ಹುಳಿಯಾರು
ಹುಳಿಯಾರು ಪಟ್ಟಣದ ವಿನಾಯಕ ಕಾಲನಿಯಲ್ಲಿ ಕಳೆದ ಆರು ತಿಂಗಳಿಂದ ಚರಂಡಿ ಕ್ಲೀನ್ ಮಾಡಿಲ್ಲ ಎಂದು ತರಕಾರಿ ರಾಮಣ್ಣ ಅವರು ಆರೋಪಿಸಿದರು.
ಕಳೆದ ಆರು ತಿಂಗಳ ಹಿಂದೆ ಇಲ್ಲಿನ ಚರಂಡಿಗಳನ್ನು ಸ್ವಚ್ಛ ಮಾಡಿ ಚರಂಡಿಯ ಕೊಳಚೆ ತ್ಯಾಜ್ಯವನ್ನು ಚರಂಡಿಯ ಪಕ್ಕದಲ್ಲಿ ಹಾಕಿ ಹೋದವರು ಇತ್ತ ಇದೂವರೆವಿಗೂ ತಿರುಗಿಯೂ ಸಹ ನೋಡಿಲ್ಲ. ತ್ಯಾಜ್ಯ ವಿಲೇವಾರಿ ಸಹ ಮಾಡದೆ ಹೋಗಿರುವ ಪರಿಣಾಮ ರಸ್ತೆಯ ತುಂಬೆಲ್ಲಾ ತ್ಯಾಜ್ಯ ಹರಡಿ ದಾರಿ ಹೋಕರಿಗೆ ದುರ್ನಾತ ಬೀರುತ್ತಿತ್ತು ಎಂದು ಆರೋಪಿಸಿದ್ದಾರೆ.
ಆರು ತಿಂಗಳಿಂದ ಚರಂಡಿ ಕ್ಲೀನ್ ಮಾಡದಿರುವುದರಿಂದ ಚರಂಡಿಯಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳ ಆಶ್ರಯತಾಣವಾಗಿದೆ. ಅಲ್ಲದೆ ಮನೆಯಲ್ಲಿ ವಾಸ ಮಾಡಲಾಗದಷ್ಟು ದುರ್ನಾತ ಬೀರುತ್ತಿದೆ. ಅಲ್ಲದೆ ಸೊಳ್ಳೆಗಳು ಮನೆಗೆ ನುಗ್ಗಿ ನಿದ್ರೆ ಮಾಡಲಾಗದಷ್ಟು ಉಪಟಳ ನೀಡುತ್ತಿದೆ ಎಂದು ವಿವರಿಸಿದರು.
ಈ ಬಗ್ಗೆ ಗ್ರಾಪಂ ಸದಸ್ಯರಿಗೆ ಹೇಳಿದರೆ ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿರುವ ಕಾರಣ ನಮ್ಮ ಮಾತು ಕೇಳುವವರಾರು ಇಲ್ಲದಾಗಿದ್ದು ನಾವು ಅಸಹಾಯಕರಾಗಿದ್ದೇವೆ ಎನ್ನುತ್ತಾರೆ. ಇನ್ನು ಎರಡ್ಮೂರು ತಿಂಗಳಿಗೊಬ್ಬರು ಮುಖ್ಯಾಧಿಕಾರಿಗಳು ಬದಲಾಗುತ್ತಿರುವುದರಿಂದ ಯಾರೂ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ.
ಇನ್ನಾದರೂ ಚರಂಡಿ ಸ್ವಚ್ಚತೆಗೆ ಮುಂದಾಗುವ ಜೊತೆಗೆ ಆರು ತಿಂಗಳಿಂದ ಚರಂಡಿ ಪಕ್ಕದಲ್ಲಿ ಹಾಕಿರುವ ಚರಂಡಿ ತ್ಯಾಜ್ಯವನ್ನು ವಿಲೆ ಮಾಡುವಂತೆ ಆವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
