ದಾವಣಗೆರೆ:
ಪಾಕಿಸ್ತಾನ ಸೇನೆಯ ಸೆರೆಯಲ್ಲಿದ್ದ ಭಾರತೀಯ ವಾಯುಪಡೆ ವೀರ ಯೋಧ, ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಹಿನ್ನೆಲೆಯಲ್ಲಿ ಸುವರ್ಣ ಕರ್ನಾಟಕ ವೇದಿಕೆ ಕಾರ್ಯಕರ್ತರು ನಗರದ ನಿಟುವಳ್ಳಿಯಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಿದರು. ನಗರದ ನಿಟುವಳ್ಳಿಯ ಚಂದ್ರಪ್ಪ ಹೋಟೆಲ್ ಬಳಿ ಮುಖ್ಯರಸ್ತೆಯಲ್ಲಿ ವಿಜಯೋತ್ಸವ ಆಚರಿಸಿದ ಸಂಘಟನೆ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ವೀರ ಯೋಧ ಅಭಿನಂದನ್ ಪರವಾಗಿ ಘೋಷಣೆ ಮೊಳಗಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷಕುಮಾರ, ಶತೃ ರಾಷ್ಟ್ರ ಪಾಕಿಸ್ಥಾನದ ಯುದ್ಧ ವಿಮಾನ ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವೀರ ಯೋಧ ಅಭಿನಂದನ್ ವರ್ಧಮಾನ್ ಆಕಸ್ಮಿಕವಾಗಿ ಪಾಕ್ ನೆಲದಲ್ಲಿ ಇಳಿದಿದ್ದ ಕಾರಣ ಪಾಕ್ ಸೈನಿಕರು ಮತ್ತು ಅಲ್ಲಿಯ ಜನರು ಅಭಿನಂದನ್ ಅವರನ್ನು ಸರೆ ಹಿಡಿದು ದೈಹಿಕವಾಗಿ ಚಿತ್ರಹಿಂಸೆ ನೀಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ವಾಯುಪಡೆ ಪಾಕಿಸ್ತಾನದ ವಿರುದ್ಧವೇನು ಯುದ್ಧ ಘೋಷಿಸಿರಲಿಲ್ಲ. ನಮ್ಮ ದೇಶದ ರಕ್ಷಣೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನಮ್ಮ ವೀರ ಯೋಧ ಅಭಿನಂದನ್ ಪಾಕಿಸ್ಥಾನದಲ್ಲಿ ಇಳಿದು, ಗಾಯಗೊಂಡಿದ್ದರು. ಇಂತಹ ವೀರ ಯೋಧನ ಮೇಲೆ ಪಾಕಿಗಳು ಜಿನಿವಾ ಒಪ್ಪಂದವನ್ನೇ ಉಲ್ಲಂಘಿಸಿ, ಹಲ್ಲೆ ಮಾಡಿರುವುದು ಅತ್ಯಂತ ಹೇಯಕೃತ್ಯವಾಗಿದೆ ಎಂದು ಕಿಡಿಕಾರಿದರು.
ಕೊನೆಗೂ ಭಾರತದ ಸೇನೆಯ ತಾಕತ್ತು ಅರಿತು ಎಚ್ಚೆತ್ತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತೀಯ ವೀರ ಯೋಧನನ್ನು ಬಿಡುಗಡೆ ಮಾಡಿದ್ದಾರೆ. ಭಾರತದ ಪರ ಜಾಗತಿಕ ಮಟ್ಟದಲ್ಲಿ ಬಲಿಷ್ಟ ರಾಷ್ಟ್ರಗಳು ಬೆಂಬಲವನ್ನು ಸೂಚಿಸಿದ್ದು, ಭಾರತೀಯ ಯೋಧನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಎಲ್ಲೆಡೆ ಧ್ವನಿ ಕೇಳಿ ಬಂದಿದ್ದು ಈ ಬೆಳವಣಿಗೆಗೆ ಕಾರಣವಾಗಿದೆ ಎಂದರು.ವಿಜಯೋತ್ಸವದಲ್ಲಿ ವೇದಿಕೆಯ ಶ್ರೀನಿವಾಸ, ಮಂಜುನಾಥ, ಶಾಂತಕುಮಾರ, ಲೋಕೇಶ, ಎಚ್.ಆರ್.ದರ್ಶನ್, ಅನಿಲ್, ಕಣವೇಶ, ಎಲ್.ಸಂಜಯ್, ಆಸೀಫ್, ಚೇತನ್, ಕುಶಾಲ್ ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಿಟುವಳ್ಳಿ ನಿವಾಸಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
