ಬೆಳಗಾವಿ
ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಅಸಹಕಾರದಿಂದಾಗಿ ಗುಣಾತ್ಮಕ ಚರ್ಚೆಗಳು ನಡೆಯುತ್ತಿಲ್ಲ. ಹೀಗಾಗಿ ಅಧಿವೇಶನ ನೀರಸವಾಗಿದೆ ಎಂದು ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುಎನ್ಐ ಕನ್ನಡ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಗುಣಾತ್ಮಕ ಚರ್ಚೆಗಳಾಗಲೀ, ರಾಜ್ಯದ ಅಭಿವೃದ್ಧಿ ಬಗ್ಗೆಯಾಗಲೀ ಅಧಿವೇಶನದಲ್ಲಿ ಯಾವುದೇ ಆಸಕ್ತಿದಾಯಕ ಚರ್ಚೆಯಾಗಿಲ್ಲ. ತುಂಬಾ ನಿರೀಕ್ಷೆಯೊಂದಿಗೆ ದೂರದ ಪ್ರದೇಶಗಳಿಂದ ಬಂದಿರರುವ ಶಾಸಕರು ಇದರಿಂದ ಬೇಸರಗೊಂಡಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬರದ ಮೇಲೆ ನಡೆದ ಚರ್ಚೆಗೆ ಅಧ್ಯಯನ ಪೂರ್ಣವಾದ ಉತ್ತರವನ್ನು ನೀಡಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಸ್ಮರಿಸಿದ ಶಾಸಕ ಹೆಚ್.ವಿಶ್ವನಾಥ್, ರೈತರು ಕೇವಲ ಸಾಲಮನ್ನಾ ಮಾತ್ರವಲ್ಲ, ಭೂ ಒಡೆತನ, ಪಹಣಿ, ಖಾತೆಯಂತಹ ಅನೇಕ ಸಮಸ್ಯೆಗಳಲ್ಲಿಯೂ ಸಿಲುಕಿದ್ದಾರೆ. ರೈತರ ಇಂತಹ ಸಮಸ್ಯೆಗಳ ಬಗ್ಗೆ ಯಾವ ಸಂಘಟನೆಗಳೂ ತಲೆ ಕೆಡಿಸಿಕೊಳ್ಳುವುದಿಲ್ಲ. ವಸ್ತುಸ್ಥಿತಿ ಹೀಗಿರುವಾಗ ರೈತರ ಸಮಸ್ಯೆ ಬಗೆಹರಿಯುವುದು ಹೇಗೆ ಎಂದು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
