ಬೆಂಗಳೂರು
ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾಲ್ಕು ಕ್ಚೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟ, ಆಪರೇಷನ್ ಕಮಲ ಭೀತಿಯಿಂದ ಹೊರಬಂದಿದೆ. ಈ ಮೂಲಕ ಸರ್ಕಾರ ಸುಭದ್ರಗೊಂಡಿದೆ.
ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ,ಎಸ್. ಯಡಿಯೂರಪ್ಪ ಹಾಗೂ ಬಿ. ಶ್ರೀರಾಮುಲು ಅವರ ಕನಸು ಭಗ್ನಗೊಂಡಿದೆ. ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ಕರಿನೆರಳು ಬಿದ್ದಿದೆ.
ರಾಮನಗರ ಮತ್ತು ಜಮುಖಂಡಿ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಗೆದ್ದಿದ್ದು, ಎರಡೂ ಪಕ್ಷಗಳು ತಮ್ಮ ಸಂಖ್ಯಾಬಲವನ್ನು ಕಾಪಾಡಿಕೊಂಡಿದೆ. ವಿಧಾನಸಭೆಯಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬೇಕಿದ್ದ ಬಿಜೆಪಿಯ ಸಂಖ್ಯಾಬಲ 104ರಲ್ಲೇ ಸ್ಥಿರವಾಗಿದೆ. ಈ ಚುನಾವಣೆ ನಂತರ ಕಾಂಗ್ರೆಸ್ ಶಾಸಕರ ಸಂಖ್ಯೆ 80, ಜೆಡಿಎಸ್ 38, ಬಿ.ಎಸ್.ಪಿ ಹಾಗೂ ಪಕ್ಷೇತರರೊಬ್ಬರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಈ ಸಂಖ್ಯಾಬಲ ನೋಡಿದರೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಭವಿಷ್ಯವಿಲ್ಲ ಎನ್ನುವುದು ಈ ಫಲಿತಾಂಶ ಸಾಬೀತುಪಡಿಸಿದೆ. ಹಾಗೊಂದು ವೇಳೆ ಆಪರೇಷನ್ ಕಮಲ ಕಾರ್ಯಾಚರಣೆ ನಡೆದರೆ ಎರಡೂ ಪಕ್ಷಗಳು ಒಟ್ಟಿಗೆ ಸೇರಿ ತಮ್ಮನ್ನು ಬಗ್ಗುಬಡಿಯಬಹುದು ಎನ್ನುವ ಆತಂಕ ಕೂಡ ಬಿಜೆಪಿ ವಲಯದಲ್ಲಿ ಮನೆ ಮಾಡಿದೆ.
ಬಳ್ಳಾರಿಯಲ್ಲಿ ರೆಡ್ಡಿ ಪಡೆಯ ಸೊಕ್ಕು ಮುರಿದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರ ಜಂಘಾ ಬಲ ಉಡುಗಿಹೋಗುವಂತೆ ಮಾಡಿದ್ದಾರೆ. ಕನಿಷ್ಠ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುವ ಬಿಜೆಪಿಯ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಮೈತ್ರಿ ಕೂಟ ಒಂದಾದರೆ ತಮ್ಮ ಪಕ್ಷದ ಗೆಲುವಿಗೆ ಅಡ್ಡಿಯಾಗಬಹುದು ಎನ್ನುವ ಕಳವಳ ಬಿಜೆಪಿಯನ್ನು ಆವರಿಸಿದೆ.
ಆಪರೇಷನ್ ಕಮಲ ಕಾರ್ಯಾಚರಣೆ ಮಾಡುವ ಸಾಮಥ್ರ್ಯ ಹೊಂದಿದ್ದ ಬಳ್ಳಾರಿ ಗಣಿ ಉದ್ಯಮಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಟ್ಟ ಹಾಕಲಾಗಿದ್ದು, ಆಪರೇಷನ್ ಕಮಲ ಎಂದರೆ ಶಾಸಕರೇ ಓಡಿ ಹೋಗುವ ಪರಿಸ್ಥಿತಿ ನಿರ್ಮಿಸಿದ್ದಾರೆ. ಈ ಬೆಳವಣಿಗೆ ನೋಡಿದರೆ ಶ್ರೀರಾಮುಲು ಸಹಿತ ಗಣಿರೆಡ್ಡಿ ಪಡೆ ಕನಸಿನಲ್ಲೂ ಆಪರೇಷನ್ ಕಮಲದ ಜಪ ಮಾಡುವ ಸಾಧ್ಯತೆಗಳಿಲ್ಲ.
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಸಾಧ್ಯವಾಗದ ದಯನೀಯ ಪರಿಸ್ಥಿಗೆ ರೆಡ್ಡಿ ಪಡೆ ಸಿಲುಕಿಕೊಂಡಿದೆ. ಈ ಬೆಳವಣಿಗೆ ನಂತರ ರೆಡ್ಡಿ ಬಳಗ, ಇನ್ನು ಶಾಸಕರಿಗೆ ಕೊಪ್ಪರಿಗೆಯಷ್ಟು ಹಣ ನೀಡಿ ಸೆಳೆದುಕೊಳ್ಳುವುದು ದೂರದ ಮಾತು. ಇನ್ನು ರೆಡ್ಡಿ ಸಹೋದರರು ಹಣ ನೀಡುತ್ತಾರೆ ಎಂದು ನಂಬಿ ಯಾವುದೇ ಶಾಸಕರು ಪಕ್ಷ ತೊರೆಯುವ ದುಸ್ಸಾಸಹಕ್ಕೆ ಕೈ ಹಾಕುವ ಸಾಧ್ಯತೆಗಳು ಇಲ್ಲವಾಗಿವೆ.
ಭವಿಷ್ಯದ ಮುಖ್ಯಮಂತ್ರಿ ಎಂದು ಗುರುತಿಸಿಕೊಳ್ಳಲು ಹೆಣಗುತ್ತಿರುವ ಶ್ರೀರಾಮುಲು ಕನಸು ಸಹ ಭಗ್ನಗೊಂಡಿದೆ. ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ಗಣಿ ರೆಡ್ಡಿಗಳಿಗೆ ಚೇತರಿಸಿಕೊಳ್ಳಲಾಗದ ಹೊಡೆತ ಬಿದ್ದಿದೆ. ಸಧ್ಯಕ್ಕೆ ಚೇತರಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ.
ಇನ್ನು ಯಡಿಯೂರಪ್ಪ ಅವರ ಮುಖ್ಯಮಂತ್ರಿ ಆಸೆಗೂ ಈ ಫಲಿತಾಂಶ ತಣ್ಣೀರೆರಚಿದಂತಾಗಿದೆ. ಶೀಘ್ರದಲ್ಲಿ ಮುಖ್ಯಮಂತ್ರಿ ಆಗುವುದಾಗಿ ಹೇಳಿಕೊಳ್ಳುತ್ತಿದ್ದ ಯಡಿಯೂರಪ್ಪ ಅವರ ಆತ್ಮ ವಿಶ್ವಾಸಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.
ಜೆಡಿಎಸ್ ನ ಮಧುಬಂಗಾರಪ್ಪ ಪಡೆದಿರುವ ಮತಗಳನ್ನು ಗಣನೆಗೆ ತೆಗೆದುಕೊಂಡರೆ ಶಿವಮೊಗ್ಗ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಒಂದು ಕಡೆ ಆಂತರಿಕ ಕಚ್ಚಾಟ, ಮತ್ತೊಂದೆಡೆ ಯಡಿಯೂರಪ್ಪ ಅವರ ಏಕಪಕ್ಷೀಯ ಮತ್ತು ಸರ್ವಾಧಿಕಾರಿ ಧೋರಣೆಗೆ ಪಕ್ಷದಲ್ಲಿ ಭಾರೀ ಅಸಮಾಧಾನ ಇರುವುದು ಸ್ಪಷ್ಡವಾಗುತ್ತದೆ. ಈ ಬೆಳವಣಿಗೆಯಿಂದ ಯಡಿಯೂರಪ್ಪ ಮೂಲೆಗುಂಪಾಗುವ ಸಂಭವ ಹೆಚ್ವಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಮುಂಬರುವ ಲೋಕಸಭಾ ಚುನಾವಣೆಯ ನಂತರ ಬಹುಶಃ ಉತ್ತರ ದೊರೆಯಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
