ಬೆಂಗಳೂರು
ಇತ್ತೀಚೆಗೆ ನಿಧನರಾದ ಮಾಜಿ ರೈಲ್ವೆ ಖಾತೆ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿವಾಸಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಅವರು, ತಾವು ಮತ್ತು ಜಾಫರ್ ಶರೀಫ್ ಒಳ್ಳೆಯ ಸ್ನೇಹಿತರಾಗಿದ್ದೆವು. ಅವರ ಅಗಲಿಕೆಯಿಂದ ಉತ್ತಮ ಸ್ನೇಹಿತನೊಬ್ಬನನ್ನು ಕಳೆದುಕೊಂಡಂತಾಗಿದೆ. ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಕುರಿತು ಜಾಫರ್ ಶರೀಫ್ ಅನುವಾದಿಸಿರುವ ಪುಸ್ತಕದ ಉದ್ಘಾಟನೆಗೆ ತಮಗೆ ಆಹ್ವಾನ ನೀಡಿದ್ದರು. ಕೃತಿ ಬಿಡುಗಡೆ ಸಮಾರಂಭ ಇಂದು ನಡೆಯಬೇಕಿತ್ತು. ದುರದೃಷ್ಟವಶಾತ್ ಇಂದು ತಾವು ಅವರ ಕುಟುಂಬಕ್ಕೆ ಸಾಂತ್ವನ ಹೇಳುವಂತಾಗಿದೆ ಎಂದು ಹೇಳಿದರು.ಜಾಫರ್ ಶರೀಫ್ ಅವರ ನೆನಪು ಜನರ ಮನಸ್ಸಲ್ಲಿ ಸದಾ ಇರುತ್ತದೆ ಎಂದು ಪ್ರಣಬ್ ಮುಖರ್ಜಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ರಹ್ಮಾನ್ ಖಾನ್, ಸಚಿವರಾದ ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ರಿಜ್ವಾನ್ ಹರ್ಷದ್, ಜಾಫರ್ ಶರೀಫ್ ಅವರ ಮೊಮ್ಮಕ್ಕಳಾದ ಅಬ್ದುಲ್ ವಹಾಬ್ ಶರೀಫ್, ರಹ್ಮಾನ್ ಶರೀಫ್ ಮತ್ತಿತರರು ಇದ್ದರು.
ಪ್ರಣಬ್ ಮುಖರ್ಜಿ ಅವರು ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಮನೆಗೆ ಭೇಟಿ ನೀಡಿ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಸಂತ್ವಾನ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/pranab-1.gif)