ಅಕ್ರಮ ಸಂಬಂಧಕ್ಕೆ ಅಡ್ಡಿ : ಪತಿಯನ್ನೆ ಕೊಂದ ಪತ್ನಿ..!!!

ಬೆಂಗಳೂರು

     ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಬಾಯಿ, ಮೂಗು ಮುಚ್ಚಿ ಗಟ್ಟಿಯಾಗಿ ಹಿಡಿದುಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿ ಸಹಜ ಸಾವು ಎನ್ನುವಂತೆ ಬಿಂಬಿಸಿ ತಪ್ಪಿಸಿಕೊಂಡಿದ್ದ ಪತ್ನಿ ಹಾಗೂ ಪ್ರಿಯಕರ ಬರೋಬರಿ 1 ವರ್ಷದ ನಂತರ ಸೋಲದೇವನಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

     ಕಳೆದ 2018ರ ಫೆಬ್ರವರಿ 25 ರಂದು ಪತಿ ಕೊಲೆ ಮಾಡಿದ್ದ ಪತ್ನಿ ಹೆಸರುಘಟ್ಟದ ದಾಸೇನಹಳ್ಳಿಯ ಸುಖಿತ (30) ಹಾಗೂ ಪ್ರಿಯಕರ ಶ್ರೀನಿವಾಸ್ (31)ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

      ಗಾರೆ ಕೆಲಸ ಮಾಡುತ್ತಿದ್ದ ಉಮಾಶಂಕರ್‍ನನ್ನು 10 ವರ್ಷಗಳ ಹಿಂದೆ ವಿವಾಹವಾಗಿದ್ದ ಸುಖಿತಾಗೆ ಇಬ್ಬರು ಮಕ್ಕಳಿದ್ದು ದಾಸೇನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸುಖಿತಾ – ಉಮಾಶಂಕರ್ ದಂಪತಿ ವಾಸಿಸುತ್ತಿದ್ದರು.ಎರಡು ವರ್ಷಗಳ ಹಿಂದೆ ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಕಾರು ಚಾಲಕ ಶ್ರೀನಿವಾಸ್ ಜೊತೆ ಪರಿಚಯವಾಗಿದ್ದ ಸುಖಿತ, ಆತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು.

      ದಿನ ಕಳೆದಂತೆ, ಅನೈತಿಕ ಸಂಬಂಧದ ವಿಷಯ ಪತಿ ಉಮಾಶಂಕರ್‍ಗೆ ಗೊತ್ತಾಗಿ ಜಗಳ ಮಾಡತೊಡಗಿದ್ದು, ಶ್ರೀನಿವಾಸ್ ಜೊತೆ ಸಂಬಂಧ ಕಡಿದುಕೊಳ್ಳುವಂತೆ ಜಗಳ ಮಾಡುತ್ತಿದ್ದ. ಆದರೂ ಆಕೆಯ ವರ್ತನೆ ಸರಿಹೋಗಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಪತಿ ಮಲಗಿದ್ದಾಗ ಚಕ್ಕಂದ

      ಕಳೆದ 2018ರ ಫೆಬ್ರವರಿ 25 ರಂದು ರಾತ್ರಿ ಉಮಾಶಂಕರ್ ಕುಡಿದುಬಂದು ಮಲಗಿದ್ದು, ಮಕ್ಕಳೂ ಕೂಡ ಬೇರೆ ಕೊಠಡಿಯಲ್ಲಿ ಮಲಗಿದ್ದರು. ಈ ವೇಳೆ ಸುಖಿತ, ಶ್ರೀನಿವಾಸ್‍ನನ್ನು ಮನೆಗೆ ಕರೆಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು.ಶಬ್ಧ ಕೇಳಿ ಎಚ್ಚರಗೊಂಡ ಉಮಾಶಂಕರ್, ಜಗಳಕ್ಕೆ ಮುಂದಾಗುತ್ತಲೇ ಆತನನ್ನು ಇಬ್ಬರು ಹಿಡಿದು ಮೂಗು, ಬಾಯಿ ಗಟ್ಟಿಯಾಗಿ ಹಿಡಿದುಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಶ್ರೀನಿವಾಸ್ ಅಲ್ಲಿಂದ ಹೊರಟುಹೋಗಿದ್ದ.

       ಮರುದಿನ ಬೆಳಿಗ್ಗೆ ಸುಖಿತ ನಾಟಕವಾಡಿ ಕುಡಿದ ಅಮಲಿನಲ್ಲಿ ಪತಿ ಉಮಾಶಂಕರ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಿ ಅಂತ್ಯಕ್ರಿಯೆಗೆ ಮುಂದಾಗಿದ್ದಳು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸೋಲದೇವನಹಳ್ಳಿ ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತುಗಳಾಗಲಿ, ಕತ್ತು ಹಿಸುಕಿರುವ ಕಲೆಗಳಾಗಲಿ ಇರಲಿಲ್ಲ. ಇದೊಂದು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿ ಮೃತದೇಹವನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಶವವನ್ನು ಪತ್ನಿಗೆ ನೀಡಿದ್ದರು.

ಚಿಕ್ಕಪ್ಪನ ಸಂಶಯ

     ಈ ನಡುವೆ ಮೃತ ಉಮಾಶಂಕರ್ ಅವರ ಚಿಕ್ಕಪ್ಪ ಅಶ್ವತ್ಥಪ್ಪ ಎನ್ನುವವರು ಪೊಲೀಸರಿಗೆ ದೂರು ನೀಡಿ, ಉಮಾಶಂಕರ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಉಮಾಶಂಕರ್ ಮೃತದೇಹದ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಅನುಮಾನ ವ್ಯಕ್ತಪಡಿಸಿ, ಮೃತನ ಜಠರ ರಸ (ವಿಸೆರಾ) ವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

     ಕೆಲದಿನಗಳ ಹಿಂದೆ ವರದಿ ಬಂದಿದ್ದು, ವರದಿಯನ್ನು ಆಧರಿಸಿ ತನಿಖೆಯನ್ನು ಚುರುಕುಗೊಳಿಸಿದ ಸೋಲದೇವನಹಳ್ಳಿ ಪೆÇಲೀಸ್ ಇನ್ಸ್‍ಪೆಕ್ಟರ್ ವೆಂಕಟೇಗೌಡ, ಮತ್ತವರ ಸಿಬ್ಬಂದಿ, ಸುಖಿತಾಳ ಮೊಬೈಲ್ ಕರೆಗಳನ್ನು ಪರಿಶೀಲಿಸಿ ಆಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪ್ರಿಯಕರ ಶ್ರೀನಿವಾಸ್ ಜೊತೆ ಸೇರಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link