ಮೊಳಕಾಲ್ಮುರು
ಗುಡ್ಡಗಾಡು ಮತ್ತು ಇಳಿಜಾರು ಪ್ರದೇಶಗಳಿಂದ ಕೂಡಿರುವ ತಾಲ್ಲೂಕಿನಲ್ಲಿ ಹಳ್ಳ ಕೊಳ್ಳಗಳು ಹೆಚ್ಚಾಗಿ ಲಬ್ಯವಿದ್ದು , ಹೆಚ್ಚಿನ ಪ್ರಮಾಣದ ಚೆಕ್ ಡ್ಯಾಂಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸುವ ಮೂಲಕ ಸತತ ಬರದಿಂದ ಕಂಗೆಟ್ಟಿರುವ ಜನತೆಗೆ ಭದ್ರತೆ ಒದಗಿಸುವ ಕಲಸಕ್ಕೆ ಮುಂದಾಗಬೇಕಾಗಿದೆ ಎಂದು ಲೋಕೋಪಯೋಗಿ ಸಚಿವ ಕೃಷ್ಣಭೈರೇ ಗೌಡ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ರಾಂಪುರ ಹಾಗೂ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.
ಕಡಿಮೆ ಅನುದಾನದಲ್ಲಿ ಉತ್ತಮ ಕಾಮಗಾರಿಯನ್ನು ನಿರ್ವಹಿಸಿದ್ದು , ಸತತ ಬರದಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು , ಇಂತಹ ದುಸ್ಥಿತಿಯಲ್ಲಿ ಕಡಿಮೆ ಅನುದಾನವನ್ನು ಬಳಸಿ ಉತ್ತಮ ರೀತಿಯ ಮಲ್ಟಿಯರ್ ಚೆಕ್ಡ್ಯಾಂ ಕಾಮಗಾರಿಯನ್ನು ನಿರ್ವಹಿಸಿ ಮೂರು ತಿಂಗಳಿಗೆ ಬೇಕಾಗುವಷ್ಟು ಅಂತರ್ಜಲ ಸಂರಕ್ಷಣೆಗೆ ಮುಂದಾಗಿರುವುದು ಉತ್ತಮ ಕಾಮಗಾರಿಯಾಗಿದೆ ಎಂದು ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಚೆಕ್ ಡ್ಯಾಂನ ನೀರಿನ ಪ್ರಮಾಣವನ್ನು ಕಂಡ ಸಚಿವರು ಹೆಚ್ಚಿನ ಪ್ರಮಾಣದಲ್ಲಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಮತ್ತು ಚೆಕ್ ಡ್ಯಾಂಗಳ ಹೂಳನ್ನು ಎತ್ತಬೇಕು. ಅಕ್ಕಪಕ್ಕದ ವಿಸ್ತೀರ್ಣತೆಯನ್ನು ಹೆಚ್ಚಿಸುವ ಮೂಲಕ ಪಕ್ಕದ ಮಣ್ಣಿನ ಬದುಗಳಿಗೆ ರಿವಿಟ್ಮೆಂಟ್ ಕಟ್ಟಿಸುವ ಮೂಲಕ ಮತ್ತಷ್ಟು ಮಳೆ ನೀರು ಸಂಗ್ರಹಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರಿಹಟ್ಟಿ ಗ್ರಾಮ ರೈತ ತಿಪ್ಪಣ್ಣನ ತೋಟಕ್ಕೆ ಭೇಟಿ ನೀಡಿದ ಸಚಿವರು ತಿಪ್ಪಣ್ಣನವರ ಮುಕ್ಕಾಲು ಎಕರೆ ತೋಟದಲ್ಲಿ ಬೆಳೆದಿರುವ ತೋಟಗಾರಿಕಾ ಬೆಳೆಗಳಾದ ನುಗ್ಗೆ , ಕರಿಬೇವು , ನಿಂಬೆ , ಮುಂತಾದ ಅಂತರ್ ಬೇಸಾಯ ಪದ್ದತಿಯ ಬೆಳೆಗಳು ಹಾಗೂ ಹನಿ ನೀರಾವರಿ ಪದ್ದತಿಯ ಕ್ರಮಗಳನ್ನು ಪರಿಶೀಲಿಸಿ ನರೇಗಾ ಯೋಜನೆಯ ಸದುಪಯೋಗದ ಬಗ್ಗೆ ರೈತ ತಿಪ್ಪಣ್ಣನವರಿಂದ ಸಂಪೂರ್ಣ ಮಾಹಿತಿಯನ್ನು ಪಡೆದರು.
ನರೇಗಾ ಯೋಜನೆಯ ಮೂಲಕ ಕೃಷಿ ಬೆಳೆಗೆ ಸಾಕಷ್ಟು ಸಹಾಯ ದೊರೆತಿದ್ದು , ಬೆಳೆಯ ವೆಚ್ಚದ ಅರ್ಧದಷ್ಟು ನರೇಗಾ ಯೋಜನೆಯ ಮೂಲಕ ದೊರೆತಿದ್ದು, ಯೋಜನೆಯಿಂದ ಉತ್ತಮ ಪ್ರಯೋಜನವಾಗಿದೆ. ನಮ್ಮ ತೋಟದ ಕೃಷಿ ಪದ್ದತಿಯನ್ನು ನೆರೆಯ ಗ್ರಾಮಗಳ ರೈತ ಸಮುದಾಯ ಬಂದು ಪರಿಶೀಲಿಸಿ ನಾವು ಸಹ ಇಂತಹ ಲಾಭದಾಯಕ ಬೆಳೆಯ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಾಗಿದ ಅನಿವಾರ್ಯತೆ ಇದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದು ರೈತ ತಿಪ್ಪಣ್ಣ ಸಚಿವರಲ್ಲಿ ಸಂತಸ ಹಂಚಿಕೊಂಡರು.
ಸಂದರ್ಭದಲ್ಲಿ ಸಂಸದ ಚಂದ್ರಪ್ಪ , ಜಿ.ಪಂ.ಅಧ್ಯಕ್ಷೆ ಸೌಭಾಗ್ಯಬಸವರಾಜನ್ , ಉಪಾಧ್ಯಕ್ಷೆ ಸುಶೀಲಮ್ಮ , ಜಿ.ಪಂ.ಸದಸ್ಯರಾದ ಡಾ.ಯೋಗೇಶ್ ಬಾಬು, ಮುಂಡ್ರಿಗಿ ನಾಗರಾಜ್, ಮುಖ್ಯಾ ಕಾರ್ಯನಿರ್ವಹಣಾಧಿಕಾರಿ ರವೀಂದ್ರ , ಇ.ಓ. ಶ್ರೀಧರ್ ಐ ಬಾರಕೇರ್, ಎ.ಇ.ಇ. ಬಾಲಕೃಷ್ಣಪ್ಪ , ಸಮಾಜ ಕಲ್ಯಾಣಾಧಿಕಾರಿ ನಾಗರಾಜ ನಾಯಕ, ಪರಿಶಿಷ್ಟ ವರ್ಗಗಳ ಅಭಿವೃದ್ದಿ ಅಧಿಕಾರಿ ಗುರುಮೂರ್ತಿ , ಸಿ.ಡಿ.ಪಿ.ಓ.ಹೊನ್ನಪ್ಪ , ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ರುದ್ರೇಶ್ , ಕೃಷಿ ಸಹಾಯಕ ನಿರ್ದೇಶಕ ರವಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ