ಚಿತ್ರದುರ್ಗ:
ಲೋಕ ಕಲ್ಯಾಣಾರ್ಥವಾಗಿ ಹದಿನಾರು ಸೋಮವಾರ ವ್ರತ ಆಚರಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಂ.ವಿ.ವೀಣ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮನಸ್ಸಿನಲ್ಲಿ ಅಂದುಕೊಂಡಿರುವಂತೆ ನಿಶ್ಚಿತ ಫಲವನ್ನು ಹದಿನಾರು ಸೋಮವಾರ ವ್ರತ ಆಚರಿಸುವ ಮೂಲಕ ಈಡೇರಿಸಿಕೊಳ್ಳಬಹುದು. ಸಮೃದ್ದವಾಗಿ ಮಳೆ ಬೆಳೆ ಕರುಣಿಸಿ ಅನ್ನದಾತ ರೈತಾಪಿ ವರ್ಗಕ್ಕೆ ನೆಮ್ಮದಿ ಸಿಗಲಿ ನಾಡಿನ ಜನತೆಗೆ ಸುಖ ಶಾಂತಿ ನೆಲೆಸಲಿ ಎಂಬುದು ಹದಿನಾರು ಸೋಮವಾರ ವ್ರತದ ಉದ್ದೇಶವಾಗಿದೆ ಎಂದು ಹೇಳಿದರು.
ಮಾ.4 ರಂದು ಮಹಾಶಿವರಾತ್ರಿ ಹಬ್ಬವಿರುವುದರಿಂದ ಈ ವ್ರತ ಯಾವುದೇ ಜಾತಿಗಾಗಲಿ ಸೀಮಿತವಿಲ್ಲ. ಹೆಣ್ಣು ಗಂಡೆಂಬ ಬೇಧವಿಲ್ಲದೆ ಎಲ್ಲರೂ ಹದಿನಾರು ಸೋಮವಾರ ವ್ರತದಲ್ಲಿ ಪಾಲ್ಗೊಳ್ಳಬಹುದು. ಮಡಿ ಮೈಲಿಗೆಯಿಂದ ವ್ರತ ಆಚರಿಸಿದರೆ ಒಳ್ಳೆಯದಾಗಲಿದೆ. ಹದಿನೈದರಿಂದ ಇಪ್ಪತ್ತು ದಿನಗಳ ಹಿಂದಿನಿಂದಲೂ ವ್ರತಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಮೊದಲನೇ ಬಾರಿ 151 ಮಂದಿ ಶಿವನ ಭಕ್ತರು ಹದಿನಾರು ಸೋಮವಾರ ವ್ರತದಲ್ಲಿ ಭಾಗವಹಿಸಿದ್ದರು. ಈ ಬಾರಿ ಇನ್ನು ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಅಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯತನಕ ಪೂಜೆ ನಡೆಯಲಿದೆ. ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ವಿಜಯ ಮಾತನಾಡಿ ಗೊಡಬನಹಾಳ್ನ ಗಣೇಶ್ ಹದಿನಾರು ಸೋಮವಾರ ವ್ರತಕ್ಕೆ ಎರಡು ಸಾವಿರ ಲಿಂಗಗಳನ್ನು ತಯಾರಿಸಿದ್ದಾರೆ.
ವ್ರತದಲ್ಲಿ ಭಾಗವಹಿಸುವ ಭಕ್ತಾಧಿಗಳಿಗೆ ಹುತ್ತದ ಮಣ್ಣಿನಿಂದ ಮಾಡಿದ ಹದಿನಾರು ಲಿಂಗಗಳು, ಒಂದು ತೆಂಗಿನಕಾಯಿ, ಎರಡು ಬಾಳೆಹಣ್ಣು, ಮಣ್ಣಿನ ದೀಪ ಪೂಜಾ ಸಾಮಾಗ್ರಿಗಳಾದ ವಿಭೂತಿ, ಕುಂಕುಮ, ಅರಿಶಿನ, ಬತ್ತಿ ಎಣ್ಣೆ, ಊದುಬತ್ತಿ, ಕರ್ಪೂರ, ಗಂಧ, ಅಕ್ಷತೆ, ಅಂಗನೂಲು, ಒಂದು ಅಡಿಕೆ ತಟ್ಟೆ, ಎರಡು ಅಡಿಕೆ ಬಟ್ಟಲು, ಕಲ್ಲುಸಕ್ಕರೆ, ಅಗಸೆ, ದ್ರಾಕ್ಷಿ, ಶೇಂಗಾ, ಬಿಳಿಎಳ್ಳು, ಹೆಸರುಕಾಳು, ಹಸಿರು ಕಡ್ಲೆಕಾಳು, ತೊಗರಿ, ಲವಂಗ, ಕರಿಎಳ್ಳು, ತುಳಸಿ, ಬಿಲ್ವಪತ್ರೆ, ಬನ್ನಿಪತ್ರೆ, ಭತ್ತ, ಜೀರಿಗೆ, ಗೋಧಿ, ಏಳು ಪ್ಲಾಸ್ಟಿಕ್ ಹನ್ನೆರಡು ಇಂಚಿನ ಬಾಕ್ಸ್, ಒಂದು ಬಟ್ಟೆ ಬ್ಯಾಗ್, ಸೋಮವಾರ ವ್ರತದ ಪುಸ್ತಕ, ಗೋಧಿ ಪ್ರಸಾದ ನೀಡಲಾಗುವುದು ಎಂದು ಮಾಹಿತಿ ಕೊಟ್ಟರು.
ಸುನಿತಾ ಮಲ್ಲಿಕಾರ್ಜುನ್, ಮೋಕ್ಷರುದ್ರಸ್ವಾಮಿ, ಮಹಾಂತಮ್ಮ, ಮಹಡಿ ಶಿವಮೂರ್ತಿ, ರುದ್ರೇಶ್ ಐಗಳ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.