ಹೊನ್ನಾಳಿ:
ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಮೆಕ್ಕೆಜೋಳದ ಹೊಲಗಳಲ್ಲಿ ಸಮಗ್ರ ಬೆಳೆ ಸಂರಕ್ಷಣಾ ಕ್ರಮಗಳನ್ನು ಅನುಸರಿಬೇಕು ಎಂದು ಪಯೋನಿಯರ್ ಬಿತ್ತನೆ ಬೀಜ ಕಂಪನಿಯ ದಾವಣಗೆರೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಆರ್. ಜಗದೀಶ್ ಹೇಳಿದರು.
ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದ ಪ್ರಗತಿಪರ ರೈತ ಎಚ್. ಬಸವಣ್ಯಪ್ಪ ಅವರ ಹೊಲದಲ್ಲಿ ಪಯೋನಿಯರ್ ಬಿತ್ತನೆ ಬೀಜ ಕಂಪನಿಯ ವತಿಯಿಂದ ಸೋಮವಾರ ಹಮ್ಮಿಕೊಂಡ ಮೆಕ್ಕೆಜೋಳದ ಬೆಳೆಯ ಕ್ಷೇತ್ರೋತ್ಸವ ಮತ್ತು ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಯೋನಿಯರ್ ಕಂಪನಿಯ ಬಿತ್ತನೆ ಬೀಜಗಳು ಉತ್ಕಷ್ಟತೆಗೆ ಹೆಸರಾಗಿವೆ. ರೋಗ ನಿರೋಧಕ ಶಕ್ತಿಯನ್ನೂ ಹೊಂದಿರುವುದರಿಂದ ಬೆಳೆ ಹಾನಿಯ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ, ಎಲ್ಲಾ ರೈತರೂ ಪಯೋನಿಯರ್ ಕಂಪನಿಯ ಪಿ-3550 ಮೆಕ್ಕೆಜೋಳದ ಬೀಜವನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು.
ಮೆಕ್ಕೆಜೋಳವನ್ನು ಭಾರತಕ್ಕೆ ಮೊಟ್ಟಮೊದಲು 1970ರ ದಶಕದಲ್ಲಿ ಪರಿಚಯಿಸಿದ್ದು ಪಯೋನಿಯರ್ ಕಂಪನಿ. ಅಲ್ಲಿಂದ ಇಲ್ಲಿಯವರೆಗೆ ಅನೇಕ ಹೊಸ ಹೊಸ ತಳಿಗಳನ್ನು ಪರಿಚಯಿಸುತ್ತ ಬಂದಿದೆ. ಜಗತ್ತಿನ ಸುಮಾರು 91 ದೇಶಗಳಲ್ಲಿ ಕಂಪನಿ ತನ್ನ ವಹಿವಾಟು ನಡೆಸುತ್ತಿದೆ. ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ನಿರಂತರ ತಿಳಿವಳಿಕೆ ನೀಡುವ ಮೂಲಕ ರೋಗ ರಹಿತ ಬೆಳೆ ಬೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವಿವರಿಸಿದರು.
ಮೆಕ್ಕೆಜೋಳದ ಬೆಳೆಯ ಅಧಿಕ ಇಳುವರಿ ಪಡೆದ ಪ್ರಗತಿಪರ ರೈತ ಎಚ್. ಕಡದಕಟ್ಟೆ ಗ್ರಾಮದ ಎಚ್. ಬಸವಣ್ಯಪ್ಪ ಅವರನ್ನು ಸಮಾರಂಭದಲ್ಲಿ ಪಯೋನಿಯರ್ ಬಿತ್ತನೆ ಬೀಜ ಕಂಪನಿಯ ವತಿಯಿಂದ ಕಂಪನಿಯ ದಾವಣಗೆರೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರವಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಎಚ್. ಕಡದಕಟ್ಟೆ ಗ್ರಾಮದ ಎಚ್. ಬಸವಣ್ಯಪ್ಪ, ಪಯೋನಿಯರ್ ಕಂಪನಿಯ ಪಿ-3550 ಮೆಕ್ಕೆಜೋಳದ ಬೀಜವನ್ನೇ ನಾವು ನಮ್ಮ ಜಮೀನಿನಲ್ಲಿ ಬಿತ್ತಿದ್ದೇವೆ. ಈ ಮೆಕ್ಕೆಜೋಳದ ಬೆಳೆ ಎಲ್ಲಾ ಪ್ರದೇಶಗಳಿಗೂ ಹೊಂದಿಕೊಳ್ಳುವ ಬೆಳೆಯಾಗಿದೆ. ಮೆಕ್ಕೆಜೋಳದ ಬೆಳೆಯಲ್ಲಿ ದ್ವಿದಳ ಧಾನ್ಯಗಳನ್ನು ಅಕ್ಕಡಿ ಬೆಳೆಯಾಗಿ ಬೆಳೆಯಬೇಕು. ಬೆಳೆ ಪರ್ಯಾಯ ಪದ್ಧತಿಯನ್ನು ಅನುಸರಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಬೇಕು ಎಂದು ತಿಳಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್, ಎಚ್. ಕಡದಕಟ್ಟೆ ಗ್ರಾಮದ ಪ್ರಗತಿಪರ ರೈತ ಎಂ.ಬಿ. ಪರಮೇಶ್ವರಪ್ಪಗೌಡ, ಬಸವರಾಜಪ್ಪ, ಪಯೋನಿಯರ್ ಬಿತ್ತನೆ ಬೀಜ ಕಂಪನಿಯ ಕೆ. ಲೋಕೇಶ್ಗೌಡ, ಕೆ. ಮಾಲತೇಶ್, ಗೋಪಾಲ್, ಮಲ್ಲಿಕಾರ್ಜುನ್ ಕಣ್ಣೂರ್, ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು. ಶಿಕಾರಿಪುರ, ಸೊರಬ, ಶಿವಮೊಗ್ಗ, ಆಯನೂರು, ಹರಿಹರ, ಚನ್ನಗಿರಿ, ಹರಪನಹಳ್ಳಿ, ಜಗಳೂರು, ಹೊನ್ನಾಳಿ ತಾಲೂಕಿನ ಎಚ್. ಕಡದಕಟ್ಟೆ, ಸೊರಟೂರು, ಹೊನ್ನಾಳಿ ಪಟ್ಟಣದ ಹಾಗೂ ಮಾದನಬಾವಿ ಮತ್ತಿತರ ಗ್ರಾಮಗಳ ರೈತರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
