ಬೆಂಗಳೂರು
ಮದ್ಯ ಅಮಲಿನಲ್ಲಿ ಜಗಳ ಮಾಡಿಕೊಂಡು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಗಾರೆ ಕೆಲಸಗಾರನೊಬ್ಬನನ್ನು ಮರದ ರಿಪೀಸ್ನಿಂದ ತಲೆಗೆ ಹೊಡೆದು ಕೊಲೆಗೈದಿರುವ ಆರೋಪಿಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಒರಿಸ್ಸಾದ ನಯಾರ್ಗ್ ಮೂಲದ ಮಂಗುಲಾಲ್ ಜೀನಾ(45)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ.ಕೃತ್ಯವೆಸಗಿದ ಗಜೇಂದ್ರ(30)ನನ್ನು ಬಂಧಿಸಿರುವ ಕೊಡಿಗೇಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ
ಒರಿಸ್ಸಾದಿಂದ ಕೂಲಿ ಅರಸಿ ಬಂದಿದ್ದ ಮಂಗುಲಾಲ್ ಜೀನಾ ಹಾಗೂ ಗಜೇಂದ್ರ ಸೇರಿ ನಾಲ್ಕೈದು ಮಂದಿ ಬಳ್ಳಾರಿ ರಸ್ತೆಯ ಆಸ್ಟರ್ ಆಸ್ಪತ್ರೆಯ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು ಕಟ್ಟಡದಲ್ಲಿಯೇ ವಾಸಿಸುತ್ತಿದ್ದರು.
ಕಳೆದ ಜ.20ರಂದು ರಾತ್ರಿ 11.30ರ ವೇಳೆ ಮಂಗುಲಾಲ್ ಜೀನಾ ಹಾಗೂ ಗಜೇಂದ್ರ ಕುಡಿತದ ಅಮಲಿನಲ್ಲಿ ಕ್ಷುಲಕ ವಿಚಾರವಾಗಿ ಮಾಡಿಕೊಂಡ ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಗಜೇಂದ್ರ ಮರದ ರಿಫೀಸ್ನಿಂದ ಮಂಗುಲಾಲ್ ಜೀನಾ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ.
ನೆಲಕ್ಕೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ಜೀನಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಕೊಡಿಗೇಹಳ್ಳಿ ಪೊಲೀಸರು ಗಜೇಂದ್ರನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








