ಬರಗೂರು:
ಮಕ್ಕಳು ತಂದೆ ತಾಯಿಯರನ್ನು ನೋಡಿಕೊಳ್ಳದಿದ್ದರೂ ಕಾನೂನುಗಳ ಮೂಲಕ ಅವರಿಗೆ ನ್ಯಾಯ ಒದಗಿಸಿಕೊಡಲು ನಾವು ಸಿದ್ದರಿದ್ದೇವೆ. ನನ್ನ ಕರ್ತವ್ಯದ ಅವಧಿಯಲ್ಲಿ ಹಲವಾರು ವೃದ್ಧರಿಗೆ ನ್ಯಾಯ ಒದಗಿಸಿ ಕೊಟ್ಟಿರುವುದು ನನಗೆ ಹರ್ಷ ತಂದಿದೆ ಎಂದು ಸಿವಿಲ್ ನ್ಯಾಯಾಧೀಶೆ ಕೆ.ಬಿ.ಗೀತಾ ಕುಂಬಾರ ತಿಳಿಸಿದರು.
ಸಿರಾ ತಾಲ್ಲೂಕು ಬರಗೂರು ಉಪ ಪೊಲೀಸ್ ಠಾಣಾ ಆವರಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಿರಾ ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯರ ಕಡೆಗಣನೆ ಬಗ್ಗೆ ಹಲವಾರು ಕಾನೂನು ರೂಪಿಸಿರುವ ಹಿನ್ನೆಲೆಯಲ್ಲಿ ಮಕ್ಕಳು ಹೆದರಿ ತನ್ನ ತಂದೆ, ತಾಯಿಗಳನ್ನು ವೃದ್ದಾಶ್ರಮಗಳಿಗೆ ಮೊರೆ ಹೋಗುವುದಕ್ಕೆ ಎಡೆ ಮಾಡಿಕೊಡುತ್ತಿಲ್ಲ. ಇಂತಹ ಕಾನೂನುಗಳನ್ನು ರೂಪಿಸದಿದ್ದರೆ ವೃದ್ಧರು ಬೀದಿ ಪಾಲಾಗಬೇಕಾಗಿತ್ತು ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಹಂಸವೇಣಿ ಮಾತನಾಡಿ, ನಾವುಗಳು ನಮ್ಮ ತಂದೆ ತಾಯಂದಿರನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡಿದ್ದರೆ ಹಿರಿಯರ ಪೋಷಣೆ ಮತ್ತು ಸಂರಕ್ಷಣೆ ಬಗ್ಗೆ ಹಲವಾರು ಕಾನೂನುಗಳನ್ನು ತರುವ ಅವಶ್ಯಕತೆ ಇರಲಿಲ್ಲ ಎಂದರು.
ಪಟ್ಟನಾಯಕನಹಳ್ಳಿ ಪಿಎಸ್ಐ ವಿ.ನಿರ್ಮಲ ಸಭೆಯಲ್ಲಿದ್ದವರನ್ನು ಪ್ರಶ್ನಿಸಿ ಮಾತನಾಡಿ, ಪುರುಷರು ನಿಮ್ಮ ಜೊತೆ ಪತ್ನಿಯರನ್ನು ಕರೆದುಕೊಂಡು ಬಂದಿದ್ದರೆ ಅವರಿಗೂ ಸಹ ಕಾನೂನಿನ ಅರಿವು ತಿಳಿಯುತ್ತಿತ್ತು, ಅಕಸ್ಮಾತ್ ನೀವುಗಳು ಮರಣ ಹೊಂದಿದರೆ ತಮ್ಮ ಪತ್ನಿಗೂ ಸಹ ಕಾನೂನಿನ ಅರಿವಾಗುತ್ತಿತ್ತು. ಎಲ್ಲಿಯವರೆಗೂ ತನ್ನ ಪತ್ನಿಯೊಂದಿಗೆ ಸಹಕರಿಸುತ್ತೀರೋ ಅಲ್ಲಿಯವರೆಗೂ ಒಬ್ಬರಿಗೊಬ್ಬರೂ ಅನ್ಯೋನ್ಯತೆಯಿಂದಿದ್ದು ಯಾವುದೇ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಪಟ್ಟನಾಯಕನಹಳ್ಳಿ ಪಿಎಸ್ಐ ವಿ.ನಿರ್ಮಲ, ಗ್ರಾಮಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀನರಸಮ್ಮ, ಪಿಡಿಒ ಅನಿತಾ, ಸರ್ಕಾರಿ ವಕೀಲರಾದ ಕೆ.ರಂಗನಾಥಪ್ಪ, ಹಿರಿಯ ವಕೀಲ ಬಿ.ರಂಗನಾಥ್, ಅಗ್ರಹಾರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಗದೀಶ್, ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಟಿ.ಚಂದ್ರಣ್ಣ, ಕಾರ್ಯದರ್ಶಿ ಪುರುಷೋತ್ತಮ್, ಬರಗೂರು ಉಪಠಾಣಾ ಮುಖ್ಯಪೇದೆ ರಂಗನಾಥ್, ಪೇದೆ ಯತೀಶ್ ಕುಮಾರ್, ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ