ಬೆಂಗಳೂರು 
ಲಾರಿ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಬಾಲಕನೊಬ್ಬ ಮೃತಪಟ್ಟಿದ್ದಕ್ಕೆ ರೊಚ್ಚಿಗೆದ್ದು ಲಾರಿ ಚಾಲಕನನ್ನು ಕೊಲೆಗೈದಿದ್ದ ಆರು ಮಂದಿ ಆರೋಪಿಗಳನ್ನು ಕೃತ್ಯ ನಡೆದ ಕೇವಲ 24 ಗಂಟೆಗಳೊಳಗೆ ಬಂಧಿಸುವಲ್ಲಿ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅತ್ತಿಬೆಲೆಯ ನೆರಳೂರಿನ ರಾಕೇಶ್ (29), ಈಶ್ವರಿ (30), ವಿನಾಯಕ ನಗರದ ಆನಂದ್ ಕುಮಾರ್ (20), ಪ್ರಕಾಶ್. ಬಿ.ಕೆ. (19), ಪ್ರಮೋದ್ ಕುಮಾರ್ (19), ನೆರಳೂರಿನ ರವಿ (40) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಗ್ರಾಮಾಂತರ ಎಸ್.ಪಿ. ಶಿವಕುಮಾರ್ ಅವರು ತಿಳಿಸಿದ್ದಾರೆ
ಕಳೆದ ಮಾರ್ಚ್ 10 ರಂದು ಸಂಜೆ 4.30ರ ವೇಳೆ ಹೆಬ್ಬಗೋಡಿಯ ಅನಂತನಗರದಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿ, ಸ್ಕೂಟರ್ಗೆ ಡಿಕ್ಕಿ ಹೊಡೆದು ಸವಾರ ಸದಾಫ್ ಬುಕಾರಿ ಗಾಯಗೊಂಡು, ಅರ್ಹಾನ್ ಖಾನ್ ಎಂಬ 6 ವರ್ಷದ ಬಾಲಕ ಮೃತಪಟ್ಟಿದ್ದ.
ಅಪಘಾತವನ್ನು ನೋಡಿದ ಸ್ಥಳೀಯರು, ಲಾರಿ ಚಾಲಕ ಉತ್ತರ ಪ್ರದೇಶದ ಮೂಲದ ರಾಧೆ ಶ್ಯಾಮ್ನನ್ನು ಹಿಡಿದುಕೊಂಡಿದ್ದು, ಬಂಧಿತ ಆರು ಮಂದಿ ಆರೋಪಿಗಳು, ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಹೆಬ್ಬಗೋಡಿ ಪೊಲೀಸರು, ಗಾಯಗೊಂಡಿದ್ದ ರಾಧೆ ಶ್ಯಾಮ್ನನ್ನು ನಾರಾಯಣ ಹೃದಯಾಲಯಕ್ಕೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ, ಮೃತಪಟ್ಟಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಹೆಬ್ಬಗೋಡಿ ಪೊಲೀಸರು, ಕೇವಲ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








