ಚಿತ್ರದುರ್ಗ;
ಪ್ರಧಾನಮಂತ್ರಿಯವರ ಶ್ರಮ್ಯೋಗಿ ಮಾನ್-ಧನ್ ಯೋಜನೆಯು ಅಸಂಘಟಿತ ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸಲಿದ್ದು ಎಲ್ಲಾ ದೃಷ್ಟಿಯಿಂದಲೂ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹೇಳಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ಆಯೋಜಿಸಿದ್ದ ಪ್ರಧಾನ ಮಂತ್ರಿ ಶ್ರಮ್ಯೋಗಿ ಮಾನ್-ಧನ್ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ದೇಶವು 40 ರಿಂದ 45 ಕೋಟಿಯಷ್ಟು ಕಾರ್ಮಿಕರನ್ನು ಒಳಗೊಂಡಿದ್ದು, ಅದರಲ್ಲಿ 140 ವಿವಿಧ ಬಗೆಯ ಕಾರ್ಮಿಕ ಸಂಘಟನೆಗಳಿವೆ. ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ಸಮಯದಲ್ಲಿ ಅವರು ಮಾಸಿಕ ಪಿಂಚಣಿಯನ್ನು ಪಡೆಯುತ್ತಾರೆ. ಆದರೆ ಅಸಂಘಟಿತ ಕಾರ್ಮಿಕರು 60 ವರ್ಷ ವಯಸ್ಸಾದ ಮೇಲೆ ದುಡಿಯಲು ಶಕ್ತಿ ಇರುವುದಿಲ್ಲ, ಹಾಗಾಗಿ ಈ ಯೋಜನೆಯನ್ನು ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.
ಈ ಯೋಜನೆಯ ಲಾಭ ಪಡೆಯಲು ನೋಂದಣಿ ಮಾಡಿಸಿಕೊಂಡಲ್ಲಿ, ಅನಾರೋಗ್ಯ ಸಮಯದಲ್ಲಿ ಉಚಿತ ಚಿಕಿತ್ಸೆಗೆ ಅನುಕೂಲವಾಗಲಿದೆ. ಮುಪ್ಪಿನ ಕಾಲದಲ್ಲಿ ಕನಿಷ್ಠ 3 ಸಾವಿರ ರೂಗಳ ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕಾರ್ಮಿಕರು ಯಾರ ಆಶ್ರಯ ಪಡೆಯುವ ಅವಶ್ಯಕತೆ ಇರುವುದಿಲ್ಲ. ಇಂತಹ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿವೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ ಈ ಯೋಜನೆಯನ್ನು 18 ರಿಂದ 40 ವರ್ಷದೊಳಗಿನ ಹಾಗೂ 15 ಸಾವಿರ ವಾರ್ಷಿಕ ಆದಾಯ ಹೊಂದಿರುವ ಕಾರ್ಮಿಕರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕುಗಳಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ನೋಂದಾಣಿ ಮಾಡಿಕೊಳ್ಳಬಹುದು. ಸುಮಾರು 03 ರಿಂದ 15 ಸಾವಿರ ವರೆಗೆ ಮಾಸಿಕ ಪಿಂಚಣಿಯನ್ನು ಈ ಯೋಜನೆ ಮೂಲಕ ಪಡೆದುಕೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸತ್ಯಭಾಮ ಮಾತನಾಡಿ ಅಸಂಘಟಿತ ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಈ ಯೋಜನೆಯು ಕಾರ್ಮಿಕರ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ. ಇದರ ನೋಂದಣಿ ಮಾಡಿಸಿ ತಿಂಗಳಿಗೆ 55 ರಿಂದ 200 ರೂಗಳ ವರೆಗೆ ವಯಸ್ಸಿಗನುಗುಣವಾಗಿ ವಂತಿಕೆ ಪಾವತಿಸಿದರೆ, 60 ವರ್ಷ ವಯಸ್ಸಾದಲ್ಲಿ ಮಾಸಿಕ ಕನಿಷ್ಠ 3 ಸಾವಿರ ರೂಗಳನ್ನು ಫಲಾನುಭವಿಗಳು ಪಡೆಯಬಹುದಾಗಿ ಎಂದರು.
ಎಲ್ಲಾರು ಅಗತ್ಯವಾಗಿ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಿ. ಚುನಾವಣಾ ಹಿನ್ನೆಲೆಯಲ್ಲಿ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಣಿ ಆಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಳ್ಳಾರಿ ವಲಯದ ಭವಿಷ್ಯ ನಿಧಿ ಅಧಿಕಾರಿ ವಿನಾಯಕ ಪ್ರಾಸ್ತವಿಕವಾಗಿ ಮಾತನಾಡಿ ಯೋಜನೆಯ ಉದ್ದೇಶ ಮತ್ತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತರು ಮತ್ತು ವಿವಿಧ ಅಸಂಘಟಿತ ಕಾರ್ಮಿಕರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ 21 ಜನ ಕಾರ್ಮಿಕರು ನೋಂದಣಿ ಮಾಡಿಲಾಯಿತು. ಸುಮ ಎನ್, ನೇತ್ರಾವತಿ, ಪ್ರದೀಪ್ ಕುಮಾರ್ ಡಿ, ಮಂಗಳ, ಸುನೀತ, ಮಂಜುಳ ನಾಗರಾಜ್ ರವರಿಗೆ ಪ್ರಧಾನನಮಂತ್ರಿಯವರ ಶ್ರಮ್ಯೋಗಿ ಮಾನ್-ಧನ್ ಯೋಜನೆಯ ಕಾರ್ಡ್ಗಳನ್ನು ವಿತರಿಸಲಾಯಿತು.