ಬೆಂಗಳೂರು
ಪತಿ ತೊರೆದಿದ್ದರಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ತಾಯಿ, ತನ್ನ ಇನ್ನಿಬ್ಬರು ಮದುವೆಗೆ ಬಂದ ಅಂಗವಿಕಲ ಮಕ್ಕಳಿಗೆ ವಿಷ ನೀಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಎಲೆಕ್ಟ್ರಾನಿಕ್ ಸಿಟಿಯ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬೇಗೂರಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ತನ್ನ ಅಂಗವಿಕಲ ಮಕ್ಕಳಾದ ಹರೀಶ್ (28) ಹಾಗೂ ಸಂತೋಷ್ಗೆ ವಿಷ ನೀಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯನ್ನು ದೊಡ್ಡಬೇಗೂರಿನ ರಾಧಮ್ಮ (50) ಎಂದು ಗುರುತಿಸಲಾಗಿದೆ.
ರಾಧಮ್ಮ ಅವರ ಪತಿ ದಶರಥ ರೆಡ್ಡಿ ಅವರು ಕೆಲವು ವರ್ಷಗಳ ಹಿಂದೆ ಪತ್ನಿಯನ್ನು ತೊರೆದು ಹೋಗಿದ್ದು, ಇಬ್ಬರು ಮಕ್ಕಳ ಜೊತೆ ರಾಧಮ್ಮ ಮನೆ ಬಾಡಿಗೆಯಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದರು.
ಅಂಗವಿಕಲ ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಾಗಿರಲಿಲ್ಲ ಅಲ್ಲದೆ, ಪತಿಯು ಬಿಟ್ಟುಹೋಗಿದ್ದರಿಂದ ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರಾಧಮ್ಮ ಅದೇ ನೋವಿನಲ್ಲಿ ಡೆತ್ ನೋಟ್ ಬರೆದಿಟ್ಟು ರಾತ್ರಿ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ನೀಡಿ, ತಾನೂ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಗೆ ಬೆಳಿಗ್ಗೆ ಹಾಲು ಹಾಕಲು ಬಂದಿದ್ದ ಯುವಕನೊಬ್ಬ ಬಾಗಿಲು ಬಡಿದು ನೋಡಿದ್ದು, ಹಲವು ಬಾರಿ ಬಡಿದರೂ ಬಾಗಿಲು ತೆರೆಯದಿದ್ದರಿಂದ ಆತಂಕಗೊಂಡು ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಎಲ್ಲರೂ ಸೇರಿ ಕಿಟಕಿ, ಬಾಗಿಲು ತೆಗೆದು ನೋಡಿದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಇಶಾಪಂಥ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








