ಮಧುಗಿರಿ
ಬಡವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 30 ಲಕ್ಷ ದಷ್ಟು ಅವ್ಯವಹಾರ ನಡೆದಿದೆ ಅವ್ಯವಹಾರಕ್ಕೆ ಕಾರಣರಾದ ಪಂಚಾಯಿತಿ ಅಧ್ಯಕ್ಷರ ಮೇಲೆ ಕ್ರಮ ಜರುಗಿಸಬೇಕೆಂದು ಪಂಚಾಯಿತಿ ಸದಸ್ಯರು ಜಿಲ್ಲಾ ಪಂಚಾಯಿತಿ ಸಿಇಓ ಅವರನ್ನು ಆಗ್ರಹಿಸಿದ್ದಾರೆ.
ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಸದಸ್ಯರು, ಬಡವನಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷೆಯಾಗಿರುವ ಎಚ್.ಕೀರ್ತಿ ಸದಸ್ಯರ ಜೂತೆ ವಿಶ್ವಾಸದಿಂದ ವರ್ತಿಸುತ್ತಿಲ್ಲ ಹಾಗೂ ಸುಮಾರು 30 ಲಕ್ಷಕ್ಕೂ ಹೆಚ್ಚು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ಸೂಚನೆ ಗೊತ್ತುವಳಿಯನ್ನು ಮಂಡಿಸಿರುವುದಾಗಿ ತಿಳಿಸಿದರು.
2018ನೇ ಸಾಲಿನ ಮಾರ್ಚ್ ತಿಂಗಳಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ಖರ್ಚು ಮಾಡಿರುವ ಕಾಮಗಾರಿಗಳ ಹೆಸರುಗಳಿಗೂ ಡಿ.ಸಿ ಬಿಲ್ನಲ್ಲಿ ನಮೂದಿಸಿರುವ ಹೆಸರುಗಳು ವ್ಯತ್ಯಾಸವಿದ್ದು, ಕ್ರಿಯಾಯೋಜನೆಯಲ್ಲಿ ಅನುಮೋದನೆಯಾದ ಕಾಮಗಾರಿಯನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಬದಲಾವಣೆ ಮಾಡಿಕೊಂಡು 14ನೇ ಹಣಕಾಸು ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ.
2017/18 ನೇ ಸಾಲಿನ 14 ನೇ ಹಣಕಾಸಿನ ಕ್ರಿಯಾ ಯೋಜನೆಯನ್ನು ತಯಾರಿಸಲು ವಿಶೇಷ ಸಭೆಯನ್ನು ಕರೆದು ಸಭೆಯಲ್ಲಿ ತೀರ್ಮಾನಿಸಲಾದ ಕ್ರಿಯಾ ಯೋಜನೆಯ ಕಾಮಗಾರಿಗಳ ಹೆಸರುಗಳನ್ನು ನಡವಳಿ ಪುಸ್ತಕದಲ್ಲಿ ನಮೂದಿಸದೆ ಅಧ್ಯಕ್ಷರು ಕರ್ತವ್ಯ ಲೋಪ ಎಸಗಿದ್ದಾರೆ.
ಕಂದಾಯದಿಂದ ವಸೂಲಾದ ಹಣವನ್ನು ಕೆ.ಟಿ.ಟಿ.ಪಿ ನಿಯಮವನ್ನು ಉಲ್ಲಂಘಿಸಿ ಹಣವನ್ನು ಖರ್ಚು ಮಾಡಿದ್ದಾರೆ. ಜೂನ್ ನಂತರ ಇದುವರೆವಿಗೂ ಅಧ್ಯಕ್ಷರು ಸಾಮಾನ್ಯ ಸಭೆ ಕರೆದಿಲ್ಲ. 2016 ರಿಂದ ಯಾವುದೇ ವಾರ್ಡ್ ಸಭೆ ನಡೆಸದಿದ್ದರೂ ದಾಖಲೆಗಳಲ್ಲಿ ಸಭೆಗಳನ್ನು ನಡೆಸಿರುವುದಾಗಿ ತೋರಿಸಿದ್ದಾರೆ.
ಇ-ಸ್ವತ್ತು ಹಾಗೂ ಖಾತೆ ಬದಲಾವಣೆಯಲ್ಲಿ ಅನೇಕ ಅವ್ಯವಹಾರ ನಡೆಸಿದ್ದಾರೆ. ಸುವರ್ಣ ಗ್ರಾಮೋದಯ ಅಡಿಯಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ತಂದಿರುವ ಡಸ್ಟ್ಬಿನ್ ಗಳನ್ನು ಗಾಮ ಪಂಚಾಯಿತಿಯಲ್ಲಿ ಕೊಳೆಯುವಂತೆ ಮಾಡಿದ್ದಾರೆ.
ಸಾರ್ವಜನಿಕರೊಂದಿಗೆ ಹಾಗು ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರೊಂದಿಗೆ ಸರಿಯಾಗಿ ಸ್ಪಂದಿಸದೆ ಕೆಲಸ ಕಾರ್ಯಗಳನ್ನು ಸಕಾಲಕ್ಕೆ ಸರಿಯಾಗಿ ಮಾಡಿಕೊಡದೆ ಉದಾಸೀನ ತೋರುತ್ತಿದ್ದಾರೆ. ಕೆ.ಟಿ.ಟಿ.ಪಿ ನಿಯಮದಡಿ ಒಂದು ಲಕ್ಷದ ಮಿತಿಯೊಳಗೆ ಒಂದು ಲಕ್ಷ ಮೇಲ್ಪಟ್ಟ ಖರೀದಿಗೆ ಟೆಂಡರ್ ಕರೆಯಬೇಕಾಗಿದ್ದು, ಈ ನಿಯಮವನ್ನು ಪಾಲಿಸದೆ 2016/17ರಲ್ಲಿ 1271956 ರೂ ಹಾಗೂ 2017/18ರಲ್ಲಿ 684448 ರೂ . ಗಳಿಗೆ ವಿವಿಧ ಸರಬರಾಜುದಾರರಿಂದ ಬೀದಿ ದೀಪಗಳ ಸಾಮಗ್ರಿ , ಕುಡಿಯುವ ನೀರಿನ ಸಾಮಗ್ರಿಗಳನ್ನು ಖರೀದಿಸಿ ಕೆ.ಟಿ.ಟಿ.ಪಿ ನಿಯಮವನ್ನು ಗಾಳಿಗೆ ತೂರಿ ಲಕ್ಷಾಂತರ ರೂ ಅವ್ಯವಹಾರ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ