ದಾವಣಗೆರೆ:
ನಾನು ಕಾನೂನು ಕೈಗೆತ್ತಿಕೊಂಡು ಇಂದು ಮರಳು ತುಂಬಿಸಿಯೇ ತೀರುತ್ತೇನೆ. ನಿನಗೆ ತಾಕತ್ತಿದ್ದರೆ, ನಿನ್ನ ಡಿಸಿ, ಎಸ್ಪಿಯನ್ನು ಕರೆದುಕೊಂಡು ಬಂದು ತಡಿ ನೋಡೋಣ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಅವರಿಗೆ ಸವಾಲು ಹಾಕಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಆಶ್ರಯ ಮನೆ ಕಟ್ಟಲು, ಶೌಚಾಲಯ ಕಟ್ಟಿಸಿಕೊಳ್ಳಲು, ದೇವಸ್ಥಾನ ನಿರ್ಮಾಣಕ್ಕೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಮರಳು ಸಿಗುತ್ತಿಲ್ಲ. ಆದ್ದರಿಂದ ಇಂದು ನಾನು ಅನಿವಾರ್ಯವಾಗಿ ಕಾನೂನು ಕೈಗೆತ್ತಿಕೊಂಡು ಮರಳು ತುಂಬಿಸುವ ಮೂಲಕ ಕ್ರಾಂತಿ ಮಾಡಲಿದ್ದೇನೆ. ಜಿಲ್ಲಾ ಮಂತ್ರಿಗೆ ತಾಕತ್ತಿದ್ದರೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿನ ಕರೆದುಕೊಂಡು ಬಂದು ನನ್ನನ್ನು ಬಂಧಿಸಿ ಮರಳು ತುಂಬುವುದನ್ನು ತಡೆಯಲಿ ಎಂದು ಹೇಳಿದರು.
ಹೊನ್ನಾಳಿ ತಾಲ್ಲೂಕಿನಲ್ಲಿ ಜನರಿಗೆ ಮುಕ್ತವಾಗಿ ಮರಳು ದೊರೆಯುತ್ತಿಲ್ಲ. ದೇವಾಲಯ, ಶೌಚಾಲಯ ಮತ್ತು ಮನೆ ಕಟ್ಟಿಕೊಟ್ಟಲು ಮರಳು ದೊರಕದಂತಹ ಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ, ಇಂದು ಬೆಳಗ್ಗೆ 11 ಗಂಟೆಗೆ ಹೊನ್ನಾಳಿಯ ಪ್ರವಾಸಿ ಮೈದಾನದಿಂದ ಮರಳು ತುಂಬಲು ಹೋಗುತ್ತೇವೆ. ಮರಳಿನ ಅವಶ್ಯಕತೆ ಇರುವವರು ಮನೆ, ಶೌಚಾಲಯ ನಿರ್ಮಿಸುತ್ತಿರುವ ಬಗ್ಗೆ ಇರುವ ದಾಖಲೆಯೊಂದಿಗೆ ಸಾರ್ವಜನಿಕರು ಎತ್ತಿನ ಗಾಡಿ, ಟ್ರಾಕ್ಟರ್ ತೆಗೆದುಕೊಂಡು ಬರಬೇಕು. ನಿಮಗೆ ಮರಳು ಸಿಗುವ ವರೆಗೂ ನಾನು ಹೊಳೆಯಲ್ಲಿಯೇ ವಾಸ್ತವ್ಯ ಹೂಡುತ್ತೇನೆ ಎಂದರು.
ತಾಲ್ಲೂಕಿನಲ್ಲಿ 11 ಮರಳು ಬ್ಲಾಕ್ಗಳಿದ್ದರೂ ಮರಳಿನ ಅಭಾವ ಉಂಟಾಗಿದೆ. ಆದರೆ, ಎಸಿ ಕುಮಾರ ಸ್ವಾಮಿ ಅವರು ಮರಳಿನ ಸಮಸ್ಯೆ ಇಲ್ಲ ಎಂದಿದ್ದಾರೆ. ಸರ್ಕಾರದ ಕಾಮಗಾರಿಗಳಿಗೆ ಶೇ. 25ರಷ್ಟು ಮರಳು ನೀಡಲಾಗುತ್ತದೆ ಎನ್ನುತ್ತಾರೆ. ಆದರೆ ಸರ್ಕಾರಿ ಕಾಮಗಾರಿಗಳಿ ಎಂ. ಸ್ಯಾಂಡ್ ಬಳಸಲಾಗುತ್ತಿದೆ ವಿನಾಕಾರಣ ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.
ಸಾಮಾನ್ಯ ಜನರಿಗೆ ಸುಗಮವಾಗಿ ಮರಳು ದೊರಕಬೇಕು. ಈ ಹಿನ್ನಲೆಯಲ್ಲಿ ನಾನು ಇಂದು ಈ ರೀತಿಯ ಹೋರಾಟಕ್ಕೆ ಮುಂದಾಗುತ್ತಿದ್ದೇನೆ. ನನಗೆ ಜೈಲು ಹೊಸದಲ್ಲ ಹಿಂದೆ ತಾಲೂಕಿನ ಜನರ ಜ್ವಲಂತ ಸಮಸ್ಯೆಗಾಗಿ ಬೆಳಗಾವಿ ಜೈಲಿನಲ್ಲಿ 15 ದಿನ ಹಾಗೂ
ಹಿಂದೂತ್ವಕ್ಕಾಗಿ ಬಳ್ಳಾರಿ ಜೈಲಿನಲ್ಲಿ ಒಂದು ವಾರ ಇದ್ದೇನೆ. ನಾ ಯಾವುದಕ್ಕೂ ಹೆದುರವುದಿಲ್ಲ ಎಂದು ಹೇಳಿದರು .ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ಕೂಲಂಬಿ ಬಸವರಾಜ್, ಶಿವಪ್ರಕಾಶ್, ನವೀನ್, ಧನುಷ್ರೆಡ್ಡಿ, ಟಿಂಕರ್ ಮಂಜಣ್ಣ, ಚೊರಡಿ ಶಿವು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/11/11_dvg_02.jpg)