ತುಮಕೂರು
ತುಮಕೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಲಲಿತಾ ರವೀಶ್ (ಜೆಡಿಎಸ್) ಮತ್ತು ಉಪಮೇಯರ್ ಬಿ.ಎಸ್.ರೂಪಶ್ರೀ (ಕಾಂಗ್ರೆಸ್) ಅವರು ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಅಧಿಕೃತ ಕೊಠಡಿಗಳಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಕೊಠಡಿ ಪ್ರವೇಶಿಸಿ ತಮ್ಮ ಆಸನಗಳಲ್ಲಿ ಆಸೀನರಾಗಿ ತಮ್ಮ ಕಾರ್ಯಗಳನ್ನು ಆರಂಭಿಸಿದರು.
ಇದರೊಂದಿಗೆ ಗುರುವಾರ ಪಾಲಿಕೆ ಕಚೇರಿಯು ಚುನಾಯಿತ ಪ್ರತಿನಿಧಿಗಳಿಂದ ಮತ್ತೆ ರಂಗೇರಿತು. ಪಾಲಿಕೆಯ ಹಾಲಿ ಕಾರ್ಪೊರೇಟರ್ಗಳು ಹಾಗೂ ಕೆಲವು ಮಾಜಿ ಕಾರ್ಪೊರೇಟರ್ಗಳು ಆಗಮಿಸಿ ಈರ್ವರನ್ನೂ ಅಭಿನಂದಿಸಿದರು. ಪಾಲಿಕೆಯ ಆಯುಕ್ತ ಭೂಪಾಲನ್ ಮತ್ತು ಎಲ್ಲ ಅಧಿಕಾರಿ-ನೌಕರರು ಆಗಮಿಸಿ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು. ಎರಡೂ ಪಕ್ಷಗಳ ನೂರಾರು ಮುಖಂಡರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು, ವಿವಿಧ ಸಂಘಸಂಸ್ಥೆಗಳವರು ಆಗಮಿಸಿ ಅಭಿನಂದಿಸಿದರು. ಇದಕ್ಕೆ ಪ್ರತಿಯಾಗಿ ಈರ್ವರೂ ಬಂದವರಿಗೆಲ್ಲ ಹೂಮಾಲೆ ಹಾಕಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಮೇಯರ್ ಕೊಠಡಿಯಲ್ಲಿ ಬಂದವರಿಗೆಲ್ಲ “ಜಹಂಗೀರ್” ವಿತರಿಸಿದ್ದು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು. ಮೇಯರ್ ಮತ್ತು ಉಪಮೇಯರ್ ಅವರ ಕುಟುಂಬ ವರ್ಗದವರೂ ಸಂತೋಷದ ಸಂದರ್ಭವನ್ನು ಹಂಚಿಕೊಂಡರು.
ಮೊದಲನೇ ಕಾರ್ಯಕ್ರಮ
ಮೇಯರ್ ಮತ್ತು ಉಪಮೇಯರ್ ಅವರು ಅಧಿಕೃತವಾಗಿ ತಮ್ಮ ಕಾರ್ಯವನ್ನು ಆರಂಭಿಸಿದ ಬಳಿಕ ಮೊದಲನೇ ಕಾರ್ಯಕ್ರಮವಾಗಿ ಪಾಲಿಕೆ ಕಚೇರಿ ಆವರಣದಲ್ಲಿಯೇ ಏರ್ಪಟ್ಟಿದ್ದ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
