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತಾಗಿ ಕಾಡುಗೊಲ್ಲರ ಹಟ್ಟಿಗಳ ಪರಿಸ್ಥಿತಿ. ಇಂದಿಗೂ ಕಾಡುಗೊಲ್ಲರ ಹಟ್ಟಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಸಮಾಜದ ಮುಖ್ಯವಾಹಿನಿಯಿಂದ ಬಹುದೂರ ಉಳಿದಿದೆ. ಜನಾಂಗದ ಉಳಿವಿಗಾಗಿ ಮತ್ತು ಕಾಡುಗೊಲ್ಲರ ಹಟ್ಟಿಗಳ ಅಭಿವೃದ್ಧಿಗಾಗಿ ರಾಜ್ಯದ ಎಲ್ಲಾ ಕಾಡುಗೊಲ್ಲರು ಒಗ್ಗಟ್ಟಿನಿಂದ ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ನಿರ್ದೇಶಕರು ಹಾಗೂ ಪ್ರಾಚಾರ್ಯರಾದ ಡಾ.ಕಲಮರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ಕಾಡುಗೊಲ್ಲ ಜನಾಂಗವು ಬಹು ಸಂಸ್ಕøತಿಯಿಂದ ಕೂಡಿದ್ದು, ಜಾನಪದ, ಸೋಬಾನೆ ಮತ್ತು ಇತರೆ ಸಾಂಸ್ಕøತಿಕ ಬುಡಕಟ್ಟು ಆಗರವಾಗಿದೆ. ಇಂತಹ ತಳ ಸಮುದಾಯದವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಮೂಲಕ ಪ್ರಗತಿಪರ ಚಿಂತಕರು ಸಮುದಾಯ ಹೋರಾಟಗಾರರು, ಬರಹಗಾರರು ಎಲ್ಲರೂ ಸಂಘಟಿತರಾಗಿ ಸಮುದಾಯ ಕಟ್ಟುವ ದೆಸೆಯಲ್ಲಿ ಪ್ರಮಾಣೀಕ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.ಸಭೆಯಲ್ಲಿ ಕಾಡುಗೊಲ್ಲ ಜನಾಂಗದ ಸ್ಥಿತಿಗತಿಗಳ ಬಗ್ಗೆ ಜನಾಂಗದ ಮುಖಂಡರೊಂದಿಗೆ ಜನಾಂಗದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮುದ್ದಪ್ಪ, ಹೊರಕೇರಪ್ಪ, ದಾವಣಗೆರೆ ಗಂಗಾಧರಪ್ಪ, ತುಮಕೂರಿನ ಕರಿಯಪ್ಪ, ಚಳ್ಳಕೆರೆ ಕರಿಯಪ್ಪ, ಖಜಾನೆ ಇಲಾಖೆ ವೀರಣ್ಣ, ಎ.ಜಿ.ತಿಮ್ಮಯ್ಯ, ಡಾ.ಪ್ರೇಮ, ಕೂನಿಕೇರಿ ರಾಮಣ್ಣ, ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ವೆಂಕಟೇಶ್, ಹನುಮಂತಪ್ಪ, ಶಿವಣ್ಣ ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ