ಬೆಂಗಳೂರು
ಪ್ರಸಕ್ತ ಮುಂಗಾರು ಋತುವಿನಲ್ಲಿ ಸ್ಥಳೀಯ ನಿವಾಸಿಗಳನ್ನು ಬಳಸಿ ಬೆಳೆ ಸಮೀಕ್ಷೆ ಯೋಜನೆ ಹಮ್ಮಿಕೊಂಡಿದ್ದು ಸಧ್ಯದಲ್ಲಿಯೇ ಕ್ಷೇತ್ರಮಟ್ಟದಲ್ಲಿ ಬೆಳೆ ವಿವರಗಳನ್ನು ಮೊಬೈಲ್ ಆಪ್ ಮೂಲಕ ಸಂಗ್ರಹಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ತಿಳಿಸಿದ್ದಾರೆ.
ರೈತರು ಬೆಳೆದಿರುವ ಮಾಹಿತಿಯನ್ನು ಸರ್ಕಾರಿ ದಾಖಲೆಗಳಲ್ಲಿ ನಿಖರವಾಗಿ ದಾಖಲಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ಸದರಿ ಮಾಹಿತಿಯನ್ನು ಹಲವು ರೈತ ಫಲಾನುಭವಿ ಯೋಜನೆಗಳಲ್ಲಿ ಉಪಯೋಗಿಸಲಾಗುವುದು. ಇದರಿಂದ ನೈಜ ರೈತರಿಗೆ ಅನುಕೂಲವಾಗಲಿದೆ ಎಂದರು.
ಬೆಳೆ ಸಮೀಕ್ಷೆ ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾದರೆ ರೈತರು ಈ ಯೋಜನೆಯಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರದ ಬೆಳೆಯ ವಿವರಗಳನ್ನು ದಾಖಲಿಸಲು ಸಹಾಯ ಮಾಡಬೇಕು ಹಾಗೂ ಸಮೀಕ್ಷಾ ಸಮಯದಲ್ಲಿ ರೈತರು ತಮ್ಮ ಮೊಬೈಲ್ ಸಂಖ್ಯೆ ನೀಡುವ ಮುಖಾಂತರ ಸರ್ಕಾರದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ಧಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆಮಾಡಿರುವ ಅವರು, ಬೆಳೆ ಸಮೀಕ್ಷೆಯಿಂದ ಸಾಕಷ್ಟು ಅನುಕೂಲಗಳಾಗಲಿದೆ. ಖಚಿತವಾಗಿ ಯಾವ ಬೆಳೆ ಎಷ್ಟು ವಿಸ್ತೀರ್ಣದಲ್ಲಿ ಬೆಳೆದಿದೆ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ. ಯಾವುದೆ ಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾದಲ್ಲಿ ಯಾವ ಪ್ರದೇಶದಲ್ಲಿ ಯಾವ ಬೆಳೆ ಎಷ್ಟು ನಷ್ಟ ಎಂದು ಅಂದಾಜಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
