ಬೆಂಗಳೂರು
ಸರ್ಕಾರ ಮತ್ತು ಪಕ್ಷವನ್ನು ಗಟ್ಟಿಗೊಳಿಸಲು ತಾವು ಸೇರಿದಂತೆ ಕಾಂಗ್ರೆಸ್ನ ಮಹಿಳಾ ಶಾಸಕರು ಯಾವ ತ್ಯಾಗಕ್ಕಾದರೂ ಸಿದ್ದ. ತಮಗೆ ಸಚಿವ ಸ್ಥಾನ ನೀಡದಿದ್ದರೂ ಚಿಂತೆಯಿಲ್ಲ. ಸರ್ಕಾರ ಗಟ್ಟಿಯಾಗಿ ಇರಬೇಕು ಎಂಬುದೇ ತಮ್ಮ ನಿಲುವು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ನೂತನ ಲಾಂಛನ ಮತ್ತು ಧ್ವಜ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಬೇಡಿಕೆ ಇರುವುದು ನಿಜ. ಆದರೆ ಮಹಿಳೆಯರು ತ್ಯಾಗಕ್ಕೆ ಹೆಸರುವಾಸಿ. ಹಾಗಾಗಿ ಸರ್ಕಾರ ಮತ್ತು ಪಕ್ಷ ಗಟ್ಟಿಯಾಗಿರಲು ಸಚಿವ ಸ್ಥಾನದ ತ್ಯಾಗಕ್ಕೂ ಸಿದ್ದರಿದ್ದೇವೆ. ನಮಗೆ ಮಂತ್ರಿ ಸ್ಥಾನ ನೀಡದಿದ್ದರೂ ಪರವಾಗಿಲ್ಲ. ಸರ್ಕಾರ ಮತ್ತು ಪಕ್ಷ ಗಟ್ಟಿಯಾಗಿರಬೇಕು ಅಷ್ಟೆ ಎಂದರು.
ಸಾಮಾನ್ಯ ಕಾರ್ಯಕರ್ತೆಯಾಗಿ ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಈಗ ಮಹಿಳಾ ಕಾಂಗ್ರೆಸ್ನ ಜವಾಬ್ದಾರಿ ನೀಡಿದ್ದಾರೆ. ಮನೆ ಮನೆಗೂ ಕಾಂಗ್ರೆಸ್ ಪಕ್ಷವನ್ನು ತಲುಪಿಸಿ, ಪಕ್ಷವನ್ನು ಬಲಗೊಳಿಸುವ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ಬಯಸಿಲ್ಲ. ಪಕ್ಷದ ಮುಖಂಡರು ನನ್ನ ಕೆಲಸ ಗುರುತಿಸಿ ಸ್ಥಾನಮಾನ ನೀಡುತ್ತಾರೆ ಎಂಬ ಭರವಸೆ ಇದೆ ಎಂದರು.
ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಸಮಸ್ಯೆ ಈಗಾಗಲೇ ಮುಗಿದ ಅಧ್ಯಾಯ. ಬ್ಯಾಂಕ್ ಚುನಾವಣೆಯ ನಂತರ ಆ ಸಮಸ್ಯೆ ಬಗೆಹರಿದಿದೆ. ನನ್ನ ಮಟ್ಟಿಗೆ ಈಗ ಯಾವುದೇ ಸಮಸ್ಯೆ ಇಲ್ಲ. ಅದು ತಾಲ್ಲೂಕು ಮಟ್ಟದ ಸಮಸ್ಯೆ ಅಷ್ಟೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು. ಮಹಿಳಾ ಕಾಂಗ್ರೆಸ್ಗೆ ಇದುವರೆವಿಗೂ ಸ್ವಂತ ಧ್ವಜವಾಗಲೀ, ಲಾಂಛನವಾಗಲೀ ಇರಲಿಲ್ಲ. ಈಗ ಸ್ವಂತ ಲಾಂಛನ ಸಿಕ್ಕಿದೆ. ಇದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಹಾಗೂ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಗೆ ಧನ್ಯವಾದಗಳು. ರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಗೊಳಿಸುವ ಕೆಲಸ ಮಾಡುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
