ಚಿತ್ರದುರ್ಗ :
ಬಿ.ಜೆ.ಪಿ. ಶಾಸಕ ಪ್ರೀತಂ ಗೌಡ ಮನೆ ಮೇಲೆ ಜೆ.ಡಿ.ಎಸ್. ಕಾರ್ಯಕರ್ತರು ದಾಳಿ ಮಾಡಿ ಗೂಂಡಾಗಿರಿ ನಡೆಸಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲೆ ಬಿ.ಜೆ.ಪಿ. ಘಟಕದಿಂದ ನಗರದ ಗಾಂಧಿಸರ್ಕಲ್ನಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿ.ಜೆ.ಪಿ. ವಿಭಾಗೀಯ ಸಹಪ್ರಭಾರಿ ಬಿ.ಎಂ.ಸುರೇಶ್ ಮಾತನಾಡಿ ರಾಜ್ಯದ 3 ಜಿಲ್ಲೆಗೆ ಸೀಮಿತವಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಕ್ಷಣೆ ಮಾಡಬೇಕಿರುವ ರಾಜ್ಯಸರ್ಕಾರವೇ ಗೂಂಡಾವರ್ತನೆ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ, ಜಾತ್ಯಾತೀತ ಜನತಾದಳ ಎನ್ನುವ ಬದಲು ದಂಗೆಕೋರರ ಪಕ್ಷ ಎನ್ನುವುದೇ ಸೂಕ್ತವಾದಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನದಲ್ಲಿ ಬಿ.ಜೆ.ಪಿ ಶಾಸಕರು ಒಬ್ಬರೇ ಇದ್ದಾರೆಂದು ತಿಳಿಯಬೇಡಿ. ದೇಶದ್ಯಾಂತ 1500ಕ್ಕೂ ಹೆಚ್ಚು ಬಿಜೆಪಿ ಶಾಸಕರಿದ್ದಾರೆಂದು ಅಪ್ಪ-ಮಕ್ಕಳ ಸರ್ಕಾರ ಮರೆಯಬಾರದು. ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ಕೇಸು ದಾಖಲಿಸಿ ತಕ್ಷಣವೇ ರಾಜೀನಾಮೆ ಕೊಡುವಂತೆ ಆಗ್ರಹಿಸಿದರು.
ಚಿತ್ರದುರ್ಗ ಲೋಕಸಭಾ ಚುನಾವಣಾ ಉಸ್ತುವಾರಿ ಟಿ.ಜಿ.ನರೇಂದ್ರನಾಥ್ ಮಾತನಾಡಿ ಬಹು ಹಿಂದಿನಿಂದಲೂ ದೇವೆಗೌಡ ಮತ್ತು ಅವರ ಮಕ್ಕಳು ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಸಮಾಜ ವಿರೋಧಿ ಹಿನ್ನೆಲೆಯುಳ್ಳವರ ಜೊತೆ ಕೈಜೋಡಿಸಿಕೊಳ್ಳುವುದು ಅವರ ಹೀನ ಚಾಳಿ, ಅವರ ವಿರುದ್ಧ ಯಾರೇ ಮಾತನಾಡಿದರೂ ಗೂಂಡಾಗಿರಿ, ಹಲ್ಲೆ ನಡೆಸುವುದು ಅವರ ಚಾಳಿಯಾಗಿದೆ. ಈ ಕೃತ್ಯದಿಂದ ಹಾಸನ ಜಿಲ್ಲೆಗೂ ಅವಮಾನ, ನಾಡಿನ ಜನತೆಗೂ ಅವಮಾನ ಮಾಡಿದಂತಾಗಿದೆ ಎಂದು ಹೇಳಿದರು.
ಸ್ಲಂ ಮೋರ್ಚಾ ರಾಜ್ಯ ಉಪಾದ್ಯಕ್ಷರಾದ ಸಿದ್ದೇಶ್ ಯಾದವ್ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಸಹಜವಾಗಿ ದೇವೆಗೌಡರಿಗೆ ವಯಸ್ಸಾಗಿದೆ, ಅವರ ನಂತರ ಪಕ್ಷ ಹೇಳ ಹೆಸರಿಲ್ಲದಂತಾಗುತ್ತದೆ. ಬಿಜೆಪಿ ಗೆ ಬನ್ನಿ ಎಂದು ಆಹ್ವಾನಿಸುವುದು ಸಹಜ ಅದರಲ್ಲಿ ತಪ್ಪೇನಿದೆ. ರಾಷ್ಟ್ರೀಯ ಪಕ್ಷಕ್ಕೆ ಬನ್ನಿ ಎಂದ ಶಾಸಕ ಪ್ರೀತಂಗೌಡ ರ ಬಗ್ಗೆ ಯಾರ್ರೀ ಎಂದು ಕೇಳಿರುವುದು ಅವರ ಘನತೆಗೆ ತಕ್ಕುದ್ದಲ್ಲ. ದೇವೆಗೌಡರಿಗೆ ಗೊತ್ತಿರುವುದು ಮಾತ್ರ ಅವರ ಕುಟುಂಬದ ಕುಡಿಗಳಾದ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ ಮಾತ್ರ. ರಾಜ್ಯದ ಜನತೆ ಅಪ್ಪ-ಮಕ್ಕಳ ಸರ್ಕಾರ ತೊಲಗಿದರೆ ಸಾಕು ಎಂದು ರಾಜ್ಯದ ಜನತೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ, ರತ್ನಮ್ಮ, ಜಿಲ್ಲಾ ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಖಜಾಂಚಿ ನರೇಂದ್ರ, ಶಿವಣ್ಣಚಾರ್, ವೆಂಕಟೇಶ್ ಯಾದವ್, ಜಿತೇಂದ್ರ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ರೇಖಾ, ಶ್ಯಾಮಲಾ ಶಿವಪ್ರಕಾಶ್, ಸಂಪತ್ಕುಮಾರ್, ರಂಗಸ್ವಾಮಿ, ಶಂಭು, ಚಂದ್ರಿಕಾ, ನಂದಿ ನಾಗರಾಜ್, ಲೋಕನಾಥ್, ನಗರಸಭಾ ಸದಸ್ಯ ಹರೀಶ್, ಯಶವಂತ್, ಅಸ್ಲಾಂ ಪಾಷ, ಸಾಗರ್, ವಿಜಯಕುಮಾರಿ ಮುಂತಾದವರು ಹಾಜರಿದ್ದರು.