ದಾವಣಗೆರೆ:
ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದ ಹರಪನಹಳ್ಳಿಯ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಪಾರ್ಥಿವ ಶರೀರ ಶನಿವಾರ ಸಂಜೆ ನಗರಕ್ಕೆ ಆಗಮಿಸಿತು.
ನಗರದ ಪಿ.ಬಿ.ರಸ್ತೆಯಲ್ಲಿರುವ ಶ್ರೀಶೈಲ ಮಠದಲ್ಲಿ ಸಾರ್ವಜನಿಕರ ದರುಶನಕ್ಕೆ ಇರಿಸಿದ್ದ ರವೀಂದ್ರ ಅವರ ಪಾರ್ಥಿವ ಶರೀರದ ದರುಶನ ಪಡೆದ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಮಾಡಾಳು ವಿರೂಪಾಕ್ಷಪ್ಪ, ಮೇಯರ್ ಶೋಭಾ ಪಲ್ಲಾಗಟ್ಟೆ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಉದ್ಯಮಿ ಎಸ್.ಎಸ್.ಗಣೇಶ್ ಸೇರಿದಂತೆ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಪಾರ್ಥಿವ ಶರೀರದ ಅಂತಿಮ ದರುಶನ ಪಡೆದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಎಂ.ಪಿ.ರವೀಂದ್ರ ಅವರ ಸಾವಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಜಿಲ್ಲೆಗೆ ಅತೀವ ನಷ್ಟ ಉಂಟಾಗಿದೆ. ರವೀಂದ್ರ ಅವರ ತಂದೆ ಎಂ.ಪಿ.ಪ್ರಕಾಶ್ ಮತ್ತು ನಾವು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವು. ಹಿಂದುಳಿದ ಹೈದರಾಬಾದ್ ಕರ್ನಾಟಕ ಕಲಂ 371 ಜೆ ಅಡಿ ಹರಪನಹಳ್ಳಿ ತಾಲೂಕನ್ನು ಸೇರಿಸಲು ರವೀಂದ್ರ ಸಾಕಷ್ಟು ಶ್ರಮಿಸಿದ್ದರು. ಅಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು. ಅವರ ಆತ್ಮಕ್ಕೆ ಆ ಭಗವಂತ ಶಾಂತಿ ಕರುಣಿಸಲಿ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಎಂ.ಪಿ.ರವೀಂದ್ರ ನಿಧನದಿಂದಾಗಿ ಜಿಲ್ಲೆಗೆ ನಷ್ಟ ಉಂಟಾಗಿದೆ. ಇವರ ತಂದೆ ಎಂ.ಪಿ.ಪ್ರಕಾಶ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿ ಕೊಡುಗೆ ನೀಡಿದ್ದಾರೆ. ರವೀಂದ್ರ ಅವರು ಇನ್ನೂ ಬದುಕಿದ್ದರೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರು ಎಂದರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಎಂ.ಪಿ.ರವೀಂದ್ರ ನನಗೆ ಆತ್ಮೀಯ ಸ್ನೇಹಿತರಾಗಿದ್ದರು. ಒಳ್ಳೆಯ ಕೆಲಸಗಾರರೂ ಆಗಿದ್ದರು. ರವೀಂದ್ರ ಹರಪನಹಳ್ಳಿ ಶಾಸಕರಾಗಿದ್ದಾಗ ನಾನು ಜಿಲ್ಲೆಯ ಸಚಿವನಾಗಿದ್ದೆ. ಇಬ್ಬರೂ ಸೇರಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವು. ಎಂ.ಪಿ.ರವೀಂದ್ರ ಅವರು ತಮ್ಮ ತಂದೆ ಎಂ.ಪಿ.ಪ್ರಕಾಶ್ ಅವರ ಸಾಧನೆಯನ್ನು ಮುಂದುವರಿಸಿಕೊಂಡು ಬಂದಿದ್ದರು. ಇನ್ನೂ ಬದುಕ್ಕಿದ್ದರೆ ಮತ್ತಷ್ಟು ಸಾಧನೆ ಮಾಡುತ್ತಿದ್ದರು ಎಂದರು.
ಚನ್ನಗಿರಿ ಶಾಸಕ ಮಾಡಾಳು ವೀರೂಪಾಕ್ಷಪ್ಪ ಮಾತನಾಡಿ, ರವೀಂದ್ರ ಅವರು ಸಜ್ಜನ ರಾಜಕಾರಣಿಯಾಗಿದ್ದರು. ಹರಪನಹಳ್ಳಿ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕುಂದುವಾಡ ತಿಪ್ಪಣ್ಣ, ದಿನೇಶ್ ಕೆ.ಶೆಟ್ಟಿ, ಎ.ನಾಗರಾಜ್, ಮಹಾಬಲೇಶ್ವರ ಗೌಡ್ರು, ಎಂ.ಜಿ.ಈಶ್ವರಪ್ಪ, ಮುದೇಗೌಡ್ರ ಗೀರೀಶ್, ಜೆ.ಆರ್.ಷಣ್ಮುಖಪ್ಪ, ನಾಗರತ್ನಮ್ಮ ಮಲ್ಲೇಶಪ್ಪ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಕಂಫಟ್ರ್ಸ್ ಹತ್ತಿರ ಉದ್ಯಮಿ ಎಸ್.ಎಸ್.ಗಣೇಶ್, ಎಸ್.ಎಸ್.ಬಕ್ಕೇಶ್, ಎಸ್.ಎ.ರವೀಂದ್ರನಾಥ , ಎಸ್.ವಿ.ರಾಮಚಂದ್ರಪ್ಪ, ಕೊಟ್ರೇಶ್, ಮುರುಗೇಶ ಆರಾಧ್ಯ ಅವರು ಎಂ.ಪಿ.ರವೀಂದ್ರ ಅವರ ಪಾರ್ಥಿವ ಶರೀರಕ್ಕೆ ಪುಷ್ಟ ಗುಚ್ಚ ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/11/anthima-darshana.gif)