ಬೆಂಗಳೂರು
ಸ್ನೇಹಿತರ ಜೊತೆ ಸಿನಿಮಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ಅಳ್ಳಾಲಸಂದ್ರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್ನನ್ನು ಅಟ್ಟಿಸಿಕೊಂಡು ಹೋಗಿ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಚ್ಚು ಲಾಂಗ್ಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿನಿಮಾ ನೋಡಿಕೊಂಡು ಸ್ನೇಹಿತರ ಕಾರಿನಿಂದ ಬಂದಿಳಿದು ತಮ್ಮ ಕಾರಿನತ್ತ ಹೋಗುತ್ತಿದ್ದಾಗ ಅಡ್ಡಗಟ್ಟಿ ಅಳ್ಳಾಲಸಂದ್ರದ ಅರುಣ್ನನ್ನು (26) ಕೊಲೆಗೈದು ಪರಾರಿಯಾಗುತ್ತಿರುವ ದುಷ್ಕರ್ಮಿಗಳ ಭಯಾನಕ ದೃಶ್ಯ ಹತ್ತಿರದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಲ್ಲಾಳಸಂದ್ರದ ಗೇಟ್ ಬಳಿ ಭಾನುವಾರ ರಾತ್ರಿ ತನ್ನ ಕಾರು ನಿಲ್ಲಿಸಿದ ಅರುಣ್ ಅವರು ಇಬ್ಬರು ಸ್ನೇಹಿತರೊಂದಿಗೆ ಅವರ ಕಾರಿನಲ್ಲಿ ಯಶವಂತಪುರದ ವೈಷ್ಣವಿ ಮಾಲ್ಗೆ ಹೋಗಿ ಸಿನಿಮಾ ನೋಡಿಕೊಂಡು ರಾತ್ರಿ 12.15ರ ವೇಳೆ ವಾಪಸಾಗಿ ಅಲ್ಲಾಳಸಂದ್ರದ ಗೇಟ್ ಬಳಿ ಸ್ನೇಹಿತರ ಕಾರಿನಿಂದ ಇಳಿದು ತಮ್ಮ ಕಾರಿನತ್ತ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಮಚ್ಚು ಲಾಂಗ್ಗಳೊಂದಿಗೆ ಹೊಂಚು ಹಾಕಿ ಕುಳಿತಿದ್ದ ನಾಲ್ಕೈದು ಮಂದಿ ದುಷ್ಕರ್ಮಿಗಳು ಅರುಣ್ಗೆ ಹೊಡೆಯಲು ಹೋಗಿದ್ದಾರೆ. ಅರುಣ್ ಜೀವಭಯದಿಂದ ರಕ್ಷಣೆಗಾಗಿ ಕೂಗುತ್ತಾ ಓಡಿಹೋಗುತ್ತಿದ್ದಾಗ ಅಟ್ಟಿಸಿಕೊಂಡು ಹೋಗಿ ಮನಸೋಇಚ್ಚೆ ಹೊಡೆದು ಪರಾರಿಯಾಗಿದ್ದಾರೆ.
ದೂರದಲ್ಲಿ ಇದನ್ನು ಕಂಡ ಅರುಣ್ ಅವರ ಇಬ್ಬರು ಸ್ನೇಹಿತರು ದುಷ್ಕರ್ಮಿಗಳ ರೌದ್ರಾವತಾರವನ್ನು ನೋಡಿ ಹೆದರಿ ಸುಮ್ಮನಾಗಿದ್ದಾರೆ. ದುಷ್ಕರ್ಮಿಗಳು ಪರಾರಿಯಾದ ನಂತರ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅರುಣ್ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಆ ವೇಳೆಗಾಗಲೇ ಅರುಣ್ ಮೃತಪಟ್ಟಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೆÇಲೀಸರು ಪರಿಶೀಲನೆ ನಡೆಸಿದ್ದಾರೆ. ಅರುಣ್ ಅವರನ್ನು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ರಾಜಕೀಯ ವೈಷಮ್ಯದಿಂದ ಈ ಕೊಲೆ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಕೊಲೆಗಾರರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.








