ತಮಿಳು ನಾಡು ಸರ್ಕಾರದ ನಿಲುವಿಗೆ ಆಕ್ರೋಶ

ಚಿತ್ರದುರ್ಗ:

         ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

       ಪ್ರವಾಸಿಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ತಮಿಳುನಾಡು ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ಕಳೆದ ನಾಲ್ಕೈದು ವರ್ಷಗಳಿಂದಲೂ ಮೇಕೆದಾಟು ಯೋಜನೆ ತೀವ್ರ ಚರ್ಚೆಯಲ್ಲಿದ್ದು, ತಮಿಳುನಾಡು, ಗೋವಾ ರಾಜ್ಯಗಳಿಗೆ ಈ ಯೋಜನೆಯಿಂದ ಯಾವುದೇ ನಷ್ಟವಿಲ್ಲದಿದ್ದರೂ ವಿನಾಕಾರಣ ಕ್ಯಾತೆ ತೆಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

        5900 ಕೋಟಿ ರೂ.ವೆಚ್ಚದ ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಸಮಸ್ಯೆಗಳನ್ನು ನಿವಾರಿಸಿಕೊಂಡು ಕೇಂದ್ರ ಜಲ ಆಯೋಗದ ಅನುಮತಿಯನ್ನು ಪಡೆದಿದ್ದು, ವಿಸ್ತøತ ಯೋಜನಾ ವರದಿ ಸಿದ್ದಪಡಿಸಿ ಸಲ್ಲಿಸುವ ಕಾರ್ಯ ಪ್ರಗತಿಯಲ್ಲಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿಯೂ ಕರ್ನಾಟಕದೊಡನೆ ತಗಾದೆ ತೆಗೆಯುತ್ತಿರುವ ತಮಿಳುನಾಡು ಈಗ ಮೇಕೆದಾಟು ಯೋಜನೆಗೆ ಅಡ್ಡಗಾಲಾಗಿ ನಿಂತಿದೆ.

        ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ಬಂದರೆ ತಮಿಳುನಾಡಿಗೆ ಶೇ.90 ರಷ್ಟು ಅನುಕೂಲವಾಗಲಿದೆ. ನಮ್ಮ ರಾಜ್ಯದ ಜಾಗದಲ್ಲಿ ಅಣೆಕಟ್ಟೆ ನಿರ್ಮಿಸಿ ಸಂಗ್ರಹಿಸಿದ ನೀರನ್ನು ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡಿಗೆ ಕೊಡುತ್ತೇವೆ. ಅಲ್ಪ ಪ್ರಮಾಣದ ನೀರನ್ನು ಕುಡಿಯಲು ಬಳಕೆ ಮಾಡಿಕೊಳ್ಳುತ್ತೇವೆ. ಜೊತೆಗೆ ವಿದ್ಯುತ್ ಉತ್ಪಾದಿಸುವಷ್ಟೆ ಲಾಭವಾಗಲಿದೆ. ಅಣೆಕಟ್ಟಿನ ತಳಭಾಗವೆಲ್ಲವೂ ತಮಿಳುನಾಡಿಗೆ ಸೇರುವುದರಿಂದ ನಮ್ಮ ರಾಜ್ಯದ ರೈತರು ಕೃಷಿ ಮಾಡುವುದಾದರೂ ಹೇಗೆ ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.

         ಮೇಕೆದಾಟು ಯೋಜನೆ ಅನುಷ್ಟಾನದಿಂದ 4996 ಹೆಕ್ಟೇರ್ ಭೂಮಿ ಮುಳುಗಡೆಯಾಗಲಿದೆ. ಪ್ರಾಥಮಿಕ ವರದಿ ಪ್ರಕಾರ ಯೋಜನೆಗೆ 5916 ಕೋಟಿ ರೂ.ವೆಚ್ಚವಾಗಲಿದೆ. ಯಾವುದೇ ಸಂದರ್ಭದಲ್ಲೂ ತಮಿಳುನಾಡಿಗೆ ಅನ್ಯಾಯವಾಗುವುದಿಲ್ಲ. ಮುಳುಗಡೆಯಾಗುವ ಭೂಮಿ ಕರ್ನಾಟಕದ್ದು, ಎಂಬುದನ್ನು ಮೊದಲು ತಮಿಳುನಾಡು ಅರ್ಥಮಾಡಿಕೊಳ್ಳಬೇಕು.

         ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ವಕೀಲರು ಸುಪ್ರಿಂಕೋರ್ಟ್‍ನಲ್ಲಿ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಕಾಲತ್ತು ವಹಿಸಿ ಯೋಜನೆಗೆ ಕೋರ್ಟ್ ಮಧ್ಯಂತರ ತಡೆ ನೀಡದಂತೆ ನೋಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

          ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಡಿ.ಅಶ್ವಕ್‍ಆಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಸತೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಟಿ.ರಾಜೇಂದ್ರ, ಸಂತೋಷ್, ರಾಜೇಶ್ ಮದರಿ, ಡಿ.ಎನ್.ಸೌಭಾಗ್ಯ, ಶಿವಕುಮಾರ, ಮಾರುತಿ, ಕುಬೇರಪ್ಪ, ಟಿ.ಕೆ.ಮಂಜುನಾಥ್, ಶರತ್, ಅರುಣ್, ಶ್ರೀಧರ, ಎಸ್.ಗೋವಿಂದರಾಜು, ವೆಂಕಟೇಶ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link