ಬೆಂಗಳೂರು
ಪೊಲೀಸ್ ಮುಖ್ಯಪೇದೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ರೌಡಿ ತಬ್ರೇಜ್ ಅಲಿಯಾಸ್ ಬಿಲ್ವಾರ್ಗೆ ಕಾಡುಗೊಂಡನಹಳ್ಳಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಕೊಲೆಯತ್ನ, ಬೆದರಿಕೆ,ರಿಯಲ್ ಎಸ್ಟೇಟ್ ದಂಧೆ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ವಿನೋಬನಗರದ ತಬ್ರೇಜ್(27) ಕೈ ಹಾಗೂ ಕಾಲಿಗೆ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಂಧಿಸಲು ಹೋದಾಗ ಕೆಜಿ ಹಳ್ಳಿ ಠಾಣೆಯ ಮುಖ್ಯಪೇದೆ ಶಿವಕುಮಾರ್ ಅವರಿಗೆ ತಬ್ರೇಜ್ ಚಾಕುವಿನಿಂದ ಇರಿದಿದ್ದಾನೆ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಚಟ್ನಿ ಸಲೀಂ ಜೊತೆ ಸೇರಿ ರಿಯಲ್ ಎಸ್ಟೇಟ್ ಉದ್ಯಮಗಳನ್ನು ಬೆದರಿಸುತ್ತಿದ್ದ ತಬ್ರೇಜ್ ಅಪರಾಧ ಕೃತ್ಯವೊಂದರಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದನು. ಆತನ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.
ತಂಡದ ನೇತೃತ್ವ ವಹಿಸಿದ್ದ ಕೆಜಿ ಹಳ್ಳಿ ಪೆÇಲೀಸ್ ಇನ್ಸ್ಪೆಕ್ಟರ್ ಎಡ್ವಿನ್ ಪ್ರದೀಪ್ ಅವರಿಗೆ ತಬ್ರೇಜ್ ಹೆಚ್ಬಿಆರ್ ಲೇಔಟ್ನ ಅರಣ್ಯ ಇಲಾಖೆ ಕಚೇರಿಯ ಹಿಂಭಾಗ ಸೋಮವಾರ ಬೆಳಿಗ್ಗೆ 11ರ ವೇಳೆ ಅಡಗಿರುವ ಮಾಹಿತಿ ಬಂದಿದೆ.ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ತೆರಳಿದ ಎಡ್ವಿನ್ ಅವರು, ತಬ್ರೇಜ್ನನ್ನು ಬಂಧಿಸಲು ಮುಂದಾಗಿದ್ದಾರೆ. ತಬ್ರೇಜ್ನನ್ನು ಹಿಡಿಯಲು ಮುಖ್ಯಪೇದೆ ಶಿವಕುಮಾರ್ ಹೋಗಿದ್ದು, ಅವರಿಂದ ತಪ್ಪಿಸಿಕೊಳ್ಳಲು ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾರೆ.
ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಡ್ವಿನ್ ಅವರು ಸೂಚನೆ ನೀಡಿದರೂ, ಚಾಕು ಹಿಡಿದು ಪೊಲೀಸರತ್ತ ನುಗ್ಗಲು ಯತ್ನಿಸಿದ್ದಾನೆ. ಕೂಡಲೇ ಮತ್ತೆರಡು ಸುತ್ತು ಗುಂಡು ಹಾರಿಸಿದ್ದು, ಕೈ ಹಾಗೂ ಕಾಲಿಗೆ ಗುಂಡೇಟು ತಗುಲಿದ ತಬ್ರೇಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.ಆತನನ್ನು ವಶಕ್ಕೆ ಪಡೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ, ಸುಲಿಗೆ, ಬೆದರಿಕೆ, ಕೊಲೆಯತ್ನ ಸೇರಿದಂತೆ, 14ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ತಬ್ರೇಜ್ ಮೇಲೆ 11 ವಾರೆಂಟ್ಗಳಿವೆ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ತಬ್ರೇಜ್, ಚಟ್ನಿ ಸಲೀಂನ ಸಹಚರನಾಗಿದ್ದ. ಇತ್ತೀಚೆಗೆ ಚಟ್ನಿ ಸಲೀಂ ಮೇಲೆ ಗುಂಡಿನ ದಾಳಿ ನಡೆದಿತ್ತು.
ಕೆಜಿ ಹಳ್ಳಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ತಬ್ರೇಜ್ ಅಪರಾಧ ಕೃತ್ಯಗಳಿಂದ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದನು ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ರಾಹುಲ್ ಕುಮಾರ್ ಅವರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








