ಬೆಂಗಳೂರು:
ರಾಜರಾಜೇಶ್ವರಿನಗರ ಬಳಿಯ ಬಿಎಚ್ಇಎಲ್ ಲೇಔಟ್ ಮನೆಯೊಂದಕ್ಕೆ ಬೀಗ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಲಾಕರ್ ಸಮೇತ 750 ಗ್ರಾಂ ಗಿಂತಲೂ ಹೆಚ್ಚು ಚಿನ್ನಾಭರಣ ಕದ್ದು ಪರಾರಿಯಾಗಿರುವ ದುರ್ಘಟನೆ ನಡೆದಿದೆ.

ಬಿಎಚ್ಇಎಲ್ ನಿವೃತ್ತ ನೌಕರ ಚಿಕ್ಕಣ್ಣ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದ್ದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ ಚಿಕ್ಕಣ್ಣ ಹಾಗೂ ಕುಟುಂಬಸ್ಥರು ಕಾರ್ಯಕ್ರಮ ನಿಮಿತ್ತ ಅರಸಿಕೆರೆಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.
ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಆಗಮಿಸಿದಾಗ ಕುಟುಂಬಸ್ಥರಿಗೆ ಶಾಕ್ ಕಾದಿತ್ತು. ಬಾಗಿಲು ತೆರೆದು ಮನೆಯ ಒಳಗೆ ಹೋಗುತ್ತಿದ್ದಂತೆ, ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಕಳ್ಳರು ಲಾಕರ್ ಸಮೇತ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ್ದಾರೆ.
ವೃದ್ಧ ಚಿಕ್ಕಣ್ಣ ಹಾಗೂ ಅವರ ಪುತ್ರ ಮಂಜುನಾಥ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಈ ಕುರಿತು ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.








