ವೇದಿಕ್ ಜ್ಯೋತಿಷ್ಯ ಎನ್ನುವುದು ಮೂಢನಂಬಿಕೆಯಲ್ಲ : ವಿ.ಗೋಪಾಲಗೌಡ

ಬೆಂಗಳೂರು 

        ವೇದಿಕ್ ಜ್ಯೋತಿಷ್ಯ ಎನ್ನುವುದು ವಿಜ್ಞಾನವೇ ಹೊರತು ಮೂಢನಂಬಿಕೆಯಲ್ಲ. ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದ ಅಮೆರಿಕಾ, ಜಪಾನ್ ದೇಶದಿಂದ ಹಿಡಿದು ಕ್ರಾಂತಿಕಾರಿ ರಾಷ್ಟ್ರಗಳಾದ ರಷ್ಯಾ, ಚೀನಾ ದೇಶಗಳು ಸಹ ಇದನ್ನು ನಂಬಿವೆ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟಿದ್ದಾರೆ.

           ನಗರದ ಜೆ.ಎಸ್.ಎಸ್ ಕಾಲೇಜು ಸಭಾಂಗಣದಲ್ಲಿ ಡಿ.23 ರಿಂದ ನಡೆಯುತ್ತಿರುವ ಅಂತಾರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನದಲ್ಲಿ ಫೆರಿಡ ಯೋಗ ಮತ್ತು ಸಂಸ್ಕೃತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಬಳಿಕ ಮಾತನಾಡಿದ ಅವರು, ವೇದಿಕ್ ಜ್ಯೋತಿಷ್ಯಾಲಯದ ಶಕ್ತಿ ಅನನ್ಯ. ಭಾರತಕ್ಕೆ ವೇದಿಕ್ ಜ್ಯೋತಿಷ್ಯ ಅಪರಿಚಿತವೂ ಅಲ್ಲ. ಸೀಮಿತವೂ ಅಲ್ಲ. ಅತ್ಯಂತ ವ್ಯಾಪಕವಾಗಿದೆ. ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಈ ವಲಯಕ್ಕೆ ಪ್ರಾಮುಖ್ಯತೆ ದೊರೆತಿದೆ ಎಂದರು.

         ಯೋಗದಿಂದಲೇ ಋಷಿ ಮುನಿಗಳು, ಸಂತರು ನೂರಾರು ವರ್ಷಗಳ ಕಾಲ ಬದುಕಿದ್ದರು ಎನ್ನುವುದಕ್ಕೆ ದೇಶದ ಇತಿಹಾಸ ಸಾಕ್ಷಿಯಾಗಿದೆ. ಹದಿಯರೆಯದವರು ಹಲವಾರು ಸಮಸ್ಯೆಗಳಿಂದ ಪಾರಾಗಲು ಯೋಗ ಕಲಿಯುವುದು ಮುಖ್ಯ. ಹೀಗಾಗಿ ಯುವ ಸಮೂಹಕ್ಕೆ ಯೋಗ ಕಲಿಸಬೇಕು. ಆಪ್ತ ಸಮಾಲೋಚನೆ ಮಾಡುವ ಮೂಲಕ ಮಕ್ಕಳನ್ನು ತಂದೆತಾಯಿಗಳು ಆಪ್ತರನ್ನಾಗಿಸಿ ಕೊಳ್ಳಬೇಕು .ಹದಿಹರೆಯದವರ ಸಮಸ್ಯೆಗಳು ತಾಯಿಗೆ ಚೆನ್ನಾಗಿ ಗೊತ್ತಿರುತ್ತದೆ. ಈ ವಯಸ್ಸಿನಲ್ಲಿ ಆಗುವ ಅನಾಹುಗಳನ್ನು ತಪ್ಪಿಸಲು ಯೋಗ ಮತ್ತು ಆಪ್ತ ಸಮಾಲೋಚನೆ ಅತ್ಯಂತ ಮುಖ್ಯ ಎಂದರು.

        ಅಲೋಪತಿ ಔಷಧಿಗಿಂತ ಯೋಗ ಅಧಿಕ ರಕ್ತದೊತ್ತಡ ಮತ್ತು ಮದುಮೇಹ ಕಡಿಮೆ ಮಾಡುತ್ತದೆ. ಒತ್ತಡದಿಂದ ಮುಕ್ತರಾಗಲು ಯೋಗ ಅತ್ಯಂತ ಮಹತ್ವದ ಸಾಧನ. ದೇಹದ ಎಲ್ಲಾ ಅಂಗಾಂಗಳಿಗೂ ಯೋಗ ವೈಜ್ಞಾನಿಕವಾಗಿ ಕಸುವು ತುಂಬುತ್ತದೆ. ನ್ಯಾಯಮೂರ್ತಿಗಳು ಸಹ ಯೋಗಾಭ್ಯಾಸ ಮಾಡುತ್ತಾರೆ. ವಕೀಲರ ವಾದವನ್ನು ಆಲಿಸಿ ಯಾವುದು ನ್ಯಾಯ, ಅನ್ಯಾಯ, ಧರ್ಮ- ಅಧರ್ಮ ಎನ್ನುವುದನ್ನು ಪರಾಮರ್ಶಿಸಲು ಯೋಗ ಸಹಾಯಕವಾಗಿದೆ. ಮಾನವೀಯ ಸಂಬಂಧಗಳ ರಕ್ಷಣೆ ಮಾಡುವ ಜವಾಬ್ದಾರಿ ನ್ಯಾಯಮೂರ್ತಿಗಳ ಮೇಲಿದ್ದು, ಇಂತಹ ಉನ್ನತ ಸ್ಥಾನದಲ್ಲಿರುವ ನ್ಯಾಯಮೂರ್ತಿಗಳ ನೆರವಿಗೆ ಯೋಗ ಬರುತ್ತದೆ ಎಂದರು.

         ಯೋಗ ಕೇವಲ ವ್ಯಾಯಾಮವಲ್ಲ. ಇದೊಂದು ವಿಜ್ಞಾನ. ನ್ಯಾಯ, ಧರ್ಮ, ಸತ್ಯದ ಪರಮಾರ್ಶೆಗೆ ಯೋಗ ಸಹಕಾರಿಯಾಗುತ್ತದೆ. ಬುದ್ಧಿ ಅನ್ನುವುದು ದೇಹದಲ್ಲಿರುವುದಿಲ್ಲ. ಮನಸಿಗೆ ಸೀಮಿತ. ಬುದ್ಧಿ ಚುರುಕುಗೊಳ್ಳಲು ಯೋಗ ಮುಖ್ಯ. ವರನಟ ಡಾ.ರಾಜ್ ಕುಮಾರ್ ತಮ್ಮ ಇಳಿ ವಯಸ್ಸಿನಲ್ಲೂ ಯುವಕನಂತೆ ಕಾಣುತ್ತಿದ್ದರು. ಇದಕ್ಕೆ ಅವರು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಯೋಗ ಕಾರಣ ಎಂದು ನ್ಯಾಯಮೂರ್ತಿ ವಿ. ಗೋಪಾಲಗೌಡ ವಿಶ್ಲೇಷಿಸಿದರು. 

        ಮಹಾಭಾರತ ಧರ್ಮಪಾಲನೆಯ ಅಂಶಗಳು ಈಗಿನ ಸಂದರ್ಭಕ್ಕೆ ಅಗತ್ಯವಾಗಿವೆ. ಮಹಾಭಾರತವನ್ನು ಮತ್ತೆ ಪರಿಚಯಿಸುವ ಕೆಲಸಗಳು ಆಗಬೇಕು. ಈ ನಿಟ್ಟಿನಲ್ಲಿ ಚಿಂತಕರು ಆಲೋಚಿಸಬೇಕೆಂದು ಕರೆ ನೀಡಿದರು.

          ವೇದಿಕೆಯಲ್ಲಿ ಯೋಗ ಸಂಸ್ಕೃತ ವಿಶ್ವವಿದ್ಯಾಲಯ ಉಪಕುಲಪತಿ ಬಿ.ವಿ.ಕೆ.ಶಾಸ್ತ್ರಿ, ಜೆಎಸ್‍ಎಸ್ ಕಾಲೇಜು ಸಂಸ್ಥಾಪಕ ಪಟ್ಟಣ್ಣನವರ್, ದಾಸಸಾಹಿತ್ಯ ತಜ್ಣ ಕೀರ್ತಿ ಶಿಲ್ಪಾರಾಮ್, ಕೆಪಿಸಿಸಿ ಕಾರ್ಯದರ್ಶಿ, ಬಿ.ವಿ.ನರಸಿಂಹಯ್ಯ, ,ಡಾ.ಪ್ರಭಾಕರ ಕಶ್ಯಪ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link