ಚಿತ್ರದುರ್ಗ
ಕಾಶ್ಮೀರದಲ್ಲಿ ದೇಶದ ಯೋಧರನ್ನು ಮೋಸದಿಂದ ಹತ್ಯೆ ಮಾಡಿದ ಪಾಪಿಗಳಿಗೆ ದೇಶ ಎಂದೂ ಕ್ಷಮಿಸುವುದಿಲ್ಲ. ಈ ಕೃತ್ಯವನ್ನು ಇಡೀ ದೇಶ ಪಕ್ಷಬೇಧ ಮರೆತು ಖಂಡಿಸಿದೆ ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಹೇಳಿದರುನಗರದ ತ.ರಾ.ಸು. ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ಎಂದಿಗೂ ಇಂತಹ ಮೋಸದ ದಾಳಿಗೆ ಹೆದರುವುದಿಲ್ಲ. ನಮ್ಮ ಯೋಧರನ್ನು ಹತ್ಯೆ ಮಾಡಿದವರಿಗೆ ದೇಶ ಸೂಕ್ತ ಪಾಠ ಕಲಿಸಲಿದೆ. ಈ ಕೃತ್ಯವನ್ನು ದೇಶದ ನಾಗರೀಕರು ಖಂಡಿಸುವ ದಿನ ಇದಾಗಿದೆ. ದಾಳಿ ನಡೆಸಿದ ಉಗ್ರರಿಗೆ ತಕ್ಕ ಪಾಠ ಕಲಿಸಬೇಕಾಗಿದ್ದು, ಈ ವಿಚಾರದಲ್ಲಿ ಸರ್ಕಾರವನ್ನೂ ಒತ್ತಾಯಿಸುವುದಾಗಿಯೂ ಹೇಳಿದರು
ಸ್ವಂತ ಜೀವನಕ್ಕಾಗಿ ಆಸ್ತಿ ಮಾಡದೆ. ಬಡವರಿಗಾಗಿಯೆ ಶ್ರಮಿಸಿ ನಿಸ್ವಾರ್ಥ ಸೇವೆ ಮಾಡಿದ ಸಂತ ಸೇವಾಲಾಲ್ ರವರು ದಾರ್ಶನಿಕರಾಗಿದ್ದರಲ್ಲದೆ, ಮಹಾನ್ ಕಾಲಜ್ಞಾನಿಯೂ ಆಗಿದ್ದರು ತನ್ನ ಹಿತಕ್ಕಾಗಿ ಜೀವನ ನಡೆಸಿದವರಲ್ಲ್ಲ. ಪರರ ಕಷ್ಟಗಳಿಗೆ ಸ್ಪಂದಿಸುತ್ತ ಸದಾ ಅವರ ಸೇವೆಯಲ್ಲಿ ತೊಡಗಿ, ಜನರ ಜೀವನಕ್ಕೆ ಉತ್ತೇಜನ ನೀಡುತ್ತಾ ಬಂದ ಮಹಾನ್ ನಾಯಕರಲ್ಲಿ ಒಬ್ಬರಾಗಿದ್ದರು. ಇಂತಹ ಸತ್ಪುರುಷರ ಜೀವನ ಚರಿತ್ರೆಯನ್ನು ಈಗಿನ ಯುವ ಪೀಳಿಗೆಯು ಅರಿತು, ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಂಜಾರ(ಲಂಬಾಣಿ) ಸಮುದಾಯದಲ್ಲಿ ಬಡವರೇ ಹೆಚ್ಚಾಗಿದ್ದು, ಇವರು ಶ್ರಮಜೀವಿಗಳು. ಇದು ವಿಶಿಷ್ಟ ಕಲೆಗಳನ್ನು ಹೊಂದಿರುವ ತಳ ಸಮಾಜವಾಗಿದ್ದು. ಇಂದು ಸಂತ ಸೇವಾಲಾಲ್ ಜಯಂತಿಯನ್ನು ಸರ್ಕಾರ ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲು ಸಿದ್ದತೆ ಮಾಡಿಕೊಂಡಿತ್ತು, ಅದರೆ ಕಾಶ್ಮಿರದ ಅವಂತಿಪೋರಾದಲ್ಲಿ ಭಾರತದ ಸಿಆರ್ಪಿಎಫ್ನ ವೀರ ಯೋಧರು ಉಗ್ರರ ದಾಳಿಗೆ ಮೃತ ಪಟ್ಟಿದ್ದು, ಇಡೀ ದೇಶ ಸಂತಾಪ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸೇವಾಲಾಲ್ ಜಯಂತಿಯನ್ನು ಇಂದು ಸರಳವಾಗಿ ಆಚರಿಸಲಾಗುತ್ತಿದೆ ಎಂದರು. ನಮ್ಮ ದೇಶ ಮೋಸ ಮಾಡುವ ಕುತಂತ್ರ ದೇಶವಲ್ಲ ಅದರೆ ನಮ್ಮ ದೇಶಕ್ಕೆ ಮೋಸ ಮಾಡಿ ನಮ್ಮ ಯೋಧರನ್ನು ಬಲಿ ಪಡಿದಿದ್ದಾರೆ ನರಹಂತಕ ಉಗ್ರರು ಎಂದು ಸಂಸದರು ಬೇಸರ ವ್ಯಕ್ತ ಪಡಿಸಿದರು.
ಬಚ್ಚಬೋರನಹಟ್ಟಿ ಶಿಕ್ಷಕ ಮಂಜುನಾಥ ನಾಯ್ಕ್ ಮಾತನಾಡಿ ಬಂಜಾರ ಸಮುದಾಯ ನಾಲ್ಕನೇ ಶತಮಾನದಲ್ಲಿಯೇ ಅಸ್ತಿತ್ವದಲ್ಲಿತ್ತು ಎಂಬುದಾಗಿ ಇತಿಹಾಸದಿಂದ ತಿಳಿದುಬರುತ್ತದೆ. ಬಂಜಾರ ಜನಾಂಗವು ಯಾರಲ್ಲೂ ಭಿಕ್ಷೆ ಬೇಡದೆ ಮತ್ತು ಯಾರ ಮುಂದೆಯೂ ಕೈಚಾಚದೆ, ಸ್ವಂತ ಶ್ರಮದಿಂದ ಬದುಕು ಕಟ್ಟಿಕೊಂಡವರು. ಇವರು ಮೂಲತಃ ಸಿಂಧೂ ಪ್ರಾಂತ್ಯದಿಂದ ವಲಸೆ ಬಂದವರಾಗಿದ್ದು, ಇಂದು ವಿಶ್ವದಾದ್ಯಂತ ಬಂಜಾರ ಸಮುದಾಯ ನೆಲೆಸಿದೆ ಎಂದು ತಿಳಿಸಿದರು.
ಊಟದಲ್ಲಿ ಸಿಕ್ಕ ಒಂದು ಹುಣಸೆ ಬೀಜವನ್ನು ಭೂಮಿಗಿಟ್ಟು ಆ ಮರವು ದೊಡ್ಡದಾದಾಗ ಅದರ ಕೆಳಗೆ ನನ್ನ ಅಂತ್ಯ ಸಂಸ್ಕಾರ ಮಾಡಿ ಎಂದು ಅವರ ಹಿಂಬಾಲಕರಿಗೆ ಸೇವಾಲಾಲ್ ಸೂಚಿಸಿದ್ದರು. ಪ್ರತಿಯೊಂದು ಜೀವಿಯು ಸುರಕ್ಷಿತವಾಗಿರಲಿ ಎಂಬುದು ಸೇವಾಲಾಲ್ ರವರ ಆಶಯವಾಗಿತ್ತು. ಯಾರಿಗೂ ಕೆಟ್ಟದು ಮಾಡಬಾರದು, ಸೇಂದಿ ಸರಾಯಿ ಕುಡಿಯದೆ ಹಾಗೂ ದರೋಡೆ, ಕಳ್ಳತನ ಮಾಡದಂತೆ ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕು ಎಂದು ಜನರಲ್ಲಿ ಸಂದೇಶ ಸಾರಿದವರು ಸಂತ ಸೇವಾಲಾಲ್ ಅವರು ಎಂದು ಹೇಳಿದರು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಉದ್ಘಾಟಿಸಿದರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್. ರವೀಂದ್ರ, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ತಹಸಿಲ್ದಾರ್ ಕಾಂತರಾಜ್, ಕನ್ನಡ ಮತ್ತು ಸಂಸ್ಕತಿ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಬಂಜಾರ ಸಮುದಾಯದ ಮುಖಂಡರಾದ ಜಿ. ರಾಜಾನಾಯ್ಕ್, ನರೇನಹಳ್ಳಿ ಅರುಣ್ಕುಮಾರ್, ಲಿಂಗರಾಜು, ಆರ್. ನಿಂಗನಾಯ್ಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಗೀತಗಾಯನವನ್ನು ಚಿತ್ರದುರ್ಗದ ಟಿ. ಹಿಮಂತರಾಜು ಮತ್ತು ಸಂಗಡಿಗರು ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
